ಕಡಿಯಾಳಿಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಉಡುಪಿ, ಡಿ.24: ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಬಸ್ರೂರು ಬಳಕೆದಾರರ ವೇದಿಕೆ ಕುಂದಾಪುರ, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯು ಸೋಮವಾರ ಕಡಿಯಾಳಿ ಕಮಲಾ ಬಾಯಿ ಹೈಸ್ಕೂಲ್ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲತಾ ಆನಂದ ಶೇರೆಗಾರ್ ಮಾತನಾಡಿ, ಗ್ರಾಹಕರು ವಸ್ತುಗಳನ್ನು ಖರೀದಿಸುವ ಮುನ್ನ ಸಮಗ್ರವಾಗಿ ಪರಿಶೀಲಿಸಬೇಕು. ಪ್ಯಾಕೆಟ್ ಮೇಲಿನ ಅವಧಿ ಮೀರುವ ದಿನಾಂಕ, ಉತ್ಪಾದನಾ ದಿನಾಂಕಗಳನ್ನು ಪರಿಶೀಲಿಸಿ ವಸ್ತುಗಳನ್ನು ಖರೀದಿಸ ಬೇಕು. ಖರೀದಿಸುವ ವಸ್ತುಗಳಲ್ಲಿ ಯಾವುದೇ ದೋಷಗಳಿದ್ದರೆ ಗ್ರಾಹಕ ವೇದಿಕೆಗಳ ಮೂಲಕ ದೂರು ದಾಖಲಿಸಿ ಪರಿಹಾರ ಪಡೆಯಬಹುದಾಗಿದೆ. ವ್ಯಾಪಾರಿಗಳಿಂದ ಮೋಸ ಹೋಗದಂತೆ ಸದಾ ಜಾಗೃತರಾಗಿರಬೇಕು ಎಂದು ಹೇಳಿದರು.
ಶಾಲಾ ಮುಖ್ಯೋಪಧ್ಯಾಯ ಗಣೇಶ್ ಮೂರ್ತಿ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಬಳಕೆದಾರರ ವೇದಿಕೆ ವಿಶ್ವಸ್ಥ ಐ.ಕೆ.ಜಯಚಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಡಿ.ಆರ್.ಚೌಗುಲಾ, ಅಧ್ಯಾಪಕ ಸುದರ್ಶನ್ ನಾಯಕ್ ಉಪಸ್ಥಿತರಿದ್ದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಎಂ.ಆರ್.ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಪ್ರವೀಣ್ ಕಾರ್ಯಕ್ರಮ ನಿರೂ ಪಿಸಿದರು. ಈ ಸಂದರ್ಭದಲ್ಲಿ ವಿವಿಧ ರೀತಿಯ ತೂಕ ಮತ್ತು ಅಳತೆ ಯಂತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಆಮಂತ್ರಣ ಪತ್ರಿಕೆಯಲ್ಲಿದ್ದವರು ಒಬ್ಬರೂ ಇಲ್ಲ!
ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಣಗೊಂಡ ಒಬ್ಬರೇ ಒಬ್ಬ ಮುಖ್ಯ ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸದಿರುವ ಮೂಲಕ ಗ್ರಾಹಕರ ದಿನಾಚರಣೆಯು ಕಾಟಾಚಾರದ ಕಾರ್ಯಕ್ರಮವಾಗಿ ಟೀಕೆಗೆ ಗುರಿಯಾಯಿತು.
ಉದ್ಘಾಟಕರಾಗಿ ಉಸ್ತುವಾರಿ ಸಚಿವರು, ಮುಖ್ಯ ಅತಿಥಿಗಳಾಗಿ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಶಾಸಕರುಗಳು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ತಾಪಂ ಅಧ್ಯಕ್ಷರು, ನ್ಯಾಯಾಧೀಶರು, ಬಳಕೆದಾರರ ವೇದಿಕೆಯ ಪದಾಧಿಕಾರಿಗಳು, ಜಿಲ್ಲಾಧಿಕಾರಿ, ಎಸ್ಪಿ, ಸಿಇಓ ಹೆಸರನ್ನು ನಮೂದಿಸಲಾಗಿತ್ತು. ಇವರೆಲ್ಲರು ಕಾಯರ್ಕ್ರಮಕ್ಕೆ ಗೈರು ಹಾಜರಾಗಿದ್ದರು.
ಆಮಂತ್ರಣ ಪತ್ರಿಕೆಯಲ್ಲಿ ಹೆಸರೆ ಇಲ್ಲದವರು ಉದ್ಘಾಟನೆ, ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಒಂದಿಷ್ಟು ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜ ರಿದ್ದರು.