ಕಂಪ್ಯೂಟರ್ಗಳ ಮೇಲೆ ನಿಗಾ ಇರಿಸಲು ಕೇಂದ್ರದ ಆದೇಶ: ಅಘೋಷಿತ ತುರ್ತು ಪರಿಸ್ಥಿತಿ ಎಂದ ಪಿಣರಾಯಿ ವಿಜಯನ್
![ಕಂಪ್ಯೂಟರ್ಗಳ ಮೇಲೆ ನಿಗಾ ಇರಿಸಲು ಕೇಂದ್ರದ ಆದೇಶ: ಅಘೋಷಿತ ತುರ್ತು ಪರಿಸ್ಥಿತಿ ಎಂದ ಪಿಣರಾಯಿ ವಿಜಯನ್ ಕಂಪ್ಯೂಟರ್ಗಳ ಮೇಲೆ ನಿಗಾ ಇರಿಸಲು ಕೇಂದ್ರದ ಆದೇಶ: ಅಘೋಷಿತ ತುರ್ತು ಪರಿಸ್ಥಿತಿ ಎಂದ ಪಿಣರಾಯಿ ವಿಜಯನ್](https://www.varthabharati.in/sites/default/files/images/articles/2018/12/22/169275.jpg)
ತಿರುವನಂತಪುರಂ, ಡಿ.22: ಯಾವುದೇ ಕಂಪ್ಯೂಟರ್ನಲ್ಲಿ ಸಂಗ್ರಹವಾಗಿರುವ , ರವಾನಿಸಲ್ಪಟ್ಟಿರುವ ಮಾಹಿತಿಯ ಮೇಲೆ ನಿಗಾ ಇರಿಸುವ ಅಥವಾ ಗೂಢಲಿಪಿಗ್ರಹಣ ನಡೆಸಲು 10 ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಕೇಂದ್ರ ಸರಕಾರದ ಆದೇಶವನ್ನು ಟೀಕಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದು ಖಾಸಗಿತನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ ಎಂದಿದ್ದಾರೆ.
ಮಾಧ್ಯಮ, ಶಾಸಕರು ಹಾಗೂ ನ್ಯಾಯಾಂಗ ಕೂಡಾ ಈ ಆದೇಶದ ವ್ಯಾಪ್ತಿಗೆ ಒಳಪಡುತ್ತಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರ ದೇಶವನ್ನು ಅಘೋಷಿತ ತುರ್ತು ಪರಿಸ್ಥಿತಿಗೆ ದೂಡುತ್ತಿದೆ ಎಂದು ಫೇಸ್ ಬುಕ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ವಿಜಯನ್ ತಿಳಿಸಿದ್ದಾರೆ.
ಗೃಹ ಸಚಿವಾಲಯದ ಅಧಿಸೂಚನೆ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. 2000ನೇ ಇಸವಿಯ ಮಾಹಿತಿ ಹಕ್ಕು ಕಾಯ್ದೆಯಡಿ ಈ ಅಧಿಸೂಚನೆ ಹೊರಡಿಸಿರುವುದಾಗಿ ಗೃಹ ಇಲಾಖೆ ತಿಳಿಸಿದೆ. ಆದರೆ ಈ ಹೇಳಿಕೆ ವಿವೇಚನಾರಹಿತವಾಗಿದೆ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 66ರ ಪ್ರಕಾರ ಆನ್ಲೈನ್ ಮೂಲಕ ಆಕ್ಷೇಪಾರ್ಹ ವಿಷಯಗಳನ್ನು ಹಂಚಿಕೊಳ್ಳುವುದು ದಂಡನಾರ್ಹ ಅಪರಾಧವಾಗಿದೆ . ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಟೀಕಿಸುವವರ ಪ್ರಜಾಪ್ರಭುತ್ವ ಹಕ್ಕನ್ನು ನಿರಾಕರಿಸುವ ಪ್ರಯತ್ನ ಇದಾಗಿದೆ ಎಂದವರು ಆರೋಪಿಸಿದ್ದಾರೆ.