ಕಡೆಗಣಿಸಿದರೆ ಏಕಾಂಗಿಯಾಗಿ ಸ್ಪರ್ಧೆ: ಬಿಜೆಪಿಗೆ ಎರಡು ಮಿತ್ರಪಕ್ಷಗಳ ಎಚ್ಚರಿಕೆ
ಲೋಕಸಭಾ ಚುನಾವಣೆ
![ಕಡೆಗಣಿಸಿದರೆ ಏಕಾಂಗಿಯಾಗಿ ಸ್ಪರ್ಧೆ: ಬಿಜೆಪಿಗೆ ಎರಡು ಮಿತ್ರಪಕ್ಷಗಳ ಎಚ್ಚರಿಕೆ ಕಡೆಗಣಿಸಿದರೆ ಏಕಾಂಗಿಯಾಗಿ ಸ್ಪರ್ಧೆ: ಬಿಜೆಪಿಗೆ ಎರಡು ಮಿತ್ರಪಕ್ಷಗಳ ಎಚ್ಚರಿಕೆ](/images/placeholder.jpg)
ಹೊಸದಿಲ್ಲಿ, ಡಿ.26: ಎನ್ಡಿಎ ಮೈತ್ರಿಕೂಟದಲ್ಲಿದ್ದ ಉಪೇಂದ್ರ ಕುಶ್ವಾಹಾ ಬಿಜೆಪಿ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ವಾರದೊಳಗೆ ಇನ್ನೆರಡು ಮೈತ್ರಿಪಕ್ಷಗಳು ಬಿಜೆಪಿಯ ಧೋರಣೆಯನ್ನು ಟೀಕಿಸಿದ್ದು, ತಮ್ಮನ್ನು ಕಡೆಗಣಿಸಿದರೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.
ಬಿಜೆಪಿ ತಮಗೆ ಸಲ್ಲಬೇಕಿರುವ ಗೌರವ ಮತ್ತು ಸ್ಥಾನಮಾನವನ್ನು ನೀಡದೆ ನಿರ್ಲಕ್ಷಿಸುತ್ತಿದೆ ಎಂದು ಅಪ್ನಾದಳ(ಸೋನೆಲಾಲ್) ಹಾಗೂ ಓಂಪ್ರಕಾಶ್ ರಾಜ್ಭರ್ ನೇತೃತ್ವದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ(ಎಸ್ಬಿಎಸ್ಪಿ) ಆರೋಪಿಸಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಓಂಪ್ರಕಾಶ್ ರಾಜ್ಭರ್, ಬಿಜೆಪಿಯು ಸಮಾಜದ ಬಡ ಮತ್ತು ದುರ್ಬಲ ವರ್ಗದವರನ್ನು ನಿರ್ಲಕ್ಷಿಸಿದೆ. ಉತ್ತರಪ್ರದೇಶದಲ್ಲಿ ಇದೇ ತಪ್ಪು ಮಾಡಿದ್ದ ಕಾರಣ ಎಸ್ಪಿ ಮತ್ತು ಬಿಎಸ್ಪಿಯನ್ನು ಜನತೆ ಅಧಿಕಾರದಿಂದ ದೂರ ಇರಿಸಿ ಬಿಜೆಪಿಗೆ ಅವಕಾಶ ನೀಡಿದ್ದಾರೆ ಎಂಬುದನ್ನು ಬಿಜೆಪಿ ಮರೆಯಬಾರದು. ಒಂದು ವೇಳೆ ಸ್ಥಾನಹಂಚಿಕೆ ಕುರಿತ ಒಪ್ಪಂದ ಏರ್ಪಡದಿದ್ದಲ್ಲಿ ತಮ್ಮ ಪಕ್ಷ ಉತ್ತರಪ್ರದೇಶದ 80 ಲೋಕಸಭಾ ಸ್ಥಾನ ಹಾಗೂ ಬಿಹಾರದ 16 ಸ್ಥಾನಗಳಲ್ಲೂ ಸ್ಪರ್ಧಿಸಲಿದೆ ಎಂದು ಘೋಷಿಸಿದರು.
ಉತ್ತರಪ್ರದೇಶ ಸರಕಾರ ಹಾಗೂ ಕೇಂದ್ರ ಸರಕಾರದ ಭಾಗವಾಗಿರುವ ಅಪ್ನಾದಳ (ಸೋನೇವಾಲ್), ಮಂಗಳವಾರ ನೀಡಿದ್ದ ಹೇಳಿಕೆಯಲ್ಲಿ ಉ.ಪ್ರದೇಶ ಬಿಜೆಪಿ ಮುಖಂಡರ ವರ್ತನೆಯನ್ನು ಖಂಡಿಸಿತ್ತು. ಈ ವರ್ತನೆ ಮುಂದುವರಿದಲ್ಲಿ ಬಿಜೆಪಿಗೆ ಉತ್ತರಪ್ರದೇಶದಲ್ಲಿ ಗರಿಷ್ಟ ಹಾನಿಯಾಗಲಿದೆ ಎಂದು ಅಪ್ನಾದಳ(ಎಸ್)ನ ರಾಷ್ಟ್ರೀಯ ಅಧ್ಯಕ್ಷ ಆಶೀಶ್ ಸಿಂಗ್ ಪಟೇಲ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು. ಉ.ಪ್ರದೇಶದ ವಿವಿಧ ಮಂಡಳಿಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಂದರ್ಭ ತಮ್ಮ ಪಕ್ಷದವರನ್ನು ಕಡೆಗಣಿಸಲಾಗುತ್ತಿದೆ. ಉ.ಪ್ರದೇಶದ ಮಿರ್ಝಾಪುರ ಕ್ಷೇತ್ರವನ್ನು ಪ್ರತಿನಿಧಿಸುವ ಪಕ್ಷದ ಸಂಸದೆಯಾಗಿರುವ ಅನುಪ್ರಿಯಾ ಪಟೇಲ್(ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಸಚಿವೆ)ರನ್ನು ಆದಿತ್ಯನಾಥ್ ನೇತೃತ್ವದ ಸರಕಾರ ಸತತವಾಗಿ ಕಡೆಗಣಿಸುತ್ತಾ ಬಂದಿದೆ. ವಾರಣಾಸಿಯಲ್ಲಿ ನಡೆದ ಪ್ರಧಾನಿ ಮೋದಿಯ ಕಾರ್ಯಕ್ರಮಕ್ಕೂ ಅನುಪ್ರಿಯಾರನ್ನು ಆಹ್ವಾನಿಸಲಾಗಿಲ್ಲ ಎಂದು ದೂರಿದರು.
ಅನುಪ್ರಿಯಾ ಪಟೇಲ್ ಆಶೀಶ್ ಸಿಂಗ್ ಅವರ ಪತ್ನಿ. ಬಿಜೆಪಿ ಮತ್ತೊಮ್ಮೆ ಮೋದಿ ನೇತೃತ್ವದಲ್ಲಿ ಸರಕಾರ ರಚಿಸಬೇಕೆಂಬುದು ತಮ್ಮ ಆಶಯವಾಗಿದೆ. ಆದರೆ ಬಿಜೆಪಿ ತನ್ನ ಮಿತ್ರಪಕ್ಷಗಳ ಹಿತಾಸಕ್ತಿಯ ಕಡೆಗೂ ಗಮನ ಹರಿಸಬೇಕು. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಅನುಭವಿಸಿದ ಸೋಲಿನಿಂದ ಪಕ್ಷ ಪಾಠ ಕಲಿಯಬೇಕು ಎಂದು ಸಿಂಗ್ ಹೇಳಿದರು.