ರಾಜಸ್ಥಾನ: ಭಾಜಪ ಸೋಲಿಗೆ ಕಾರಣವಾದ ಆಡಳಿತ ವೈಖರಿ!

ಕಳೆದ ಐದು ವರ್ಷಗಳಿಂದ ರಾಜಸ್ಥಾನದಲ್ಲಿ ಆಡಳಿತ ನಡೆಸುತ್ತಿದ್ದ ಭಾಜಪದ ಶ್ರೀಮತಿ ವಸುಂಧರಾ ರಾಜೇಯವರ ಸರಕಾರ ಈ ಬಾರಿ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ಗೆ ಅಧಿಕಾರ ವಹಿಸಿಕೊಟ್ಟಿದೆ. ಚುನಾವಣೆಗೂ ಮೊದಲು ಬಿಡುಗಡೆಯಾದ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನದ ಸಂಜೆ ದೊರೆತ ಎಕ್ಸಿಟ್ ಪೋಲ್ ಸಹ ಭಾಜಪ ಸರಕಾರದ ಸೋಲನ್ನು ಖಚಿತ ಪಡಿಸಿದ್ದವು. ಎಲ್ಲರೂ ಭಾಜಪ ಸೋಲಬಹುದೆಂದೇನೊ ನುಡಿದಿದ್ದರೂ ಅದು ಈ ಮಟ್ಟಿಗೆ ಸೋಲುತ್ತದೆಯೆಂಬ ನಿರೀಕ್ಷೆ ಇರಲಿಲ್ಲ. ಯಾಕೆಂದರೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟ 200 ಸ್ಥಾನಗಳ ಪೈಕಿ 163ರಲ್ಲಿ ಭಾಜಪ ಗೆದ್ದಿದ್ದರೆ, ಕಾಂಗ್ರೆಸ್ 21ರಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿತ್ತು. ಅಷ್ಟು ಬಲಿಷ್ಠವಾಗಿ ಹೊರಹೊಮ್ಮಿದ್ದ ಭಾಜಪ ಇವತ್ತು ಕೇವಲ ಐದೇ ವರ್ಷಗಳಲ್ಲಿ ಕಾಂಗ್ರೆಸ್ನೆದುರು ಮಂಡಿಯೂರಿದೆ. ಈ ಬಾರಿ ಚುನಾವಣೆ ನಡೆದ 199 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 99 ಸ್ಥಾನವನ್ನು, ಭಾಜಪ 73 ಸ್ಥಾನಗಳನ್ನು ಗೆದ್ದಿವೆ. ಇನ್ನು ಯಥಾ ಪ್ರಕಾರ ಇಲ್ಲಿ ಅಷ್ಟೇನು ಪ್ರಭಾವಶಾಲಿಯಲ್ಲದ ಬಹುಜನ ಪಕ್ಷ 6 ಸ್ಥಾನಗಳನ್ನೂ ಪಡೆದಿದೆ. ಇರಲಿ, ಈಗ ನಾವು ರಾಜಸ್ಥಾನದಲ್ಲಿನ ಭಾಜಪ ಸೋಲಿಗೆ ಕಾರಣವಾದ ಅಂಶಗಳನ್ನು ನೋಡೋಣ:
1.ಆಡಳಿತ ವಿರೋಧಿ ಅಲೆ.
ಐದು ವರ್ಷ ಆಡಳಿತ ನಡೆಸಿದ ಯಾವುದೇ ಸರಕಾರಗಳನ್ನು ಕಾಡುವ ಆಡಳಿತ ವಿರೋಧಿ ಅಲೆ ಶ್ರೀಮತಿ ರಾಜೇಯವರ ಸರಕಾರವನ್ನು ಕಾಡಿದ್ದು ನಿಜ. ಆದರೆ ಈ ವಿರೋಧಿ ಅಲೆ ಸೃಷ್ಟಿಯಾಗಲು ರಾಜೇಯವರು ಆಡಳಿತ ನಡೆಸಿದ ರೀತಿಯೇ ಕಾರಣವಾಗಿದೆ.
2.ತೀವ್ರಗೊಂಡ ಕೃಷಿ ಬಿಕ್ಕಟ್ಟು.
ದೇಶದ ಬಹುತೇಕ ರಾಜ್ಯಗಳಂತೆ ಇಲ್ಲಿಯೂ ರೈತರು ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದರು. ಮೊದಲೇ ಕಡಿಮೆ ಇರುವ ಕೃಷಿ ಭೂಮಿ ಮತ್ತು ನೀರಾವರಿಯ ಕೊರತೆ ರೈತರ ಬವಣೆಯನ್ನು ಹೆಚ್ಚು ಮಾಡುತ್ತಾ ಹೋಗಿತ್ತು. ಈ ಸರಕಾರ ಎದುರಿಸಿದ ದೊಡ್ಡ ರೈತ ಸಮಸ್ಯೆ ಎಂದರೆ ಮೊನ್ನೆಯ ಮಾರ್ಚ್ ತಿಂಗಳಲ್ಲಿ ಬೆಳ್ಳುಳ್ಳಿ ಬೆಳೆ ಬಂದಾಗ ಕುಸಿದ ಬೆಲೆಯಿಂದಾಗಿ ರೈತರು ಆತ್ಮಹತ್ಯೆಗೆ ಶರಣಾಗಿಬಿಟ್ಟರು. ತಕ್ಷಣಕ್ಕೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲವಾದ ಮುಖ್ಯಮಂತ್ರಿಯವರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ ಐವತ್ತು ಸಾವಿರ ರೂಪಾಯಿಗಳ ಸಾಲಮನ್ನಾ ಘೋಷಣೆ ಮಾಡಿದರೂ ಬಹುತೇಕ ರೈತರಿಗೆ ಇದರ ಉಪಯೋಗವಾಗಲೇ ಇಲ್ಲ. ಶ್ರೀಮತಿ ರಾಜೇಯವರು ಸಾಲಮನ್ನಾ ಘೋಷಣೆ ಮಾಡಿದರೇ ಹೊರತು ರೈತರು ನಿರೀಕ್ಷಿಸಿದ್ದ ಪರಿಹಾರ ಧನ ನೀಡಲಿಲ್ಲ. ಅದರಲ್ಲೂ ರಾಜೇಯವರ ಪ್ರಬಲ ಪ್ರಭಾವ ಇದ್ದ ಹರೋತಿ ಮತ್ತು ಶೇಖಾವತಿ ಪ್ರದೇಶದಲ್ಲಿಯೇ ರೈತರು ತೀವ್ರವಾಗಿ ನೊಂದಿದ್ದು ಮುಖ್ಯಮಂತ್ರಿಗಳು ಅವರ ನೆರವಿಗೆ ಧಾವಿಸದೆ ಹೋಗಿದ್ದು ಭಾಜಪ ಸರಕಾರಕ್ಕೆ ಹಿನ್ನಡೆಯಾಗುವಲ್ಲಿ ಪ್ರಮುಖ ಕಾರಣವಾಗಿ ಬಿಟ್ಟಿತು.
ಅದೂ ಅಲ್ಲದೆ ಈ ನವೆಂಬರ್ನಲ್ಲಿ ತಾವು ಬೆಳೆದ ಉದ್ದಿನ ಬೆಳೆಯನ್ನು ರೈತರು ಮಾರಾಟ ಮಾಡುವುದೇ ಕಷ್ಟದ ಕೆಲಸವಾಗಿ ಬಿಟ್ಟಿತು. ವಾಡಿಕೆಗಿಂತ ಹೆಚ್ಚು ಬೆಳೆ, ಉದ್ದಿನಬೇಳೆಯ ಇಳುವರಿ ಮತ್ತು ಗುಣಮಟ್ಟವನ್ನು ಹಾಳು ಮಾಡಿತ್ತು. ಈ ಸಮಸ್ಯೆಗೂ ಸರಕಾರ ತಕ್ಷಣಕ್ಕೆ ಸ್ಪಂದಿಸದೆ ಹೋಗಿದ್ದು ರೈತರು ಸರಕಾರದ ವಿರುದ್ಧ ಆಕ್ರೋಶಭರಿತರಾಗುವಂತೆ ಮಾಡಿತು. ಮಧ್ಯ ಪ್ರವೇಶಿಸಿದ ಕೇಂದ್ರ ಸರಕಾರ ಎಂಎಸ್ಪಿಯನ್ನು ನಿಗದಿಗೊಳಿಸುವಷ್ಟರಲ್ಲಿಯೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಇದರ ನಡುವೆ ಸರಿಯಾದ ಸಮಯಕ್ಕೆ ‘ಫಸಲ್ ಭಿಮಾ’ ಯೋಜನೆಯ ಹಣ ವೂ ತಲುಪಲಿಲ್ಲ. 53 ಸಾವಿರ ಜನರಿಗೆ ದೊರೆಯಬೇಕಿದ್ದ ಫಸಲ್ ಬಿಮಾ ಹಣ ತಲುಪಿದ್ದು ಕೇವಲ 19 ಸಾವಿರ ರೈತರಿಗೆ ಮಾತ್ರ. ಒಟ್ಟಿನಲ್ಲಿ ರಾಜಸ್ಥಾನದ ರೈತ ಸಮುದಾಯ ಆಡಳಿತಾರೂಢ ಪಕ್ಷದ ಬಗ್ಗೆ ಅಸಹನೆ ಹೊಂದಿದ್ದು ಆ ಸರಕಾರದ ಪತನಕ್ಕೆ ಕಾರಣವಾಯಿತು.
3.ನಿರುದ್ಯೋಗ ಸಮಸ್ಯೆ.
ಸೆಂಟರ್ ಫಾರ್ ಮಾನಿಟರಿಂಗ್ ಇಕಾನಮಿಯ ಪ್ರಕಾರ ಇಡೀ ರಾಷ್ಟ್ರದಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 6.6ರಷ್ಟಿದ್ದರೆ ರಾಜಸ್ಥಾನದಲ್ಲಿ ಅದು ಎರಡರಷ್ಟು ಅಂದರೆ 13.7ರಷ್ಟು ಇತ್ತು.(2018 ಅಕ್ಟೋಬರ್ ತಿಂಗಳ ಅಂಕಿಅಂಶ). 2013ರ ಚುನಾವಣೆಯಲ್ಲಿ 15 ಲಕ್ಷ ಉದ್ಯೋಗಗಳ ಸೃಷ್ಟಿಯ ಭರವಸೆ ನೀಡಿದ್ದ ರಾಜೇಯವರ ಸರಕಾರ ನೀಡಿದ್ದು ಕೇವಲ 2.17 ಲಕ್ಷ ಉದ್ಯೋಗಗಳನ್ನು ಮಾತ್ರ (ಇದು ಅವರ ಸರಕಾರವೇ ನೀಡಿದ ಅಂಕಿಅಂಶಗಳು). ರಾಜಸ್ಥಾನದ ನಿರುದ್ಯೋಗ ಸಮಸ್ಯೆಗೆ ತಾಜಾ ಉದಾಹರಣೆಯೆಂದರೆ ಕಳೆದ ವರ್ಷ 18 ಜವಾನ (ಡಿ ದರ್ಜೆಯ ನೌಕರ) ಹುದ್ದೆಗೆ ಅರ್ಜಿ ಕರೆದಾಗ ಬಂದ ಅರ್ಜಿಗಳ ಸಂಖ್ಯೆ 13,000. ಇದರಲ್ಲಿ 129 ಇಂಜಿನಿಯರಿಂಗ್ ಪದವೀಧರರು, 23 ಜನ ಕಾನೂನು ಪದವೀಧರರು, ಒಬ್ಬ ಚಾರ್ಟೆಡ್ ಅಕೌಂಟೆಂಟ್ ಮತ್ತು 393 ಸ್ನಾತಕೋತ್ತರ ಪದವೀಧರರು ಇದ್ದರು. ಇನ್ನು ಕಳೆದ ವರ್ಷ ನರೇಗಾ ಯೋಜನೆಯಡಿಯಲ್ಲಿ ಜನರಿಗೆ ಕೆಲಸ ದೊರೆತದ್ದು ಕೇವಲ 50 ದಿನಗಳು ಮಾತ್ರ. ಇದರಿಂದ ರಾಜಸ್ಥಾನದ ನಿರುದ್ಯೋಗ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬಹುದು. ಇದು ಯುವಜನತೆ ಭಾಜಪದ ವಿರುದ್ಧ ಮತಚಲಾಯಿಸುವಂತೆ ಮಾಡಿತು.
4.ಗೋರಕ್ಷಣೆಯ ಹೆಸರಿನಲ್ಲಿ ಬಹಿರಂಗವಾಗಿ ನಡೆದ ದಾಳಿಗಳು.
ಕಳೆದ ಎರಡುಮೂರು ವರ್ಷಗಳಲ್ಲಿ ಗೋರಕ್ಷಕರೆಂದು ಹೇಳಿಕೊಂಡ ಗುಂಪುಗಳು ಬಹಿರಂಗವಾಗಿ ನಡೆಸಿದ ದಾಳಿಗಳು ಮತ್ತು ಹಲ್ಲೆಗಳು ಹೆಚ್ಚಾಗುತ್ತ ಹೋಗಿದ್ದು ಮತ್ತು ಸರಕಾರ ಇಂತಹ ಅಕ್ರಮಗಳನ್ನು ನಿಗ್ರಹಿಸಲು ವಿಫಲವಾಗಿದ್ದು ರಾಜಸ್ಥಾನದ ಸಾಮರಸ್ಯ ಸಮಾಜದ ಜನತೆಯ ಕೋಪಕ್ಕೆ ಕಾರಣವಾಗಿತ್ತು.
5. ಒಳಗಿನ ಭಿನ್ನಮತ.
ಭಾಜಪದ ಕೇಂದ್ರ ನಾಯಕತ್ವ ಮತ್ತು ರಾಜೇಯವರ ನಡುವಿನ ಭಿನ್ನಮತ ಭಾಜಪಕ್ಕೆ ಹೊಡೆತ ನೀಡಿತು. ಕೇಂದ್ರ ನಾಯಕರು ನೂರು ಜನ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಬೇಡ, ಹೊಸಬರಿಗೆ ನೀಡೋಣವೆಂದರೂ ಕೇಳದ ರಾಜೇಯವರು ವಿರೋಧಿ ಅಲೆಯಿದ್ದ ಶಾಸಕರಿಗೆ ಟಿಕೆಟ್ ಕೊಡಿಸಿದ್ದು ಸಹ ಭಾಜಪದ ಸೋಲಿಗೆ ಕಾರಣವಾಯಿತು.
6. ಶ್ರೀಮತಿ ರಾಜೇಯವರ ದಂತಗೋಪುರದ ಶೈಲಿ.
ಮುಖ್ಯಮಂತ್ರಿಗಳಾದ ಶ್ರೀಮತಿ ರಾಜೇಯವರ ಮೇಲಿದ್ದ ದೊಡ್ಡ ಆರೋಪವೆಂದರೆ ಅವರು ಸಾರ್ವಜನಿಕರಿಗಿರಲಿ, ತಮ್ಮದೇ ಸಂಪುಟ ಸದಸ್ಯರಿಗೂ ಸುಲಭದಲ್ಲಿ ಭೇಟಿಗೆ ಸಿಗುವುದಿಲ್ಲ ಎಂಬುದು.
7. ಸರಕಾರಿ ಶಾಲೆಗಳನ್ನು ಮುಚ್ಚಿದ್ದು.
ಶ್ರೀಮತಿ ರಾಜೇಯವರ ಸರಕಾರ ಕಳೆದ ಮೂರುವರ್ಷಗಳಲ್ಲಿ ಹದಿನೇಳು ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಿದ್ದು ಸಾವಿರಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಮುಳುವಾಯಿತು. ಇದು ಗ್ರಾಮೀಣ ಭಾಗದ ಪೋಷಕರಲ್ಲಿ ಅತೃಪ್ತಿ ಮೂಡಿಸಿತು.
ಹೀಗೆ ಕಳೆದ ಐದು ವರ್ಷಗಳಲ್ಲಿ ವಸುಂಧರಾ ರಾಜೇಯವರ ಭಾಜಪ ಸರಕಾರ ಜನಪರ ಕೆಲಸಗಳನ್ನು ಮಾಡದೆ ಹಲವಾರು ಜನವಿರೋಧಿ ಕೃತ್ಯಗಳಿಗೆ ಕೈ ಹಾಕಿದ್ದು ರಾಜಸ್ಥಾನದ ಮತದಾರರು ಸರಕಾರದ ವಿರುದ್ಧ ಮತಚಲಾಯಿಸುವಂತೆ ಮಾಡಿತು. ಸರಕಾರದ ವಿರುದ್ಧವಿದ್ದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡ ಕಾಂಗ್ರೆಸ್ ಹಲವು ಭರವಸೆಗಳನ್ನು ನೀಡಿ ಮತದಾರರನ್ನು ಒಲಿಸಿಕೊಂಡಿತು. ಅಧಿಕಾರ ಹಿಡಿದ ಹತ್ತೇ ದಿನಗಳಲ್ಲಿ ಸಾಲಮನ್ನಾ, ವರ್ಷಕ್ಕೆ ಲಕ್ಷ ಉದ್ಯೋಗ ನೀಡಿಕೆ ಮುಂತಾದ ದೊಡ್ಡ ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೇನೋ ಬಂದಿದೆ. ಅದೀಗ ಎಷ್ಟರ ಮಟ್ಟಿಗೆ ತನ್ನ ಮಾತುಗಳನ್ನು ಉಳಿಸಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.







