ಕಲೆಯಿಂದ ಬದುಕು ಕಟ್ಟಿಕೊಳ್ಳಿ: ಡಿಂಗ್ರಿ ನಾಗರಾಜು
![ಕಲೆಯಿಂದ ಬದುಕು ಕಟ್ಟಿಕೊಳ್ಳಿ: ಡಿಂಗ್ರಿ ನಾಗರಾಜು ಕಲೆಯಿಂದ ಬದುಕು ಕಟ್ಟಿಕೊಳ್ಳಿ: ಡಿಂಗ್ರಿ ನಾಗರಾಜು](https://www.varthabharati.in/sites/default/files/images/articles/2018/12/20/168965.jpg)
ಬೆಂಗಳೂರು, ಡಿ.20: ಕಲೆಯಿಂದ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗಬೇಕು. ಹಾಗಾದರೆ ಮಾತ್ರ ಸಿನೆಮಾ, ಸಂಸ್ಕೃತಿ, ಸಾಹಿತ್ಯ ಉಳಿಯುತ್ತದೆ ಎಂದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜು ಅಭಿಪ್ರಾಯ ಪಟ್ಟರು.
ನಗರದ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ, ಸಂಘದ 13ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಟನೆಯಿಂದ ಬದುಕು ಕಟ್ಟಿ ಕೊಳ್ಳುವುದು ಸಾಧ್ಯ ಎಂದಾದರೆ ಈ ಕಲೆಗಳನ್ನು ಆಸಕ್ತಿಯಿಂದ ಕಲಿಯುವ ಮನಸ್ಸುಗಳಿವೆ. ಹೀಗಾಗಿ, ಸಂಘಸಂಸ್ಥೆಗಳು, ಸರಕಾರ ಈ ಕಲಾವಿದರಿಗೆ ಹೆಚ್ಚಿನ ಸಹಾಯವನ್ನು ಕೊಡುವುದರ ಮೂಲಕ ಕಲಾವಿದರನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ನಟನೆ ಎನ್ನುವುದು ವ್ಯಾಕರಣವೂ ಅಲ್ಲ, ಪಾಂಡಿತ್ಯವೂ ಅಲ್ಲ. ಆದರೆ, ಅದು ಇವೆರಡನ್ನು ಮೀರಿದ ಸ್ಥಿತಿ. ಹೀಗಾಗಿಯೇ ಪೂರ್ವಜರ ಮೂಲಕ ನಟನೆ, ಹಾಸ್ಯ ತನ್ನಿಂದ ತಾನೇ ಹೊರಹೊಮ್ಮಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸನ್ಮಾನ: ಕಾರ್ಯಕ್ರಮದಲ್ಲಿ ಹಿರಿಯ ಪೋಷಕ ಕಲಾವಿದರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಆಡುಗೋಡಿ ಶ್ರೀನಿವಾಸ್, ಕರವೇ ಅಧ್ಯಕ್ಷ ಎನ್.ಕುಮಾರ್, ಉಮೇಶ್, ರೋಹನ್, ಗಂಡಸಿ ಸದಾನಂದ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.