ದ.ಕ. ಜಿಲ್ಲೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರ ಸಂಖ್ಯೆ ವಿರಳ : ಅಪರ ಜಿಲ್ಲಾಧಿಕಾರಿ ಕುಮಾರ್

ಪುತ್ತೂರು, ಡಿ. 22: ದ.ಕ. ಜಿಲ್ಲೆ ಶೈಕ್ಷಣಿಕವಾಗಿ ಮೇಲುಗೈ ಸಾಧಿಸಿದ್ದರೂ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ತೀರಾ ಕಡಿಮೆಯಿದೆ. ಇದರಿಂದಾಗಿ ಆಡಳಿತಾತ್ಮಕ ವಿಷಯದಲ್ಲಿ ಕೆಳಗಿರುವುದಕ್ಕೆ ಕರ್ನಾಟಕ ಸರ್ಕಾರದ ನಾಗರಿಕ ಸೇವೆಗಳಲ್ಲಿ ಜಿಲ್ಲೆಯ ಪ್ರಾತಿನಿದ್ಯ ಅತ್ಯಂತ ವಿರಳವಾಗಿರುವುದೇ ಇದಕ್ಕೆ ಕಾರಣವಾಗಿದೆ ಎಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.
ಅವರು ಶನಿವಾರ ಪುತ್ತೂರು ಉಪವಿಭಾಗ ಮತ್ತು ಪುತ್ತೂರು ಆಡಳಿತ ವತಿಯಿಂದ, ಪುತ್ತೂರು ಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದ.ಕ. ಜಿಲ್ಲೆಯವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವವರು ಕಡಿಮೆ ಹಾಗಾಗಿ ಆಡಳಿತಕ್ಕೆ ಬರುವವರು ಕಡಿಮೆಯಾಗಿದ್ದಾರೆ ಎಂದ ಅವರು ವಿದ್ಯಾರ್ಥಿ ಜೀವನ ಅಮೂಲ್ಯವಾದ ಜೀವನವಾಗಿದೆ. ಈ ಸಮಯದಲ್ಲಿ ಕನಸನ್ನು ಕಾಣಬೇಕು. ಆದರೆ ನಿದ್ದೆ ಮಾಡುವಂತಹ ಕನಸಲ್ಲ ನಿದ್ದೆಯಿಂದ ಎಚ್ಚರಿಸುವ ಕನಸು ಕಾಣಬೇಕು. ನಾವು ಕನಸನ್ನು ಕಟ್ಟಿಕೊಳ್ಳುವಾಗ ದೊಡ್ಡ ಪ್ರಮಾಣದ ಕನಸನ್ನು ಕಟ್ಟಬೇಕು. ಮುಂದೆ ಆ ಕನಸು ನನಸು ಮಾಡುವ ಗುರಿಯತ್ತ ಮುನ್ನಡಿಯಿಡ ಬೇಕು. ಬದುಕಿನಲ್ಲಿ ಎತ್ತರಕ್ಕೆ ಏರಬೇಕಾದಲ್ಲಿ ಸಿಗುವ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಬೇರೆಯವರ ದಾರಿಯನ್ನು ಅನುಕರಣೆ ಮಾಡದೇ ನಮ್ಮದೇ ಆದ ದಾರಿಯನ್ನು ಅನುಸರಿಸಿ ಬದುಕಿನಲ್ಲಿ ಗುರಿಯನ್ನು ತಲುಪಬೇಕು ಎಂದರು.
ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಎಚ್.ಕೆ. ಕೃಷ್ಣಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ವಿದ್ಯಾರ್ಥಿಗಳು ಹಾಗೂ ಆಸಕ್ತರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ ಮೂಡಿಸಿ ಸ್ಪೂರ್ತಿ ತುಂಬಲು ಹಾಗೂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸಲು ಈ ತರಬೇತಿಯ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಬಳಿಕ ನಡೆದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಎಚ್.ಕೆ. ಕೃಷ್ಣಮೂರ್ತಿ, ಶಿವಮೊಗ್ಗ ಅಚೀವರ್ಸ್ ಕೋಚಿಂಗ್ ಸೆಂಟರ್ನ ಶಿವಕುಮಾರ್, ದ.ಕ.ಜಿ.ಪಂ. ಸಹಾಯಕ ಕಾರ್ಯದರ್ಶಿ ಸಂತೋಷ್ ಕುಮಾರ್, ಪುತ್ತೂರು ಸರ್ಕಾರಿ ಮಹಿಳಾ ಕಾಲೇಜ್ನ ಪ್ರಾಂಶುಪಾಲ ಪ್ರೊ. ಝೇವಿಯರ್ ಡಿ'ಸೋಜ, ಮಂಗಳೂರು ಸರ್ವಜ್ಞ ಅಕಾಡಮಿಯ ಮುಖ್ಯಸ್ಥ ಸುರೇಶ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಆಧಿಕಾರಿ ಯತೀಶ್ ಉಳ್ಳಾಲ್ ಅವರು ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಓರ್ವ ಐಎಎಸ್ ಮತ್ತು ಇಬ್ಬರು ಕೆಎಎಸ್ ಪರೀಕ್ಷೆ ಪೂರೈಸಿದ ವಿದ್ಯಾರ್ಥಿಗಳು ತನ್ನ ಅನುಭವವನ್ನು ಹಂಚಿಕೊಂಡರು.
ಸುಮಾರು 450ಕ್ಕೂ ಮಿಕ್ಕಿ ಶಿಭಿರಾರ್ಥಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಪುತ್ತೂರು ತಹಸೀಲ್ದಾರ್ ಅನಂತಶಂಕರ್ ಉಪಸ್ಥಿತರಿದ್ದರು. ಲಕ್ಷ್ಮೀಕಾಂತ್ ಕಾರ್ಯಕ್ರಮ ನಿರೂಪಿಸಿದರು.