ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟ ಸೃಷ್ಟಿಸಿದ ಸುನಾಮಿಗೆ 222 ಜನರು ಬಲಿ
ನೂರಾರು ಜನರಿಗೆ ಗಾಯ, ಹಲವರು ನಾಪತ್ತೆ
ಜಕಾರ್ತಾ,ಡಿ.23: ಇಂಡೋನೇಷ್ಯಾದ ಜಾವಾ ಮತ್ತು ಸುಮಾತ್ರಾ ದ್ವೀಪಗಳಲ್ಲಿ ಸುನಾಮಿಯ ಅಬ್ಬರದಿಂದ ಕನಿಷ್ಠ 222 ಜನರು ಪ್ರಾಣ ಕಳೆದುಕೊಂಡಿದ್ದಾರೆ. 800ಕ್ಕೂ ಅಧಿಕ ಜನರು ಗಾಯಗೊಂಡಿದ್ದು,ಹಲವಾರು ಜನರು ನಾಪತ್ತೆಯಾಗಿದ್ದಾರೆ. ಭಾರೀ ಪ್ರಮಾಣದಲ್ಲಿ ಆಸ್ತಿಪಾಸಿ ನಷ್ಟವುಂಟಾಗಿದೆ. ಅನಾಕ್ ಕ್ರಾಕಟಾವು ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಸಮುದ್ರದಾಳದಲ್ಲಿ ಸಂಭವಿಸಿದ ಭೂಕುಸಿತ ಈ ವಿನಾಶಕಾರಿ ಸುನಾಮಿಗೆ ಕಾರಣವಾಗಿತ್ತು ಎನ್ನಲಾಗಿದೆ.
ಶನಿವಾರ ತಡರಾತ್ರಿ ಸುಂದಾ ಜಲಸಂಧಿಯಲ್ಲಿ ಉಂಟಾದ ಸುನಾಮಿಯಿಂದಾಗಿ ನೂರಾರು ಮನೆಗಳು ಮತ್ತು ಇತರ ಕಟ್ಟಡಗಳಿಗೆ ಭಾರೀ ಹಾನಿಯುಂಟಾಗಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಸುತೊಪೊ ಪುರ್ವೊ ನುಗ್ರೊಹೊ ತಿಳಿಸಿದರು.
ಭಾರೀ ಎತ್ತರದ ಅಲೆಗಳಿಂದಾಗಿ ಸಾವಿರಾರು ನಿವಾಸಿಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ನಾಪತ್ತೆಯಾಗಿರುವ ಜನರ ಸಂಖ್ಯೆಯನ್ನು ಇನ್ನಷ್ಟೇ ಅಂದಾಜಿಸಬೇಕಿದೆ. ಸಮುದ್ರ ತೀರಗಳಿಂದ ದೂರವುಳಿಯುವಂತೆ ಸುಂದಾ ಜಲಸಂಧಿಯ ಆಸುಪಾಸಿನ ನಿವಾಸಿಗಳಿಗೆ ಮತ್ತು ಪ್ರವಾಸಿಗಳಿಗೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ಡಿ.25ರವರೆಗೂ ಭಾರೀ ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುವ ನಿರೀಕ್ಷೆಯಿರುವುದರಿಂದ ಸದ್ಯವೇ ತಮ್ಮ ಸ್ಥಳಗಳಿಗೆ ಮರಳುವ ದುಸ್ಸಾಹಸ ಮಾಡದಂತೆ ಅವರು ಸ್ಥಳಾಂತರಿಗಳಿಗೆ ಸೂಚಿಸಿದ್ದಾರೆ.
ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ,ಸುನಾಮಿಗೆ ಬಲಿಯಾದವರನ್ನು ಪತ್ತೆ ಹಚ್ಚುವಂತೆ ಮತ್ತು ಗಾಯಾಳುಗಳ ಬಗ್ಗೆ ಕಾಳಜಿ ವಹಿಸುವಂತೆ ತಾನು ಸಂಬಂಧಿಸಿದ ಎಲ್ಲ ಸರಕಾರಿ ಸಂಸ್ಥೆಗಳಿಗೆ ಆದೇಶಿಸಿರುವುದಾಗಿ ರಾಷ್ಟ್ರಾಧ್ಯಕ್ಷ ಜೋಕೊ ವಿಡೊಡೊ ಟ್ವೀಟಿಸಿದ್ದಾರೆ.
ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಉಪಾಧ್ಯಕ್ಷ ಜುಸುಫ್ ಕಲ್ಲಾ ಅವರು ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು.
ಹಾನಿಗೀಡಾದ ಮನೆಗಳ ಅವಶೇಷಗಳು,ಬುಡಮೇಲಾಗಿ ಬಿದ್ದಿರುವ ಕಾರುಗಳು ಮತ್ತು ಮರಗಳಿಂದಾಗಿ ಕೆಲವು ರಸ್ತೆಗಳಲ್ಲಿ ತಡೆಯುಂಟಾಗಿದ್ದು, ರಕ್ಷಣಾ ಕಾರ್ಯಕರ್ತರು ಮತ್ತು ಆ್ಯಂಬುಲನ್ಸ್ಗಳು ಪೀಡಿತ ಪ್ರದೇಶಗಳಿಗೆ ತೆರಳಲು ಅಡ್ಡಿಯಾಗುತ್ತಿದೆ.
ಜಾವಾ ದ್ವೀಪದ ಬಾಂಟೆನ್ ಪ್ರಾಂತ್ಯದ ಪಶ್ಚಿಮ ಕರಾವಳಿಯು ಸುನಾಮಿಯಿಂದ ತೀವ್ರವಾಗಿ ಬಾಧಿತಗೊಂಡಿದೆ. ದಕ್ಷಿಣ ಸುಮಾತ್ರಾದ ಲಾಂಪಂಗ್ನಲ್ಲಿ ಕನಿಷ್ಠ 35 ಜನರು ಮೃತಪಟ್ಟಿರುವುದು ವರದಿಯಾಗಿದೆ ಎಂದು ನುಗ್ರೊಹೊ ತಿಳಿಸಿದರು.
ಪಿಎಲ್ಎನ್ ಸರಕಾರಿ ಸಂಸ್ಥೆಯ ಸುಮಾರು 250 ಉದ್ಯೋಗಿಗಳು ವರ್ಷಾಂತ್ಯದ ಕಾರ್ಯಕ್ರಮಕ್ಕಾಗಿ ತಾಂಜುಂಗ್ ಲೆಸಂಗ್ನಲ್ಲಿ ಸೇರಿದ್ದು,ಈ ಪೈಕಿ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 89 ಜನರು ನಾಪತ್ತೆಯಾಗಿದ್ದಾರೆ ಎಂದು ಕಂಪನಿಯ ವಕ್ತಾರರು ತಿಳಿಸಿದರು.
ಎರಡು ಮೀಟರ್ಗೂ ಹೆಚ್ಚಿನ ಎತ್ತರದ ಅಲೆಗಳು ತೀರವನ್ನು ಅಪ್ಪಳಿಸುವ ಮುನ್ನ ಸಮುದ್ರದ ನೀರು ಹಿಂದಕ್ಕೆ ಸರಿಯುವಂತಹ ಅಥವಾ ಭೂಕಂಪದ ಯಾವುದೇ ಎಚ್ಚರಿಕೆಯ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ತೀರಪ್ರದೇಶದ ನಿವಾಸಿಗಳು ತಿಳಿಸಿದರು. ಆದರೆ ಕೆಲವು ಪ್ರದೇಶಗಳಲ್ಲಿ ಎಚ್ಚರಿಕೆಯ ಸೈರನ್ಗಳು ಮೊಳಗಿದ್ದವು ಎಂದು ಅಧಿಕಾರಿಗಳು ಹೇಳಿದರು.
ಈ ದುರಂತಕ್ಕೆ ನಿಖರ ಕಾರಣವನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಜಾವಾ ಮತ್ತು ಸುಮಾತ್ರಾಗಳ ನಡುವಿನಲ್ಲಿರುವ ಅನಾಕ್ ಕ್ರಾಕಟಾವು ಜ್ವಾಲಾಮುಖಿಯು ಕಳೆದ ಕೆಲವು ತಿಂಗಳುಗಳಿಂದ ಬೂದಿ ಮತ್ತು ಲಾವಾರಸವನ್ನು ಹೊರಕ್ಕೆ ಹಾಕುತ್ತಲೇ ಇತ್ತು. ಶನಿವಾರ ರಾತ್ರಿ 9 ಗಂಟೆಯ ಬಳಿಕ ಅದು ಮತ್ತೆ ಜಾಗೃತಗೊಂಡಿತ್ತು ಮತ್ತು 9:30ಕ್ಕೆ ಸುನಾಮಿ ಅಪ್ಪಳಿಸಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಹುಣ್ಣಿಮೆಯ ದಿನವಾಗಿದ್ದರಿಂದ ಸುನಾಮಿ ತೀವ್ರಗೊಂಡಿತು ಎಂದರು. ಅನಾಕ್ ಕ್ರಾಕಟಾವು ಭಾಗಶಃ ಕುಸಿದು ಸುನಾಮಿ ಉಂಟಾಗಿರಬಹುದು ಎಂದು ಮಿಚಿಗನ್ ವಿವಿಯ ಭೂಕಂಪ ಭೂಗರ್ಭಶಾಸ್ತ್ರಜ್ಞ ಹಾಗೂ ಪ್ರೊಫೆಸರ್ ಬೆನ್ ವಾನ್ ಡೆರ್ ಪ್ಲಿಜಿಮ್ ತಿಳಿಸಿದರು.
ಅಗತ್ಯವಾದರೆ ಇಂಡೋನೇಷ್ಯಾಕ್ಕೆ ನೆರವು ಒದಗಿಸಲು ತಾವು ಸಜ್ಜಾಗಿದ್ದೇವೆ ಎಂದು ನೆರೆಯ ಮಲೇಷಿಯಾ ಮತ್ತು ಆಸ್ಟ್ರೇಲಿಯಾ ತಿಳಿಸಿವೆ.
2004ರಲ್ಲಿ ಹಿಂದು ಮಹಾಸಾಗರದಲ್ಲಿ ಸಂಭವಿಸಿದ್ದ ಸುನಾಮಿಗೆ 13 ರಾಷ್ಟ್ರಗಳಲ್ಲಿ 2,26,000 ಜನರು ಬಲಿಯಾಗಿದ್ದರು. ಇಂಡೋನೇಷ್ಯಾವೊಂದರಲ್ಲೇ 1.20 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದರು. 1883ರಲ್ಲಿ ಕ್ರಾಕಟಾವು ಜಾಗ್ರತಗೊಂಡಾಗ ಸರಣಿ ಸುನಾಮಿಗಳಲ್ಲಿ 36,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಶನಿವಾರದ ಸುನಾಮಿಯು ಈ ವರ್ಷ ಇಂಡೋನೇಷ್ಯಾವನ್ನು ತಲ್ಲಣಿಸಿರುವ ಸರಣಿ ಸುನಾಮಿಗಳಲ್ಲಿ ಇತ್ತೀಚಿನದಾಗಿದೆ. ನಿರಂತರ ಸುನಾಮಿಗಳಿಂದಾಗಿ ಲಂಬಕ್ ಪ್ರವಾಸಿ ದ್ವೀಪದ ಹಲವಾರು ಭಾಗಗಳು ನಾಶಗೊಂಡಿವೆ ಮತ್ತು ಸುಲವೆಸಿ ದ್ವೀಪದಲ್ಲಿ ಅವಳಿ ಭೂಕಂಪ ಮತ್ತು ಸುನಾಮಿಯಿಂದಾಗಿ ಸಾವಿರಾರು ಜನರು ಮೃತಪಟ್ಟಿದ್ದರು.