ಮಲ್ಪೆ ಬೋಟು ನಾಪತ್ತೆ: 3 ತಂಡಗಳಿಂದ ನದಿಗಳಲ್ಲಿ ಹುಡುಕಾಟ
ಸ್ಥಳೀಯರಿಂದ ಅಪಹರಣ ?

ಉಡುಪಿ, ಡಿ. 26: ಏಳು ಮಂದಿ ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಡಿ.15ರ ರಾತ್ರಿಯಿಂದ ನಾಪತ್ತೆ ಯಾಗಿರುವ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ಬೋಟಿನ ಪತ್ತೆಗಾಗಿ ಇಂದು ಸಹ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ಬೋಟನ್ನು ಹುಡುಕಲು ಮಲ್ಪೆಯಿಂದ ತೆರಳಿರುವ ಎಂಟು ಮಂದಿ ಮೀನುಗಾರರು ಇಂದು ಕಾರವಾರದ ಕರಾವಳಿ ಕಾವಲು ಪಡೆಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿದ್ದು, ಮಹಾರಾಷ್ಟ್ರದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳೊಂದಿಗೆ ಇಂದು ಮೂರು ತಂಡಗಳಲ್ಲಿ ಅರಬೀ ಸಮುದ್ರ ಸೇರುವ ನದಿಗಳಲ್ಲಿ ಹುಡುಕಾಟ ನಡೆಸಿದ್ದಾರೆ. ನದಿಗಳಲ್ಲಿ ಸಾಕಷ್ಟು ದೂರ ಕ್ರಮಿಸಿದ್ದರೂ ಬೋಟಿನ ಹಾಗೂ ಮೀನುಗಾರರ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಅವರು ವಿವರಿಸಿದರು.
ಬೋಟು ಸಮುದ್ರದಲ್ಲಿ ಮುಳುಗಿರುವ ಸಾಧ್ಯತೆ ತೀರಾ ಕ್ಷೀಣವಾಗಿದ್ದು, ಗೋವಾ-ಮಹಾರಾಷ್ಟ್ರ ಗಡಿಯಲ್ಲಿರುವ ಹಾಗೂ ರತ್ನಗಿರಿಯ ಸ್ಥಳೀಯ ಮೀನುಗಾರರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತಿದ್ದಾರೆ ಎಂದು ಕುಂದರ್ ತಿಳಿಸಿದರು. ಬೋಟು ಸಮುದ್ರದಲ್ಲಿ ಮುಳುಗಿದ್ದರೆ ಸದಾ ಅಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿರುವ ತಮ್ಮ ಗಮನಕ್ಕೆ ಬರಲೇ ಬೇಕಿತ್ತು ಎಂದರು.
ಹುಡುಕಾಟ ಮುಂದುವರಿಯಲಿದೆ. ಸದ್ಯಕ್ಕೆ ಸ್ಥಳೀಯ ಯಾವುದೋ ತಂಡ ಬೋಟನ್ನು ಅಪಹರಿಸಿರುವ ಸಾದ್ಯತೆಯಷ್ಟೇ ಕಂಡುಬರುತ್ತಿದೆ. ಆದರೆ ಈ ಬಗ್ಗೆ ಖಚಿತವಾಗಿ ಹೇಳಲು ಯಾವುದೇ ಸುಳಿವು, ಪುರಾವೆ ನಮಗೆ ಇದುವರೆಗೆ ಸಿಕ್ಕಿಲ್ಲ ಎಂದು ಸತೀಶ್ ಕುಂದರ್ ತಿಳಿಸಿದ್ದಾರೆ.
ಕೋಸ್ಟ್ಗಾರ್ಡ್ನಿಂದ ಕಾರ್ಯಾಚರಣೆ
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟಿನ ಸುಳಿವು ಇದುವರೆಗೆ ಸಿಕ್ಕಿಲ್ಲ ಎಂದು ಖಚಿತ ಪಡಿಸಿದರು.
ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳು ಇಂದು ತಮ್ಮನ್ನು ಭೇಟಿಯಾಗಿ ಮನವಿ ಅರ್ಪಿಸಿದ್ದು, ಅವರು ಸಮುದ್ರ ಸೇರುವ ನದಿಗಳಲ್ಲೂ ಹುಡುಕಾಟ ನಡೆಸುವಂತೆ ತಿಳಿಸಿದ್ದು, ಅದನ್ನು ಮಹಾರಾಷ್ಟ್ರ ಕೋಸ್ಟ್ಗಾರ್ಡ್ಗೆ ತಿಳಿಸಲಾಗಿದೆ ಎಂದರು.
ಈ ಬೋಟು ಡಿ.15ರ ರಾತ್ರಿ ನಾಪತ್ತೆಯಾಗುವ ಮೊದಲು ಸಿಕ್ಕಿದ ಕೊನೆಯ ಸಿಗ್ನಲ್ ಅತ್ಯಂತ ದುರ್ಬಲವಾಗಿದ್ದು, ಅದು ಮಹಾರಾಷ್ಟ್ರ ಗಡಿಯ ಯಾವುದೋ ಹಳ್ಳಿಯನ್ನು ತೋರಿಸುತ್ತಿದೆ. ಆದರೆ ಅದು ಯಾವುದೆಂದು ಸ್ಪಷ್ಟವಾಗುತ್ತಿಲ್ಲ. ಹೀಗಾಗಿ ಅಲ್ಲಿನ ಬಿಎಸ್ಎಲ್ಎನ್ನ್ನು ಸಂಪರ್ಕಿಸಿ ಅವರ ನೆರವನ್ನು ಪಡೆದು ಹಳ್ಳಿಯ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ಮಂಗಳೂರು, ಗೋವಾ, ಮಹಾರಾಷ್ಟ್ರದ ಕೋಸ್ಟ್ಗಾರ್ಡ್ನೊಂದಿಗೆ ಹೆಲಿಕಾಫ್ಟರ್ ಸಹ ಕಾರ್ಯಾಚರಣೆಯಲ್ಲಿದೆ. ಪತ್ತೆಗೆ ಸಾಧ್ಯವಿರುವ ಎಲ್ಲಾ ಪ್ರಯತ್ನ ನಡೆಯುತ್ತಿದೆ ಎಂದರು.
ಮಲ್ಪೆಯಿಂದ ಒಟ್ಟು ಆರು ಬೋಟುಗಳು ಮೀನುಗಾರಿಕೆಗೆ ತೆರಳಿದ್ದು, ಇವುಗಳಲ್ಲಿ ಐದು ಬೋಟುಗಳು ಡಿ.15ರಂದು ಮರಳಿ ಬಂದಿವೆ. ಡಿ.16ಕ್ಕೂ ‘ಸುವರ್ಣ ತ್ರಿಭುಜ’ ಬೋಟು ಬಾರದಾಗ ಇಲ್ಲಿಂದ ಕೆಲವರು ಸ್ಥಳಕ್ಕೆ ತೆರಳಿ ಕೆಲವು ದಿನ ಹುಡುಕಾಡಿದ್ದಾರೆ. ಡಿ.20ರವರೆಗೆ ಹುಡುಕಾಡಿದರೂ ಬೋಟು ಪತ್ತೆಯಾಗ ದಾಗ, ಮಲ್ಪೆಗೆ ಮರಳಿ ಬಂದು ಅವರು ಮಲ್ಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ದೂರು ದಾಖಲಿಸುವಲ್ಲಿ ವಿಳಂಬವಾಗಿದೆ. ಸುದ್ದಿ ತಿಳಿದ ತಕ್ಷಣ ಕೋಸ್ಟ್ಗಾರ್ಡ್ ಪತ್ತೆ ಕಾರ್ಯಕ್ಕೆ ಮುಂದಾಗಿದೆ ಎಂದರು.
ಸ್ಥಳೀಯರಿಂದ ಅಪಹರಣ ?
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೋಟಿನ ಬಗ್ಗೆ ಯಾವುದೇ ಸುಳಿವು ಇದುವರೆಗೆ ಸಿಗದೇ ಇದ್ದರೂ, ರತ್ನಗಿರಿ, ದೇವಗಢ ಹಾಗೂ ಮೇಲ್ಪಾಣಿಗಳಲ್ಲಿ ಕೇಳಿಬರುತ್ತಿರುವ ಗಾಳಿಸುದ್ದಿಗಳಲ್ಲಿ ಯಾವುದೋ ಸ್ಥಳೀಯ ತಂಡ ಬೋಟನ್ನು ಅಪಹರಿಸಿರುವ ಬಗ್ಗೆ ಉಲ್ಲೇಖಗಳಿವೆ ಎಂದು ಬಲ್ಲ ಮೂಲವೊಂದು ತಿಳಿಸಿದೆ.
ಬೋಟಿನ ಪತ್ತೆಗೆ ಕಾರ್ಯಾಚರಣೆ ಬಿರುಸುಗೊಂಡ ಹಿನ್ನೆಲೆಯಲ್ಲಿ ಈ ತಂಡ, ಬೋಟನ್ನು ದೂರದ ಬಂದರುಗಳಲ್ಲಿ ಪ್ರತಿದಿನ ಸ್ಥಳವನ್ನು ಬದಲಾಯಿಸುತ್ತಿದೆ ಎಂದು ಖಚಿತಗೊಳ್ಳದ ಸುದ್ದಿಯನ್ನು ಉಲ್ಲೇಖಿಸಿ ಮೂಲ ಹೇಳುತ್ತಿದೆ.