ತೊಕ್ಕೊಟ್ಟು: ಒಳ ಚರಂಡಿಗೆ ಬಿದ್ದು ಲಾರಿ ಪಲ್ಟಿ; ಕ್ಲೀನರ್ ಮೃತ್ಯು
ಟ್ರಾಫಿಕ್ ಪೊಲೀಸರ ವಿರುದ್ಧ ಸಾರ್ವಜನಿಕರಿಂದ ಹೆದ್ಧಾರಿ ತಡೆ

ಕೊಣಾಣೆ, ಡಿ. 18: ರಾಷ್ಟ್ರೀಯ ಹೆದ್ದಾರಿ ತೊಕ್ಕೊಟು ಬಳಿ ಮಂಗಳೂರು ಕಡೆಯಿಂದ ಉಳ್ಳಾಲಕ್ಕೆ ಸಂಚರಿಸುತ್ತಿದ್ದ ಲಾರಿಯೊಂದನ್ನು ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಲೆತ್ನಿಸಿದರು ಎನ್ನಲಾಗಿದ್ದು, ಈ ವೇಳೆ ಲಾರಿಯ ಹಿಂದಿನ ಚಕ್ರ ಚರಂಡಿಗೆ ಬಿದ್ದು ಲಾರಿ ಪಲ್ಟಿಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಲಾರಿ ಕ್ಲೀನರ್ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಶಿಕಾರಿಪುರ ಮೂಲದ ವಸಂತ ಕುಮಾರ್ (25) ಮೃತರು.
ಮೂಡಬಿದಿರೆಯಿಂದ ಉಳ್ಳಾಲದ ಫಿಶ್ಮಿಲ್ಗೆ ಕಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನುವ ತೊಕ್ಕೊಟ್ಟು ಜಂಕ್ಷನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಟ್ರಾಫಿಕ್ ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದು, ಈ ಸಂದರ್ಭ ಲಾರಿ ಚಾಲಕ ಜಯಪೂಜಾರಿ ಲಾರಿಯನ್ನು ತೊಕ್ಕೊಟ್ಟು ಹಳೇ ಚೆಕ್ಪೋಸ್ಟ್ ನ ಕಿರಿದಾದ ರಸ್ತೆಯ ಬದಿಯಲ್ಲಿ ನಿಲ್ಲಿಸಲು ಹೋದಾಗ ಹಿಂಭಾಗದ ಚಕ್ರವು ಚರಂಡಿಗೆ ಬಿದ್ದು ಲಾರಿ ಉರುಳಿದೆ. ಈ ಸಂದರ್ಭ ಲಾರಿಯೊಳಗಿದ್ದ ವಸಂತ ಕುಮಾರ್ ಬೆದರಿ ಹಾರಲು ಯತ್ನಿಸಿದಾಗ ಅವರು ಲಾರಿಯಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹೆದ್ದಾರಿ ದುರವಸ್ಥೆ ಹಾಗೂ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ: ಹೆದ್ದಾರಿ ತಡೆ
ಘಟನೆಯಿಂದಾಗಿ ರೊಚ್ಚಿಗೆದ್ದ ಸಾರ್ವಜನಿಕರು ತೊಕ್ಕೊಟ್ಟುವಿನ ನಿರ್ಮಾಣ ಹಂತದ ಮೇಲ್ಸೇತುವೆ ಕಾಮಗಾರಿ, ಹೆದ್ದಾರಿ ದುರವಸ್ಥೆ ಹಾಗೂ ಟ್ರಾಫಿಕ್ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಉಮಾಕಾಂತ್, ಎಸಿಪಿಗಳಾದ ಮಂಜುನಾಥ್ ಶೆಟ್ಟಿ, ರಾಮರಾವ್, ಉಳ್ಳಾಲ ಇನ್ಸ್ಪೆಕ್ಟರ್ ಗೋಪಿಕೃಷ್ಣ ಅವರು ಹರಸಾಹಸ ಪಟ್ಟು ಪ್ರತಿಭಟನಾಕಾರರ ಮನವೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಟ್ರಾಫಿಕ್ ಕಾರ್ಯಾಚರಣೆ ವಿರುದ್ಧ ಆಕ್ರೋಶ
ತೊಕ್ಕೊಟ್ಟುವಿನಲ್ಲಿ ನೆನೆಗುದಿಗೆ ಬಿದ್ದಿರುವ ಮೇಲ್ಸೇತುವೆ ಕಾಮಗಾರಿಯಿಂದಲೇ ಜನರು ರೋಸಿ ಹೋಗಿದ್ದು, ಅದರ ನಡುವೆ ಇಂತಹ ಕಿರಿದಾಗ ಇಕ್ಕಟ್ಟಿನ ಸ್ಥಳಗಳಲ್ಲಿ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಡೆದು ನಿಲ್ಲಿಸಿ ಕೇಸ್ ಹಾಕುತ್ತಿದ್ದಾರೆ ಎಂಬ ಆರೋಪವೂ ಪ್ರತಿಭಟನಕಾರರಿಂದ ಕೇಳಿ ಬಂದಿದೆ, ಅಲ್ಲದೆ ಕೊಲ್ಯ ಕಾಪಿಕಾಡು ಸರ್ವಿಸ್ ರಸ್ತೆ ನಿರ್ಮಾಣವಾಗದೆ ಇರುವ ಕಾರಣ ವಾಹನ ಸವಾರರು ಈ ಪ್ರದೇಶದಲ್ಲಿ ಬಹಳಷ್ಟು ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದಾರೆ, ಅಲ್ಲದೆ ಸರ್ವಿಸ್ ರಸ್ತೆ ಮಾಡಿಕೊಡದ ನವಯುಗ ಕಂಪೆನಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸದ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.