ಜಿ.ಎಸ್.ಶಿವರುದ್ರಪ್ಪ ಒಂದು ಪಂಥಕ್ಕೆ ಸೀಮಿತಗೊಂಡವರಲ್ಲ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
![ಜಿ.ಎಸ್.ಶಿವರುದ್ರಪ್ಪ ಒಂದು ಪಂಥಕ್ಕೆ ಸೀಮಿತಗೊಂಡವರಲ್ಲ: ಪ್ರೊ.ಎಸ್.ಜಿ.ಸಿದ್ದರಾಮಯ್ಯ ಜಿ.ಎಸ್.ಶಿವರುದ್ರಪ್ಪ ಒಂದು ಪಂಥಕ್ಕೆ ಸೀಮಿತಗೊಂಡವರಲ್ಲ: ಪ್ರೊ.ಎಸ್.ಜಿ.ಸಿದ್ದರಾಮಯ್ಯ](https://www.varthabharati.in/sites/default/files/images/articles/2018/12/20/168936.jpg)
ಬೆಂಗಳೂರು, ಡಿ.20 : ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಯಾವುದೇ ಒಂದು ಪಂಥಕ್ಕೆ ಸೀಮಿತಗೊಂಡವರಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಗುರುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರಕವಿ ಜಿಎಸ್ಎಸ್ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರು ಕೇಂದ್ರ ವಿವಿ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಬರಹಗಳ ಹೊಸ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಎಸ್ಎಸ್ ಒಂದು ಸಿದ್ಧಾಂತಕ್ಕೆ ಸೀಮಿತವಾಗದೆ ಎಲ್ಲರನ್ನೂ ಒಳಗೊಳ್ಳುವ ವ್ಯಕ್ತಿಯಾಗಿದ್ದರು. ರಾಜಕೀಯ ಕ್ಷೇತ್ರದ ದಿಗ್ಗದ ಗೋಪಾಲಗೌಡರಿಂದ ಹಿಡಿದು ಸಾಹಿತಿ ದ.ರಾ.ಬೇಂದ್ರೆ, ಡಿವಿಜಿ ಸೇರಿದಂತೆ ಅನೇಕ ವಿದ್ವಾಂಸರನ್ನು ಪರಿಚಯ ಮಾಡಿಕೊಟ್ಟಿದ್ದರು. ಎಲ್ಲರ ವಿಚಾರಧಾರೆಗಳನ್ನು ಸಮಾಗಮಗೊಳಿಸುತ್ತಿದ್ದರು ಎಂದು ಅವರು ಹೇಳಿದರು.
ಶ್ರದ್ಧಾ ಗುಣಗಳಿರುವ ಶಿಷ್ಯ ಬಳಗ ಬೆಳೆಸಿದ್ದ ಅವರು, ಎಲ್ಲ ಸಿದ್ಧಾಂತಗಳನ್ನು ಒಪ್ಪಿಕೊಂಡು, ಅದರ ಮಿತಿಯನ್ನು ಆಲೋಚಿಸಿ ಬರೆಯುವಂತಹ ಬರಹಗಾರರನ್ನು ರೂಪಿಸಿದ್ದಾರೆ. ಅಪಾರವಾದ ಓದುಗರನ್ನು ಹಾಗೂ ವಿಚಾರವಂತರನ್ನು ಬೆಳೆಸಿದ ಕೀರ್ತಿ ಜಿಎಸ್ಎಸ್ ಅವರಿಗೆ ಸಲ್ಲುತ್ತದೆ ಎಂದು ಸಿದ್ಧರಾಮಯ್ಯ ನುಡಿದರು.
ಕುವೆಂಪು ಅವರ ಶಿಷ್ಯರಾಗಿದ್ದ ಜಿಎಸ್ಎಸ್ ಅವರ ದಾರಿಯನ್ನು ಮುಂದುವರಿಸಿದರು. ಅಧ್ಯಯನಾಂಗ, ಸಂಶೋಧನಾಂಗ, ಬೋಧನಾಂಗ, ಪ್ರಸಾರಾಂಗ ಎಲ್ಲದಕ್ಕೂ ಪೂರಕವಾಗಿತ್ತು. ಜಿಎಸ್ಎಸ್ ಅದನ್ನೂ ಮುಂದಕ್ಕೆ ಕೊಂಡೊಯ್ದರು. ಇದನ್ನು ನಾವೂ ಮುಂದುವರಿಸಬೇಕು ಎಂದು ನಿರ್ಧರಿಸಿದ್ದು, ನಾಡಿನ ಎಲ್ಲ ಕಡೆ ಪ್ರಚಾರ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದೇವೆ ಎಂದು ಹೇಳಿದರು.
ಜಿ.ಎಸ್.ಶಿವರುದ್ರಪ್ಪ ಅವರ ಸಾಹಿತ್ಯ ಹಾಗೂ ಬರಹಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವರ ಲೇಖನಗಳನ್ನು ಬಿತ್ತರಿಸುವುದರ ಜತೆಗೆ ವೆಬ್ಸೈಟ್, ಯೂಟೂಬ್ಗಳ ಮೂಲಕವೂ ಪ್ರಚಾರ ಮಾಡಲು ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಮುಂದಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಮಾತನಾಡಿ, ಡಾ.ಜಿ.ಎಸ್.ಎಸ್ ಅಂಬೇಡ್ಕರ್, ಮಾರ್ಕ್ಸ್, ಗಾಂಧೀ ಸೇರಿದಂತೆ ಎಲ್ಲರ ಬಗ್ಗೆಯೂ ಸಮಗ್ರವಾಗಿ ಅಧ್ಯಯನ ಮಾಡಿ ಪಾಠ ಮಾಡುತ್ತಿದ್ದರು. ಎಲ್ಲರನ್ನೂ ಒಳಗೊಳ್ಳುವ ಅವರ ವ್ಯಕ್ತಿತ್ವ ಭಿನ್ನವಾದುದಾಗಿತ್ತು ಎಂದು ಹೇಳಿದರು.
ಜಿಎಸ್ಎಸ್ ಸೆಂಟ್ರಲ್ ಕಾಲೇಜಿನಲ್ಲಿದ್ದ ವೇಳೆ ಇದು ಚಳವಳಿಗಳ ಕೇಂದ್ರ ಸ್ಥಾನವಾಗಿತ್ತು. ರೈತ, ದಲಿತ, ಬಂಡಾಯ ಸಾಹಿತ್ಯ ಸೇರಿದಂತೆ ಎಲ್ಲ ಚಳವಳಿಗಳಿಗಳಲ್ಲೂ ಪ್ರಮುಖ ಪಾತ್ರವಹಿಸಲಾಗುತಿತ್ತು ಎಂದ ಅವರು, ಜಿಎಸ್ಎಸ್ರನ್ನು ಆದರ್ಶವಾಗಿಟ್ಟುಕೊಂಡೇ ವಿವಿಯಲ್ಲಿ ಕನ್ನಡ ಅಧ್ಯಯನ ವಿಭಾಗ ಕಟ್ಟಿದ್ದೇವೆ. ಆದರೆ, ಅವರಿಗಿಂತ ಭಿನ್ನವಾಗಿ ಅದನ್ನು ಬೆಳೆಸಬೇಕಾದ ಅಗತ್ಯವಿದ್ದು, ಅದು ಇಂದಿಗೆ ಅನಿವಾರ್ಯವೂ ಇದೆ ಎಂದರು.
ನನ್ನನ್ನು ಗೋಕಾಕ್ ಚಳವಳಿಗೆ ಪರಿಚಯ ಮಾಡಿಸಿದ್ದು ಜಿಎಸ್ಎಸ್, ನಾನೊಂದು ವರ್ಷ ಮನೆ ಮಠ ಬಿಟ್ಟು ಅದರಲ್ಲಿ ಪಾಲ್ಗೊಂಡಿದ್ದೆ. ಹೀಗಾಗಿಯೇ ನಾನು ವಿವಿ ಕುಲಪತಿಯಾಗಲು ಸಾಧ್ಯವಾಯಿತು ಅನ್ನಿಸುತ್ತದೆ ಎಂದು ಜಾಫೆಟ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ರಾಘವೇಂದ್ರ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.