ಜ.6ರಂದು ಚಿತ್ರಸಂತೆ: ಈ ಬಾರಿ ಗಾಂಧೀಜಿಗೆ ಅರ್ಪಣೆ
ಬೆಂಗಳೂರು, ಡಿ.23: ಕಲಾವಿದರು ಮತ್ತು ಕಲಾಸಕ್ತರ ನಡುವಿನ ಬಾಂಧವ್ಯ ವೃದ್ಧಿಸುವ ಚಿತ್ರಸಂತೆ ಜ.6ರಂದು ನಡೆಯಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಎಲ್ಲರಿಗಾಗಿ ಕಲೆ ಎಂಬ ಉದ್ದೇಶದಿಂದ ನಗರದಲ್ಲಿ ರಾಷ್ಟ್ರೀಯ ಮಟ್ಟದ ಚಿತ್ರಸಂತೆಯನ್ನು ಆಯೋಜಿಸುತ್ತಿದ್ದು, ಕುಮಾರ ಕೃಪಾ ರಸ್ತೆಯಲ್ಲಿ ನಡೆಯಲಿರುವ ಇದು 16ನೆ ಚಿತ್ರ ಸಂತೆಯಾಗಿದೆ.
ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಈ ಬಾರಿಯ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಅರ್ಪಿಸಲು ಪರಿಷತ್ತಿನ ಚಿತ್ರಸಂತೆ ಸಮಿತಿ ನಿರ್ಧರಿಸಿದೆ. ಗಾಂಧಿ-150 ಎಂಬ ಶೀರ್ಷಿಕೆಯಡಿ ಗಾಂಧೀಜಿಯವರ ಕುರಿತಾದ ಚಿತ್ರಕಲೆ, ಶಿಲ್ಪಕಲೆ, ಬೊಂಬೆಗಳು ಮತ್ತಿತರ ಪ್ರದರ್ಶನ ಗ್ಯಾಲರಿಯನ್ನು ನಿರ್ಮಿಸಲಾಗುವುದು.
ಪ್ರತಿ ವರ್ಷ ಚಿತ್ರಸಂತೆಯ ವೇಳೆ ಫುಡ್ಕೋರ್ಟ್ ಅನ್ನು ಹೊರ ಆವರಣದಲ್ಲಿ ನಿರ್ಮಿಸಲಾಗುತ್ತಿತ್ತು. ಈ ಬಾರಿ ಸಿಕೆಪಿ ಆವರಣದಲ್ಲಿ ನಿರ್ಮಿಸಲಾಗುವುದು. ಈ ಬಾರಿಯ ಚಿತ್ರಸಂತೆಯಲ್ಲಿ ಭಾಗವಹಿಸುವ ಪ್ರತಿ ಕಲಾವಿದರಿಗೂ ಜಿಎಸ್ಟಿ ಘೋಷಣೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ಚಿತ್ರಸಂತೆ-2019 ಸಮಿತಿ ಅಧ್ಯಕ್ಷ ಹರೀಶ ಜೆ. ಪದ್ಮನಾಭ ತಿಳಿಸಿದರು.
ನಾನಾ ವೇದಿಕೆಗಳಡಿ ನಿತ್ಯ ಚಿತ್ರಕಲಾ ಪ್ರದರ್ಶನಗಳು ನಡೆಯುತ್ತಿದ್ದರೂ, ಹಲವು ಪ್ರತಿಭಾವಂತರಿಗೆ ವೇದಿಕೆ ಸಿಕ್ಕಿರುವುದಿಲ್ಲ. ಇಂತಹ ಕಲಾವಿದರಿ ಗಾಗಿಯೇ ಚಿತ್ರಸಂತೆಯ ಮೂಲಕ ವೇದಿಕೆ ಕಲ್ಪಿಸಲು ಪರಿಷತ್ ಕಳೆದ 15 ವರ್ಷಗಳಿಂದ ಸತತವಾಗಿ ಚಿತ್ರ ಸಂತೆಯನ್ನು ಆಯೋಜಿಸುತ್ತಾ ಬಂದಿದೆ. ಕಲಾವಿದರಿಗೆ ಮಾತ್ರವಲ್ಲ, ಈ ಮೂಲಕ ಕಲಾಸಕ್ತರು ತಮಗಿಷ್ಟವಾದ ಚಿತ್ರಗಳನ್ನು ಖರೀದಿಸಲು ಕೂಡ ಈ ಸಂತೆ ನೆರವಾಗಲಿದೆ ಎನ್ನುತ್ತಾರೆ ಸಿಕೆಪಿ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ಜೆ. ಕಮಲಾಕ್ಷಿ.
ಎಂದಿನಂತೆ ಈ ಬಾರಿಯೂ ಚಿತ್ರ ಸಂತೆ ನಡೆಯುವ ಕುಮಾರಕೃಪಾ ರಸ್ತೆಯ ಪ್ರಮುಖ ತಾಣಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು, ಸೂಕ್ತ ಪೊಲೀಸ್ ಭದ್ರತೆ ಹಾಗೂ ಕಲಾವಿದರಿಗೆ ಬೇಕಾದ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ಸಿಕೆಪಿ ಹುಟ್ಟಿಗೆ ನೆರವಾದವರ ಹೆಸರಿನಲ್ಲಿ ಪ್ರಶಸ್ತಿ:
ಚಿತ್ರಕಲಾ ಪರಿಷತ್ ಹುಟ್ಟಿಗೆ ಕಾರಣವಾದ ಆರ್ಯಮೂರ್ತಿ (ಚಿತ್ರಕಲಾ ಪರಿಷತ್ ಸಂಸ್ಥಾಪಕ ಅಧ್ಯಕ್ಷರು), ಕೇಜ್ರಿವಾಲ್ (ದೊಡ್ಡ ದಾನಿಗಳು), ಮಾಜಿ ಮುಖ್ಯಮಂತ್ರಿ ದೇವರಾಜ ಅರಸು (ಭೂಮಿ ಮಂಜೂರು ಮಾಡಿದವರು) ಇವರ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ತಲಾ 50 ಸಾವಿರ ನಗದು ಒಳಗೊಂಡ ಪ್ರಶಸ್ತಿಯನ್ನು ಪರಿಚಯಿಸಲಾಗಿದ್ದು, ಪ್ರತಿಷ್ಠಿತ ಮೂವರು ಕಲಾವಿದರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು.
ಈ ಮೂಲಕ ಚಿತ್ರಕಲಾ ಪರಿಷತ್ನ ಹುಟ್ಟಿಗೆ ಕಾರಣಕರ್ತರಾದವರನ್ನು ಸ್ಮರಿಸಲಾಗುವುದು. ಈ ಪ್ರಶಸ್ತಿ ಪ್ರತಿ ವರ್ಷವೂ ಮುಂದುವರಿಯುತ್ತದೆ. ಇದಲ್ಲದೆ ಪ್ರೊ. ಎಂಎಸ್ಎನ್ರ ಹೆಸರಿನಲ್ಲಿಯೂ ಪ್ರತಿಷ್ಠಿತ ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಚಿತ್ರಸಂತೆ-2019 ಸಮಿತಿ ಅಧ್ಯಕ್ಷ ಹರೀಶ್ ಜೆ. ಪದ್ಮನಾಭ ತಿಳಿಸಿದರು.