ಮಲ್ಪೆ ಬೋಟ್ ನಾಪತ್ತೆಯಾಗಿ 10 ದಿನ; ಇನ್ನೂ ಸಿಗದ ಸುಳಿವು
ಮಲ್ಪೆ, ಡಿ.25: ಮಲ್ಪೆ ಬಂದರಿನಿಂದ ಬೋಟಿನ ಮಾಲಕರು ಸೇರಿದಂತೆ ಒಟ್ಟು ಏಳು ಮಂದಿ ಮೀನುಗಾರರೊಂದಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿರುವ ‘ಸುವರ್ಣ ತ್ರಿಭುಜ’ ಹೆಸರಿನ ಮೀನುಗಾರಿಕಾ ಬೋಟ್ನ ಕುರಿತು ಯಾವುದೇ ಸುಳಿವಾಗಲಿ, ಮಾಹಿತಿ ಯಾಗಲೀ ಇದುವರೆಗೆ ಸಿಕ್ಕಿಲ್ಲ ಎಂದು ವಿವಿಧ ಮೂಲಗಳು ತಿಳಿಸಿವೆ.
ಗೋವಾ-ಮಹಾರಾಷ್ಟ್ರದ ನಡುವೆ ರತ್ನಗಿರಿ ಪರಿಸರದ ಸಮುದ್ರದಲ್ಲಿ ಬೋಟು ನಾಪತ್ತೆಯಾಗಿರುವ ಮೊದಲ ಮಾಹಿತಿ ಬಂದಿರುವುದು ಡಿ.15 ರಂದು ರಾತ್ರಿ ಒಂದು ಗಂಟೆ ಸುಮಾರಿಗೆ. ಇದೀಗ ಬೋಟು ಯಾವುದೇ ಸುಳಿವು ನೀಡದೇ ನಾಪತ್ತೆಯಾಗಿ ಇಂದಿಗೆ 10 ದಿನಗಳಾಗಿವೆ. ಈ ಬೋಟಿನಲ್ಲಿ ಬೋಟಿನ ಮಾಲಕರಾದ ಬಡಾನಿಡಿಯೂರಿನ ಚಂದ್ರಶೇಖರ್ ಸೇರಿದಂತೆ ಇಬ್ಬರು ಮಲ್ಪೆಯ ಮೀನುಗಾರರಾಗಿದ್ದರೆ, ತಲಾ ಇಬ್ಬರು ಕುಮಟ ಮತ್ತು ಭಟ್ಕಳದವರು, ಇನ್ನೊಬ್ಬರು ಉತ್ತರ ಕನ್ನಡದ ಮಂಕಿಯವರೆಂದು ತಿಳಿದು ಬಂದಿದೆ. ಮೊದಲು ಎಂಟು ಮಂದಿ ಬೋಟಿನಲ್ಲಿದ್ದರೆಂದು ಹೇಳಲಾಗಿದ್ದರೂ, ಒಬ್ಬರು ವೈಯಕ್ತಿಕ ಕಾರಣಕ್ಕಾಗಿ ಬೋಟಿನಲ್ಲಿ ತೆರಳಿರಲಿಲ್ಲ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ಇದೀಗ ಬೋಟಿಗಾಗಿ ಮಂಗಳೂರು, ಗೋವಾ ಹಾಗೂ ಮಹಾರಾಷ್ಟ್ರದ ಕೋಸ್ಟ್ಗಾರ್ಡ್ ತನ್ನೆರಡು ಹೆಲಿಕಾಫ್ಟರ್ಗಳೊಂದಿಗೆ ಗೋವಾ- ಮಹಾರಾಷ್ಟ್ರ ಹಾಗೂ ರತ್ನಗಿರಿಯ ಸಮುದ್ರದುದ್ದಕ್ಕೂ ಹುಡುಕಾಟ ನಡೆಸಿದೆ. ಇಂದು ನೌಕಾ ಪಡೆಯ ಹಡಗು ಹಾಗೂ ಸಿಬ್ಬಂದಿಗಳು ಸಹ ಹುಡುಕಾಟದಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರೊಂದಿಗೆ ಮಹಾರಾಷ್ಟ್ರ, ಗೋವಾ, ಕಾರವಾರ ಹಾಗೂ ಮಲ್ಪೆಯಿಂದ ತೆರಳಿದ ಮೀನುಗಾರರು ಸಹ ಬೋಟಿನ ಸುಳಿವಿಗಾಗಿ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದಂದಿನಿಂದ ಮಂಗಳೂರು ಕೋಸ್ಟಲ್ಗಾರ್ಡ್ನೊಂದಿಗೆ ಇದೀಗ ಗೋವಾ, ಮಹಾರಾಷ್ಟ್ರದ ಪಡೆಗಳೂ ಸೇರಿ ಹುಡುಕಾಟದಲ್ಲಿ ತೊಡಗಿವೆ. ಅಲ್ಲದೇ ಪೊಲೀಸರೂ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆಂದು ಮಾಹಿತಿ ಬಂದಿದೆ. ಆದರೆ ಈವರೆಗೆ ನಾಪತ್ತೆಯಾದ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟಿನ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಬೋಟಿನಲ್ದಿದ್ದ ಮೀನುಗಾರರ ಮನೆಯವರೊಂದಿಗೆ ನಾವು ಸಂಪರ್ಕದಲ್ಲಿದ್ದು, ಅವರಿಗೆ ಮಾಹಿತಿಗಳನ್ನು ನೀಡುತಿದ್ದೇವೆ ಎಂದು ಉಡುಪಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ತಿಳಿಸಿದರು.
ಮೀನುಗಾರರ ಸಂಘದ ಅವಿರತ ಪ್ರಯತ್ನ: ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ನಾವು ದಿನವಿಡೀ ಈ ಬಗ್ಗೆ ಇಲ್ಲಿಂದ ನಮ್ಮ ಕೈಲಾದ ಪ್ರಯತ್ನ ನಡೆಸುತಿದ್ದೇವೆ. ಬೆಳಗ್ಗೆ ಮೀನುಗಾರರ ಸಂಘದ ಸಭೆ ನಡೆದು ಜಿಲ್ಲಾಧಿಕಾರಿ, ಎಸ್ಪಿ, ಶಾಸಕರು, ಮೀನುಗಾರಿಕಾ ಇಲಾಖೆಗೆ ಮನವಿ ಅರ್ಪಿಸಲು ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿಯವರು ರಜೆಯ ಮೇಲಿರುವುದರಿಂದ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಲಾಯಿತು. ಅವರು ತಕ್ಷಣ ಗೋವಾ ಹಾಗೂ ಮಹಾರಾಷ್ಟ್ರದ ಕೋಸ್ಟ್ ಗಾರ್ಡ್ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತನಾಡಿದ್ದು, ಅಲ್ಲಿ ಎರಡು ಹೆಲಿಕಾಪ್ಟರ್ ಗಳೊಂದಿಗೆ ಪಶ್ಚಿಮ ಕರಾವಳಿಯಲ್ಲಿ ಹುಡುಕಾಡುತ್ತಿರುವ ಮಾಹಿತಿ ಸಿಕ್ಕಿತು ಎಂದರು.
ಬಳಿಕ ಪ್ರಮೋದ್ ಮಧ್ವರಾಜ್ರೊಂದಿಗೆ ಮಲ್ಪೆಯ ಕೋಸ್ಟ್ಗಾರ್ಡ್ ಅಧಿಕಾರಿಗಳನ್ನು ಕಂಡು ಮಾತನಾಡಿದ್ದು, ಮಲ್ಪೆಯಿಂದ ತೆರಳಿದ ಮೀನುಗಾರ ರೊಂದಿಗೆ ಕಾರವಾರದ ಕೋಸ್ಟ್ಗಾರ್ಡ್ ಅಧಿಕಾರಿಗಳು ರತ್ನಗಿರಿಗೆ ತೆರಳಿ ಸಮುದ್ರದಲ್ಲಿ ಹುಡುಕಲು ವ್ಯವಸ್ಥೆ ಮಾಡಲಾಯಿತು ಎಂದರು. ಬಳಿಕ ಶಾಸಕ ರಘುಪತಿ ಭಟ್ ಅವರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರನ್ನು ಸಂಪರ್ಕಿಸಿ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಯಿತು. ಅವರು ನಾಪತ್ತೆಯಾ ಗಿರುವ ಬೋಟಿನ ಪತ್ತೆಗೆ ನೌಕಾಪಡೆಯ ನೆರವು ಪಡೆಯಲು ಸಹಕರಿಸಿದರು ಎಂದರು.
ನದಿಗಳಲ್ಲಿ ಹುಡುಕಾಟ: ಈ ನಡುವೆ ಬೋಟು ನಾಪತ್ತೆಯಾಗಿರುವ ಗೋವಾದಿಂದ ಮಹಾರಾಷ್ಟ್ರದ ರತ್ನಗಿರಿಯವರೆಗಿನ ಸಮುದ್ರದ ಇಂಚಿಂಚನ್ನೂ ಹುಡುಕಲಾಗಿದ್ದು, ಬೋಟಿನ ಹಾಗೂ ಅದರಲ್ಲಿದ್ದ ಮೀನುಗಾರರ ಯಾವುದೇ ಸಣ್ಣ ಸುಳಿವು ಸಿಗದ ಹಿನ್ನೆಲೆಯಲ್ಲಿ ಆಸುಪಾಸಿನಲ್ಲಿ ಸಮುದ್ರ ಸೇರುವ ದೊಡ್ಡ ನದಿಗಳತ್ತ ಗಮನ ಕೇಂದ್ರೀಕರಿಸಿ ಹುಡುಕಾಟ ನಡೆಸಲು ನಿರ್ಧರಿಸಲಾಗಿದೆ. ಈ ಬೋಟು ಕಲರ್ ಕೋಡಿಂಗ್ ಆಗಿರುವುದರಿಂದ ಇದನ್ನು ಸುಲಭದಲ್ಲಿ ಪತ್ತೆ ಮಾಡಬಹುದಾಗಿದೆ ಎಂದು ಸತೀಶ್ ಕುಂದರ್ ತಿಳಿಸಿದರು. ಕೆಲವೊಮ್ಮೆ ಬೋಟುಗಳು ಅಕಸ್ಮಿಕವಾಗಿ ಹಾಗೂ ಬಲಾತ್ಕಾರವಾಗಿ ನದಿಗಳಲ್ಲಿ ಸಾಗುವ ಸಾಧ್ಯತೆಗಳಿುತ್ತವೆ ಎಂದು ಅವರು ನುಡಿದರು.
ಯಾವುದೇ ಭಯೋತ್ಪಾದಕ ಚಟುವಟಿಕೆಯಾಗಲಿ, ಸಮುದ್ರ ಕಳ್ಳರು ಬಂದು ಬೋಟನ್ನು ಅಪಹರಿಸಿರುವ ಸಾಧ್ಯತೆಯನ್ನು ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಬೋಟು ನಮ್ಮ ನಿಗದಿತ ಗಡಿಯೊಳಗೆ ಮೀನುಗಾರಿಕೆ ನಡೆಸುತ್ತಿದ್ದುದರಿಂದ, ಕೋಸ್ಟ್ಗಾರ್ಡ್ ಹಾಗೂ ನೌಕಾಪಡೆಯ ನಿಗಾದ ನಡುವೆ ಹೊರಗಿನವರು ಬಂದು ಬೋಟ್ ಅಪಹರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದರು.
ಬೋಟ್ ಯಾವುದೇ ಕಾರಣದಿಂದ ಸಮುದ್ರದಲ್ಲಿ ಮುಳುಗಿದ್ದರೆ, ಅದರ ಯಾವುದಾದರೂ ಅವಶೇಷ ಇಷ್ಟರೊಳಗೆ ನಮಗೆ ಗೋಚರಿಸಬೇಕಿತ್ತು. ಆದರೆ ಅಂಥಾ ಯಾವುದೇ ಸುಳಿವು ಇದುವರೆಗೆ ಸಿಕ್ಕಿಲ್ಲ. ಆದರೂ ಘಟನೆ ನಡೆದು ಹತ್ತು ದಿನ ಕಳೆದಿರುವುದರಿಂದ ಬೋಟಿನ ‘ನಿಗೂಢ’ ನಾಪತ್ತೆ ಚಿಂತೆಗೆ ಕಾರಣವಾಗಿದೆ ಎಂದು ಸತೀಶ್ ಕುಂದರ್ ನುಡಿದರು.