ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ಮೈನಡುಗಿಸುವ ಚಳಿ
ಬೆಂಗಳೂರು, ಡಿ. 19: ವಾಯುಭಾರ ಕುಸಿತ, ಫೈಥಾಯ್ ಚಂಡಮಾರುತದ ಪರಿಣಾಮ ಕರ್ನಾಟಕ ರಾಜ್ಯಾದ್ಯಂತ ಉಷ್ಣಾಂಶ ಬಹಳ ಕಡಿಮೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ಮೈನಡುಗಿಸುವ ಚಳಿ ಆರಂಭವಾಗಿದ್ದು, ಎಂಟು ಗಂಟೆಯಾದರೂ ಸೂರ್ಯನ ದರ್ಶನವಿಲ್ಲ.
ಬಿಸಿಲನಾಡು ರಾಯಚೂರಿನಲ್ಲೆ ಅತ್ಯಂತ ಕಡಿಮೆ ತಾಪಮಾನವಿದ್ದು, ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಶೀತಗಾಳಿಯ ಹವಾಮಾನದಿಂದ ಜನರು ನಡುಗುತ್ತಿದ್ದಾರೆ. ಬಹುತೇಕ ಪ್ರದೇಶಗಳಲ್ಲಿ ಬೆಳಗಿನಜಾವ ಮತ್ತು ಸಂಜೆ ವೇಳೆ ಮಂಜು ಮುಸುಕಿದ ಮೋಡ ಕವಿದ ವಾತಾವರಣವಿದೆ.
ಮೈಕೊರೆಯುವ ಚಳಿ, ತಂಪು ಹವಾಮಾನಕ್ಕೆ ಹೊಂದಿಕೊಳ್ಳಲು ಜನತೆ ಸ್ವೆಟರ್, ಟೋಪಿ, ಶಾಲು ಹೊದ್ದು ಸಂಚರಿಸುತ್ತಿದ್ದಾರೆ. ಅಲ್ಲದೆ, ಕೆಲವೆಡೆ ಬೆಳಗಿನಜಾವ ರಸ್ತೆಯಲ್ಲಿ ಬೆಂಕಿ ಕಾಯಿಸಿ ಮೈಬೆಚ್ಚಗೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಇನ್ನು ಕಲಬುರ್ಗಿಯಲ್ಲೂ ಇದೇ ವಾತಾವರಣ ಇದ್ದು, ಬೆಳಗ್ಗೆ 8 ಗಂಟೆಯಾದರೂ ಬಿಸಿಲಿನ ದರ್ಶನವಿಲ್ಲ. ಎಲ್ಲೆಡೆ ಮಂಜು ಮುಸುಕಿನ ವಾತಾವರಣ ಇದ್ದು, ವಾಹನ ಸವಾರರು ಹೆಡ್ಲೈಟ್ ಹಾಕಿಕೊಂಡೇ ವಾಹನ ಚಲಾಯಿಸುವಂತಹ ಸ್ಥಿತಿ ಇದೆ.
ಮೈ ನಡುಗಿಸುವ ಚಳಿ ತಾಳಲಾರದೇ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತಿದ್ದು, ನಾಲ್ಕೈದು ದಿನಗಳಿಂದ ಇದೇ ವಾತಾವರಣ ಇದ್ದು, ಚಳಿಗೆ ರಾಜ್ಯದ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ರಾಜಧಾನಿ ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 25.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ 13.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ 25.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 12.4ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ದಕ್ಷಿಣ ಕನ್ನಡ- 19 ಡಿಗ್ರಿ ಸೆ., ಉತ್ತರ ಕನ್ನಡ-17.7 ಡಿಗ್ರಿ ಸೆ., ಬೀದರ್-14.5 ಡಿಗ್ರಿ ಸೆ., ಉಡುಪಿ-20.1ಡಿಗ್ರಿ ಸೆ., ಕಲಬುರ್ಗಿ-14.7ಡಿಗ್ರಿ ಸೆ., ಚಿಕ್ಕಮಗಳೂರು- 13.3ಡಿಗ್ರಿ ಸೆ., ಧಾರವಾಡ ಜಿಲ್ಲೆಯಲ್ಲಿ-ಅತಿಕನಿಷ್ಠ 12ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ