ಉಡುಪಿ: ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ ಆ್ಯಪ್ ಬಿಡುಗಡೆ

ಉಡುಪಿ, ಡಿ.18: ಸಣ್ಣ ಸಣ್ಣ ಕೆಲಸವನ್ನು ಪ್ರಾಮಾಣಿಕವಾಗಿ ನಿಸ್ವಾರ್ಥತೆ ಯಿಂದ ಮಾಡಿದರೆ ಅದೇ ದೊಡ್ಡ ಸಾಧನೆ. ಜೀವನದಲ್ಲಿ ಸಂತೋಷವನ್ನು ಬಯಸುವುದಾದರೆ ಪರರಿಗೆ ಸಹಾಯ ಮಾಡಬೇಕು ಎಂದು ಉಡುಪಿ ಕ್ರೈಸ್ತ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಡಾ. ಜೆರಾಲ್ಡ್ ಐಸಾಕ್ ಲೋಬೋ ಹೇಳಿದ್ದಾರೆ.
ಭಾರತೀಯ ಕ್ಯಾಥೋಲಿಕ್ ಯುವ ಸಂಚಾಲನದ ವತಿಯಿಂದ ಜಿಲ್ಲೆಯ ರಕ್ತದಾನಿಗಳನ್ನು ಸಂಘಟಿಸುವ ಹಾಗೂ ಸಂಪರ್ಕಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ‘ರೆಡ್ರಾಪ್ ಆ್ಯಪ್’ನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಆಧುನಿಕ ತಂತ್ರಜ್ಞಾನಗಳನ್ನು ಸದುಪಯೋಗ ಮಾಡಿಕೊಳ್ಳುವ ಉನ್ನತ ಧ್ಯೇಯವನ್ನು ಸಂಘಟನೆ ಹೊಂದಿರುವುದು ಶ್ಲಾಘನೀಯ. ಹೊಸ ಹೊಸ ಚಿಂತನೆಗಳು ಜಿಲ್ಲೆಯಲ್ಲಿ ಆರಂಭವಾಗಿದ್ದು, ಆಪತ್ಕಾಲದಲ್ಲಿ ಕಷ್ಟ ಪರಿಹರಿಸುವ ಕಾರ್ಯ ಇನ್ನಷ್ಟು ವ್ಯಾಪಿಸಲಿ ಎಂದು ಹಾರೈಸಿದರು.
ಲಯನ್ಸ್ ಜಿಲ್ಲಾ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ತುರ್ತು ಅಗತ್ಯವಿರುವವರಿಗೆ ರಕ್ತ ಶೀಘ್ರದಲ್ಲಿ ದೊರೆಯುವಂತೆ ಮಾಡಿ ಪ್ರಾಣ ಉಳಿಸುವ ಕೆಲಸ ಉಳಿದವರಿಗೆ ಮಾದರಿ ಹಾಗೂ ಶ್ಲಾಘನೀಯವಾಗಿದೆ ಎಂದರು.
ಜೆಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು, ಆರೋಗ್ಯ ಆಯೋಗದ ನಿರ್ದೇಶಕ ಎಡ್ವರ್ಡ್ ಲೋಬೋ, ಐಸಿವೈಎಂ ಜಿಲ್ಲಾಧ್ಯಕ್ಷ ಡಿಯಾನ್ ಡಿಸೋಜ, ಲೆಸ್ಲಿ ಅರೋಜಾ, ಅಲ್ಫೋನ್ಸಾ ಡಿಕೋಸ್ತಾ, ಅಲ್ವಿನ್ ಕ್ವಾಡ್ರಸ್, ಜನೆಟ್ ಬರ್ಬೋಜಾ, ಎಡ್ವಿನ್ ಡಿಸೋಜಾ ಉಪಸ್ಥಿತರಿದ್ದರು.