ಐವರು ಕಳವು ಆರೋಪಿಗಳ ಬಂಧನ: 47 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ
![ಐವರು ಕಳವು ಆರೋಪಿಗಳ ಬಂಧನ: 47 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಐವರು ಕಳವು ಆರೋಪಿಗಳ ಬಂಧನ: 47 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ](https://www.varthabharati.in/sites/default/files/images/articles/2018/12/19/168757.jpg)
ಬೆಂಗಳೂರು, ಡಿ.19: ಮನೆ, ವಾಹನ ಕಳವು ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ರಾಮಮೂರ್ತಿ ನಗರ ಠಾಣಾ ಪೊಲೀಸರು 47.64 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು, ಬೈಕ್ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಗಳವು ಪ್ರಕರಣ ಸಂಬಂಧ ಷಣ್ಮುಗ(42) ಎಂಬಾತನನ್ನು ಬಂಧಿಸಿ 7 ಮನೆಗಳವು ಪ್ರಕರಣಗಳನ್ನು ಪತ್ತೆಹಚ್ಚಿ 10.8 ಲಕ್ಷ ಮೌಲ್ಯದ 336 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡರೆ, ಮತ್ತೊಬ್ಬ ಆರೋಪಿ ಜ್ಞಾನಪ್ರಕಾಶ್(40) ಎಂಬಾತನನ್ನು ಬಂಧಿಸಿ 16 ಕನ್ನಗಳವು ಪ್ರಕರಣಗಳಿಗೆ ಸಂಬಂಧಿಸಿದ 32.61 ಲಕ್ಷ ರೂ. ಮೌಲ್ಯದ 1 ಕೆಜಿ 87 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಅದೇ ರೀತಿ, ವಾಹನಗಳವು ಪ್ರಕರಣ ಸಂಬಂಧ ಪಣೀಶ್(23) ಎಂಬಾತನನ್ನು ಬಂಧಿಸಿ 3 ಬೈಕ್ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ, 3.60 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇನ್ನೂ, ಸರಗಳ್ಳತನ ಆರೋಪದಡಿ ರೂಬನ್(22) ಎಂಬಾತನನ್ನು ಬಂಧಿಸಿ 1.35 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಕೊಲೆ ಪ್ರಕರಣ: ನಾಗವಾರ ಪಾಳ್ಯದ ಬಳಿ ಕಳೆದ ಡಿ.3 ರಂದು ಮಧ್ಯರಾತ್ರಿ ಸುಲಿಗೆ ಮಾಡಲು ಪ್ರತಿರೋಧ ತೋರಿದ ಕ್ಯಾಬ್ ಚಾಲಕ ಮೋಹನ್ಕುಮಾರ್ ಅವರನ್ನು ಕೊಲೆಗೈದ ಜೋಗುಪಾಳ್ಯದ ಪೀಟರ್(22)ನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.