ಶಬರಿಮಲೆ: 50 ವರ್ಷ ಕೆಳಗಿನ ಇಬ್ಬರು ಮಹಿಳಾ ಯಾತ್ರಿಗಳಿಗೆ ತಡೆ
![ಶಬರಿಮಲೆ: 50 ವರ್ಷ ಕೆಳಗಿನ ಇಬ್ಬರು ಮಹಿಳಾ ಯಾತ್ರಿಗಳಿಗೆ ತಡೆ ಶಬರಿಮಲೆ: 50 ವರ್ಷ ಕೆಳಗಿನ ಇಬ್ಬರು ಮಹಿಳಾ ಯಾತ್ರಿಗಳಿಗೆ ತಡೆ](https://www.varthabharati.in/sites/default/files/images/articles/2018/12/24/169560.jpg)
ಶಬರಿಮಲೆ, ಡಿ. 25: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಆಗಮಿಸಿದ ಇಬ್ಬರು ಮಹಿಳೆಯರನ್ನು ಪ್ರತಿಭಟನಕಾರರು ಸೋಮವಾರ ಹಿಂದಕ್ಕೆ ಕಳುಹಿಸಿದ್ದಾರೆ.
ಮಲಪ್ಪುರಂನ ಬಿಂದು ಹಾಗೂ ಕೋಝಿಕೋಡ್ನ ದುರ್ಗಾ ಪೊಲೀಸ್ ಬೆಂಗಾವಲಿನಲ್ಲಿ ಶಬರಿಮಲೆಗೆ ಆಗಮಿಸಿದರು. ಆದರೆ, ಅವರನ್ನು ದೇವಾಲಯಕ್ಕಿಂತ 2 ಕಿ.ಮೀ. ಮುನ್ನ ಸಿಗುವ ಅಪ್ಪಾಚಿಮೇಡು ವಿನಿಂದ ಪ್ರತಿಭಟನಕಾರರು ಬಲವಂತವಾಗಿ ಹಿಂದೆ ಕಳುಹಿಸಿದರು.
ಅವರನ್ನು ಮತ್ತೆ ಪಂಬಾ ಮೂಲ ನೆಲೆಗೆ ಹಿಂದೆ ಕರೆದು ತರಲಾಯಿತು. ಈ ನಡುವೆ, ಮಲಪ್ಪುರಂನ ಪೆರಿಂಥಾಲ್ಮನ್ನಾದಲ್ಲಿರುವ ಬಿಂದು ಅವರ ನಿವಾಸದ ಹೊರಗೆ ಪ್ರತಿಭಟನಕಾರರು ಪ್ರತಿಭಟನೆ ನಡೆಸಿದರು.
ಬಿಂದು ಹಾಗೂ ದುರ್ಗಾ ಸೋಮವಾರ ಮುಂಜಾನೆ ಪೊಲೀಸರ ಬೆಂಗಾವಲಿನಲ್ಲಿ ಶಬರಿಮಲೆ ಯಾತ್ರೆ ಆರಂಭಿಸಿದ್ದರು.
‘‘ಅಯ್ಯಪ್ಪನನ್ನು ನೋಡಲು ನಾವು ಇಲ್ಲಿಗೆ ಬಂದಿದ್ದೇವೆ. ಸುಪ್ರೀಂ ಕೋರ್ಟ್ನ ಆದೇಶ ಜಾರಿಗೊಳಿಸಲಾಗಿದೆ. ಪೊಲೀಸರು ಭದ್ರತೆ ನೀಡುತ್ತಾರೆ ಎಂಬ ಭರವಸೆ ನಮಗಿದೆ’’ ಎಂದು ಬಿಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ರವಿವಾರ ಪೊಲೀಸರ ಬೆಂಗಾವಲಿನಲ್ಲಿ ಶಬರಿಮಲೆ ದೇವಾಲಯಕ್ಕೆ ಆಗಮಿಸಿದ 11 ಮಹಿಳೆಯರ ಗುಂಪೊಂದನ್ನು ನೂರಾರು ಪ್ರತಿಭಟನಕಾರರು ತಡೆದರು ಹಾಗೂ ಅಲ್ಲಿಂದ ಓಡಿಸಿದರು.
ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿ ಸೆಪ್ಟಂಬರ್ 28ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಈ ತೀರ್ಪಿನ ವಿರುದ್ಧ ಅಯ್ಯಪ್ಪ ಭಕ್ತರು ವ್ಯಾಪಕ ಪ್ರತಿಭಟನೆ ನಡೆಸಿದರು.
ಮುಂದಿನ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿರುವ ಶಬರಿಮಲೆಯ ವಾರ್ಷಿಕ ಯಾತ್ರೆ ಅವಧಿಯ ಮೊದಲ ಹಂತದಲ್ಲಿ ಸಾವಿರಾರು ಯಾತ್ರಾರ್ಥಿಗಳು ಆಗಮಿಸಿದ್ದಾರೆ.