ಶಿವಮೊಗ್ಗ: ಸರಕಾರಿ ಆಸ್ಪತ್ರೆ, ಹಾಸ್ಟೆಲ್ ಗಳಿಗೆ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ದಿಢೀರ್ ಭೇಟಿ

ಶಿವಮೊಗ್ಗ, ಡಿ. 20: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ಶೆಟ್ಟಿ ಅವರು ಗುರುವಾರ ಶಿವಮೊಗ್ಗ ನಗರದ ಎರಡು ಸರ್ಕಾರಿ ಹಾಸ್ಟೆಲ್, ತಲಾ ಒಂದು ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗೆ ದಿಢೀರ್ ಭೇಟಿಯಿತ್ತು ಪರಿಶೀಲಿಸಿದರು. ನಂತರ ಭದ್ರಾವತಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿದರು.
ನ್ಯಾಯಮೂರ್ತಿಗಳು ಹಾಸ್ಟೆಲ್ವೊಂದರಲ್ಲಿ ತಯಾರಿಸಲಾಗಿದ್ದ, ಉಪಹಾರ ಹಾಗೂ ಟೀ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. ಜೊತೆಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾಧಿಕಾರಿ ಡಾ. ಕೆ.ಎ.ದಯಾನಂದ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಶಿಕ್ಷಣ, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶೀಲನೆ: ಶಿವಮೊಗ್ಗ ನಗರದ ಬಾಪೂಜಿನಗರದಲ್ಲಿರುವ ಪ್ರೊ. ಬಿ.ಕೃಷ್ಣಪ್ಪ ಸ್ಮಾರಕ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಲೋಕಾಯುಕ್ತರು ಭೇಟಿ ನೀಡಿದರು. ವಿದ್ಯಾರ್ಥಿನಿಯರೊಂದಿಗೆ ಕುಂದುಕೊರತೆಗಳ ಸಮಾಲೋಚನೆ ನಡೆಸಿದರು. ನಂತರ ಹಾಸ್ಟೆಲ್ನ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕೊಠಡಿಗಳಲ್ಲಿ ಬೆಳಕಿನ ಕೊರತೆ ಇದ್ದುದನ್ನು ಗಮನಿಸಿದ ಲೋಕಾಯುಕ್ತರು, ಎಲ್ಲಾ ಕೊಠಡಿಗಳಲ್ಲೂ ಸೂಕ್ತ ಬೆಳಕಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯಾರ್ಥಿಗಳಿಗೆ ತಯಾರಿಸಲಾಗಿದ್ದ ಇಡ್ಲಿಯ ರುಚಿ ಸವಿದರು. ಜೊತೆಗೆ ಟೀ ಸೇವಿಸಿದರು. ಗುಣಮಟ್ಟ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಪಕ್ಕದಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗವಾಡಿಗೆ ಭೇಟಿ ನೀಡಿದರು. ಕುಂದು ಕೊರತೆ ಬಗ್ಗೆ ಶಿಕ್ಷಕಿಯರಿಂದ ಮಾಹಿತಿ ಪಡೆದುಕೊಂಡರು. 'ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ತಮ್ಮ ಗುರುಗಳನ್ನು ನೆನಪಿಸಿಕೊಳ್ಳುವ ಹಾಗೆ ಪ್ರೀತಿಯಿಂದ ಅವರಿಗೆ ಶಿಕ್ಷಣ ನೀಡಿ. ಉತ್ತಮ ಪ್ರಜೆಗಳನ್ನಾಗಿ ರೂಪಿಸಿ' ಎಂದು ಶಿಕ್ಷಕರುಗಳಿಗೆ ಕಿವಿಮಾತು ಹೇಳಿದರು. ಬಳಿಕ ಅದೇ ಬಡಾವಣೆಯಲ್ಲಿರುವ ಬಾಲಕರ ಬಿಸಿಎಂ ಹಾಸ್ಟೆಲ್ಗೆ ಭೇಟಿ ನೀಡಿದರು.
'ಯಾವಾಗಲು ಇದೇ ರೀತಿಯಲ್ಲಿ ಹಾಸ್ಟೆಲ್ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಚೆನ್ನಾಗಿದ್ದರೆ ನಮ್ಮ ದೇಶ ಅಭಿವೃದ್ದಿಯಾಗುತ್ತದೆ. ಲೋಕಾಯುಕ್ತ ಪೊಲೀಸರನ್ನು ಪದೇ ಪದೇ ಹಾಸ್ಟೆಲ್ಗಳ ಭೇಟಿಗೆ ಕಳುಹಿಸುತ್ತೇನೆ. ಯಾವುದೇ ದೂರುಗಳು ಬರದ ರೀರಿಯಲ್ಲಿ ವ್ಯವಸ್ಥೆ ಕಾಪಾಡಿ' ಎಂದು ಅಲ್ಲಿನ ಸಿಬ್ಬಂದಿಗಳಿಗೆ ಸೂಚಿಸಿದರು. ಬಳಿಕ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.
ಸರಿಯಾಗಬೇಕು: ಶಿವಮೊಗ್ಗ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ನ್ಯಾಯಮೂರ್ತಿಗಳು ಮಾತನಾಡಿದರು. 'ವ್ಯವಸ್ಥೆಯಲ್ಲಿರುವ ಸಣ್ಣ ಪುಟ್ಟ ಲೋಪದೋಷಗಳನ್ನು ಎಲ್ಲರೂ ಸೇರಿ ಸರಿಪಡಿಸಬೇಕು. ಸರ್ಕಾರಿ ವ್ಯವಸ್ಥೆ ಬಗ್ಗೆ ಕೀಳರಿಮೆ ಬರುವ ಹಾಗೆ ಮಾಧ್ಯಮಗಳು ಬಿಂಬಿಸಿದರೆ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಶಾಲೆಗಳಿಗೆ ಜನರು ಹೋಗಲು ಹಿಂದೇಟು ಹಾಕುತ್ತಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತದೆ' ಎಂದು ಅಭಿಪ್ರಾಯಪಟ್ಟರು.
ಸರ್ಕಾರ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ರಾಜ್ಯಾದ್ಯಂತ ನನ್ನ ಅವಧಿಯಲ್ಲಿ ಹಾಸ್ಟೆಲ್ಗಳು ಮತ್ತು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ವಿದ್ಯಾರ್ಥಿಗಳೆ ದೇಶದ ಭಾವಿ ಪ್ರಜೆಗಳಾಗಿರುವುದರಿಂದ ಅವರಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.







