ಡಿ.27ರಂದು ಅಡ್ಯಾರ್ ಕಣ್ಣೂರಿಗೆ ನೌಶಾದ್ ಬಾಖವಿ
ಪಟ್ಟಿಕಾಡ್ ಜಾಮಿಯ ನೂರಿಯ್ಯಾ ಅರಬಿಯ್ಯಾ ಸನದುದಾನದ ಪ್ರಚಾರ ಸಮ್ಮೇಳನ

ಮಂಗಳೂರು, ಡಿ.25: ಕೇರಳದ ಪಟ್ಟಿಕಾಡ್ ಜಾಮಿಯ ನೂರಿಯ್ಯಾ ಅರಬಿಯ್ಯಾ ಇದರ 56ನೇ ವಾರ್ಷಿಕ ಮತ್ತು 54ನೇ ಸನದುದಾನ ಮಹಾ ಸಮ್ಮೇಳನದ ಪ್ರಚಾರ ಸಮ್ಮೇಳನ ಡಿ.27ರಂದು ಅಡ್ಯಾರ್ ಕಣ್ಣೂರು ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಅಂತರ್ರಾಷ್ಟ್ರೀಯ ವಾಗ್ಮಿ ಎ.ಎಂ.ನೌಶಾದ್ ಬಾಖವಿ ಆಗಮಿಸುವರು.
ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಒಕ್ಕೂಟ ಡಿಕೆಎಸ್ಎಫ್ ಅಧ್ಯಕ್ಷ ಅಹ್ಮದ್ ನಈಂ ಮುಕ್ವೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಡಿಕೆಎಸ್ಎಫ್ ಮತ್ತು ಎಸ್ಕೆಎಸ್ಸೆಸ್ಸೆಫ್ ಅಡ್ಯಾರ್ ಕಣ್ಣೂರು ಕ್ಲಸ್ಟರ್ ಜಂಟಿ ಆಶ್ರಯದಲ್ಲಿ ನಡೆಯುವ ಪ್ರಚಾರ ಸಮ್ಮೇಳನದ ಅಂಗವಾಗಿ ಅಂದು ಮುಂಜಾನೆ ಸುಬ್ ಹಿ ನಮಾಝ್ ಬಳಿಕ ಶಂಸುಲ್ ಉಲಮಾ ಮೌಲಿದ್ ಪಾರಾಯಣ ಅಲ್ಹಾಜ್ ಉಮರ್ ಫೈಝಿ ಸಾಲ್ಮರ ನೇತೃತ್ವದಲ್ಲಿ ನಡೆಯಲಿದೆ. ಬಳಿಕ ಅಬ್ದುರ್ರಹ್ಮಾನ್ ಹಾಜಿ ಸಿತಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಅಧ್ಯಯನ ಶಿಬಿರ ಆರಂಭಗೊಳ್ಳಲಿದೆ. ‘ಇಸ್ಲಾಮಿಕ್ ಶರೀಅತ್ ಮತ್ತು ಸಮಕಾಲೀನ ಚರ್ಚೆಗಳು’ ಎಂಬ ವಿಷಯದಲ್ಲಿ ಧಾರ್ಮಿಕ ವಿದ್ವಾಂಸ ಲಿಯಾವುದ್ದೀನ್ ಫೈಝಿ ವಿಷಯ ಮಂಡಿಸಲಿದ್ದಾರೆ. ಸಂಜೆ 4 ಗಂಟೆಗೆ ಆಧ್ಯಾತ್ಮಿಕ ಸಂಗಮಕ್ಕೆ ಸೂಫಿವರ್ಯ ಶೈಖುನಾ ಏಲಂಕುಳಂ ಬಾಪು ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್, ಪಾಣಕ್ಕಾಡ್ ಸೈಯದ್ ಸಾಬಿಕಲಿ ಶಿಹಾಬ್ ತಂಙಳ್, ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಅನ್ಸಾರ್ ಫೈಝಿ ಬುರ್ಹಾನಿ, ಸಂಚಾಲಕ ಹಮೀದ್ ಕಣ್ಣೂರು, ಹಮೀದ್ ಹಾಜಿ ಬೋರುಗುಡ್ಡೆ ಉಪಸ್ಥಿತರಿದ್ದರು.