ತೋಟಗಾರಿಕೆ ವಿವಿಗೆ ನೀರು-ಜಮೀನು ನೀಡಲು ಸಿದ್ಧ: ಸಿಎಂ ಕುಮಾರಸ್ವಾಮಿ

ಬಾಗಲಕೋಟೆ, ಡಿ.24: ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ದೇಶದಲ್ಲಿಯೇ ಮಾದರಿಯಾಗಿದ್ದು, ಸದ್ಯ ಅವಶ್ಯವಿರುವ ಭೂಮಿ ಹಾಗೂ ನೀರು ಪೂರೈಸುವ ಕಾರ್ಯ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾಸ್ವಾಮಿ ಭರವಸೆ ನೀಡಿದ್ದಾರೆ.
ಸೋಮವಾರ ನಗರದ ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಎರಡನೇ ದಿನದ ತೋಟಗಾರಿಕೆ ಮೇಳವನ್ನು ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಸತತವಾಗಿ ಬರಗಾಲದಿಂದ ರೈತ ಬಳಲುತ್ತಿದ್ದು, ರೈತರಲ್ಲಿ ಆತ್ಮಸ್ಥೈರ್ಯ ತುಂಬಿಸುವ ನಿಟ್ಟಿನಲ್ಲಿ ಕೃಷಿಯಲ್ಲಿ ನೂತನ ಮಾದರಿಯ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಮಾಡಬೇಕು. ತೋಟಗಾರಿಕೆ ವಿವಿಗೆ ಬೇಕಾದ ಅಗತ್ಯ ನೀರು ಹಾಗೂ 1000 ಎಕರೆ ಜಮೀನು ಖರೀದಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದರು.
ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಲಾದ ಆಲಮಟ್ಟಿ ಹಿನ್ನೀರನ್ನು ಬಳಸಿಕೊಳ್ಳಲು 2-3 ದಿನಗಳ ಒಳಗಾಗಿ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಇದಕ್ಕೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಲಾಗುವುದು. ಅಲ್ಲೇ ಮುಂದಿನ ಜನವರಿ ತಿಂಗಳಿನ ಮೊದಲ ವಾರದಲ್ಲಿ ಜಿಲ್ಲೆಗೆ ಬರುವ ಮೂಲಕ ಬೆಳಗ್ಗೆಯಿಂದ ಸಂಜೆವರೆಗೆ ಇದ್ದು, ಜಿಲ್ಲೆಯ ಸಂಪೂರ್ಣ ಅಭಿವೃದ್ದಿಗೆ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಲಾಗುವುದು ಎಂದು ಅವರು ಹೇಳಿದರು.
ನಮ್ಮ ಆಡಳಿತದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವದಿಲ್ಲ. ಈ ಮೊದಲು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿಯೇ ಪ್ರಥಮ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದೆ. ಈ ಬಾರಿ ತಮ್ಮೆಲ್ಲರ ಸಹಕಾರದಿಂದ ಮುಖ್ಯಮಂತ್ರಿಯಾಗಿದ್ದು, ರೈತರಿಗಾಗಿ ಹಾಗೂ ನೀರಾವರಿಗಾಗಿ ಎಲ್ಲ ರೀತಿಯ ಅನುಕೂಲ ಮಾಡಿಕೊಡುವುದಾಗಿ ಅವರು ತಿಳಿಸಿದರು.
ವಿಜ್ಞಾನಿಗಳು ಕಂಡು ಹಿಡಿದ ಸಂಶೋಧನೆಗಳು ಕೇವಲ ಪ್ರಾಯೋಗಿಕವಾಗದೇ ಈ ಭಾಗದ ಪ್ರತಿಯೊಬ್ಬ ರೈತರ ಜಮೀನಿಗೂ ಅದರ ಉಪಯೋಗವಾಗುವಂತೆ ಮಾಡಬೇಕು. ರೈತರು ಗ್ರಾಮೀಣ ಮಟ್ಟದ ಪ್ರಗತಿಪರ ರೈತರು, ದೊಡ್ಡ ರೈತರು, ಚಿಕ್ಕ ಹಿಡುವಳಿದಾರರು ಸೇರಿಕೊಂಡು ತಾವು ಬೆಳೆಯುವ ಬೆಳೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಹನಿ ನೀರಾವರಿ, ತುಂತುರು ನೀರಾವರಿ ಉಪಯೋಗಿಸಿಕೊಂಡು ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯುವಂತಹ ಬೆಳೆ ಬೆಳೆದು, ಆರ್ಥಿಕವಾಗಿ ಅಭಿವೃದ್ದಿ ಹೊಂದುವ ಮೂಲಕ ಮುಂದಿನ ದಿನಗಳಲ್ಲಿ ಸಾಲಗಾರರೆಂಬ ಹಣೆಪಟ್ಟಿಯಿಂದ ಹೊರಬರಬೇಕೆಂದು ಅವರು ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ರಾಷ್ಟ್ರದಲ್ಲಿಯೇ ಮಾದರಿಯಾದ ಈ ತೋಟಗಾರಿಕಾ ವಿವಿಗೆ ಸರಕಾರ ಅನೇಕ ಸೌಲಭ್ಯಗಳನ್ನು ಒದಗಿಸಿದರೂ ಅದು ಇನ್ನು ಕಡಿಮೆಯೇ, ತುಂಗಭದ್ರಾ ಮತ್ತು ಕೃಷ್ಣಾ ನದಿಯ ಹಿನ್ನೀರನ್ನು ಉಪಯೋಗಿಸಿ 3 ರಿಂದ 4 ಸಾವಿರ ಎಕರೆ ಜಮೀನಲ್ಲಿ ಕೃಷಿಗೆ ಸಂಬಂಧಿಸಿದಂತೆ ಹೈನುಗಾರಿಕೆ, ಪಶುಸಂಗೋಪನಾ, ಕೃಷಿ, ತೋಟಗಾರಿಕೆ, ತರಕಾರಿ ಮತ್ತು ವಿವಿಧ ಹೂ ಬೆಳೆಗಳ ಒಂದೇ ಸೂರಿನಡಿಯಲ್ಲಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಭಾಗದಲ್ಲಿ ಅತೀ ಹೆಚ್ಚು ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಯುತ್ತಿರುವದರಿಂದ ಅದಕ್ಕೆ ತಗಲುವ ರೋಗ ನಿಯಂತ್ರಣ ಇದುವರೆಗೂ ಸಾಧ್ಯವಾಗುತ್ತಿಲ್ಲ. ತೋಟಗಾರಿಕೆ ವಿವಿಯ ವಿಜ್ಞಾನಿಗಳು ಅಂತಹ ರೈತರ ತೋಟಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣಗೊಳಿಸುವಂತಹ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಶಾಸಕ ವೀರಣ್ಣ ಚರಂತಿಮಠ, ತೋಟಗಾರಿಕೆ ವಿವಿ ಕುಲಪತಿ ಡಾ.ಕೆ.ಎಂ.ಇಂದಿರೇಷ, ವಿಧಾನಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ್, ಹನುಮಂತ ನಿರಾಣಿ, ಜಿ.ಪಂ.ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ.ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







