ಗಡ್ಕರಿ ಹೇಳಿಕೆ ತಿರುಚಿದ ವಿನೋದ್ ದುವಾ ಶೋ, ಬಳಿಕ ಸ್ಪಷ್ಟೀಕರಣ
![ಗಡ್ಕರಿ ಹೇಳಿಕೆ ತಿರುಚಿದ ವಿನೋದ್ ದುವಾ ಶೋ, ಬಳಿಕ ಸ್ಪಷ್ಟೀಕರಣ ಗಡ್ಕರಿ ಹೇಳಿಕೆ ತಿರುಚಿದ ವಿನೋದ್ ದುವಾ ಶೋ, ಬಳಿಕ ಸ್ಪಷ್ಟೀಕರಣ](https://www.varthabharati.in/sites/default/files/images/articles/2018/12/25/169611.png)
ಹೊಸದಿಲ್ಲಿ,ಡಿ.24: ಖ್ಯಾತ ಪತ್ರಕರ್ತ ವಿನೋದ್ ದುವಾ ಎಚ್ಡಬ್ಲೂ ನ್ಯೂಸ್ ಚಾನಲ್ ನಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿಯ ಹೇಳಿಕೆಯನ್ನು ತಪ್ಪಾಗಿ ವಿಶ್ಲೇಷಿಸಿದ್ದು ನಂತರ ಇದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ವಿನೋದ್ ದುವಾ ಶೋನ ಏಳನೇ ಆವೃತ್ತಿಯಲ್ಲಿ ದುವಾ, ಗಡ್ಕರಿ ಸಂದರ್ಶನವೊಂದನ್ನು ತೋರಿಸಿದ್ದರು. ಈ ಸಂದರ್ಶನದಲ್ಲಿ ಗಡ್ಕರಿ, ತನ್ನ ಸಚಿವಾಲಯದ ಯೋಜನೆಗಳು ಸ್ಥಗಿತಗೊಳ್ಳಲು ಮತ್ತು ಎನ್ಪಿಎಗಳು ಹೆಚ್ಚಾಗಲು ಬಿಜೆಪಿ ಸರಕಾರ ಕಾರಣ ಎಂದು ತಿಳಿಸಿದ್ದರು ಎಂದು ದುವಾ ಹೇಳಿಕೆ ನೀಡಿದ್ದರು. ಇದರ ಜೊತೆಗೆ ತಾನು ಯಾವ ರೀತಿ ತನ್ನ ಕ್ಷೇತ್ರಕ್ಕೆ ಪುನಶ್ಚೇತನ ತುಂಬಿದೆ ಎಂಬ ಬಗ್ಗೆ ಸಚಿವರು ತಿಳಿಸುವ ಸಂದರ್ಶನದ ದೃಶ್ಯಗಳನ್ನೂ ಹಾಕಲಾಗಿತ್ತು. ಸಂದರ್ಶನವು ಪ್ರಸಾರವಾಗುತ್ತಿದ್ದಂತೆ ಗಡ್ಕರಿಯ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಿಂದಿನ ಹೇಳಿಕೆಯ ನಿಜವಾ ವಿಡಿಯೊವನ್ನು ಹಾಕಲಾಗಿತ್ತು. ಅದರಲ್ಲಿ ಗಡ್ಕರಿ ಹಿಂದಿನ ಯುಪಿಎ ಸರಕಾರವನ್ನು ಟೀಕಿಸುತ್ತಿರುವುದು ಸ್ಪಷ್ಟವಾಗಿತ್ತು. ಈ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಎಚ್ಚೆತ್ತ ಸುದ್ದಿ ವಾಹಿನಿ ದುವಾ ಕಾರ್ಯಕ್ರಮವನ್ನು ತೆಗೆದುಹಾಕಿದ್ದು ಸ್ಪಷ್ಟೀಕರಣ ನೀಡಿದೆ. ಈ ದ್ಯಶ್ಯಾವಳಿಗಳನ್ನು ದುವಾಗೆ ತಪ್ಪಾಗಿ ಕಳುಹಿಸಲಾಗಿದೆ. ಸರಿಯಾಗಿ ಹೇಳಿಕೆ ನೀಡಲಾಗಿರುವ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಸಾರ ಮಾಡಲಾಗುವುದು ಎಂದು ಸುದ್ದಿ ವಾಹಿನಿ ತಿಳಿಸಿದೆ.