ವಿಶ್ವದರ್ಜೆಯ ಡ್ರಾಗ್-ಫ್ಲಿಕರ್ ಅಗತ್ಯವಿದೆ: ದಿಲಿಪ್ ಟಿರ್ಕಿ
ಕೋಲ್ಕತಾ, ಡಿ.23: ‘‘ಭುವನೇಶ್ವರದಲ್ಲಿ ಇತ್ತೀಚೆಗೆ ಕೊನೆಗೊಂಡಿರುವ ಹಾಕಿ ವಿಶ್ವಕಪ್ನಲ್ಲಿ ಭಾರತ ಇತಿಹಾಸವನ್ನು ಪುನರ್ರಚಿಸುವ ಸುವರ್ಣಾವಕಾಶವನ್ನು ಕಳೆದುಕೊಂಡಿದೆ. ವಿಶ್ವದರ್ಜೆಯ ಡ್ರಾಗ್ಫ್ಲಿಕರ್ನ್ನು ತಯಾರಿಗೊಳಿಸುವ ಅಗತ್ಯವಿದೆ’’ ಎಂದು ಮಾಜಿ ನಾಯಕ ದಿಲಿಪ್ ಟಿರ್ಕಿ ಅಭಿಪ್ರಾಯಪಟ್ಟಿದ್ದಾರೆ.
ರೂಪಿಂದರ್ಪಾಲ್ ಸಿಂಗ್ ಅನುಪಸ್ಥಿತಿಯಲ್ಲಿ ಭಾರತ ತಂಡದಲ್ಲೀಗ ಮೂವರು ಡ್ರಾಗ್-ಫ್ಲಿಕರ್ಗಳಿದ್ದಾರೆ. ಅವರುಗಳೆಂದರೆ: ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್ ಹಾಗೂ ವರುಣ್ ಕುಮಾರ್. ಆದರೆ, ಈ ಮೂವರ ಬಳಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವ ಸಾಮರ್ಥ್ಯ ಕೇವಲ ಶೇ.30.7ರಷ್ಟಿದೆ.
ಭಾರತ ಕಳೆದ ತಿಂಗಳು ಭುವನೇಶ್ವರದಲ್ಲಿ ಕೊನೆಗೊಂಡ ವಿಶ್ವಕಪ್ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದ್ದರೂ ತನಗೆ ಲಭಿಸಿದ್ದ 5 ಪೆನಾಲ್ಟಿಕಾರ್ನರ್ಗಳ ಪೈಕಿ ಕೇವಲ ಮೂರನ್ನು ಗೋಲಾಗಿ ಪರಿವರ್ತಿಸಿತ್ತು.
‘‘ನಮ್ಮ ತಂಡದಲ್ಲಿ ಹರ್ಮನ್ಪ್ರೀತ್, ಅಮಿತ್ ರೋಹಿದಾಸ್ ಹಾಗೂ ವರುಣ್ರಂತಹ ಡ್ರಾಗ್-ಫ್ಲಿಕರ್ಗಳಿದ್ದಾರೆ. ಅವರ ಮೇಲೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಪ್ರಮುಖ ಪಂದ್ಯಗಳಲ್ಲಿ ಶೇ.60ರಿಂದ 70ರಷ್ಟು ಗೋಲಾಗಿ ಪರಿವರ್ತಿಸುವ ಶಕ್ತಿಯಿರಬೇಕಾಗಿದೆ’’ ಎಂದು ಬೆಗ್ಟಂನ್ ಕಪ್ ಹಾಕಿ ಟೂರ್ನಮೆಂಟ್ ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ್ದ ಟಿರ್ಕಿ ಹೇಳಿದ್ದಾರೆ.