ಕಾರ್ಪೋರೇಟ್ ವಲಯದ ಕಡಿವಾಣಕ್ಕೆ ಕಮ್ಯೂನಿಷ್ಟ್ ಸಂಘಟನೆಗಳು ಒಗ್ಗೂಡಬೇಕಿದೆ: ಸಿಪಿಐ ಮುಖಂಡ ಪಿ.ವಿ.ಲೋಕೇಶ್

ದಾವಣಗೆರೆ,ಡಿ.26: ಎಡಪಕ್ಷಗಳಲ್ಲಿ ಐಕ್ಯತೆ ಇಲ್ಲದೆ ಇರುವುದರಿಂದ 93 ವರ್ಷಗಳ ಇತಿಹಾಸದಲ್ಲಿ ಬಲಪಂಥೀಯರು ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಹೇಳಿದರು.
ನಗರದ ಸಿಪಿಐ ಜಿಲ್ಲಾ ಮಂಡಳಿ ಪಂಪಾಪತಿ ಭವನದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ 93ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಅಭಿವೃದ್ಧಿ, ಕಾರ್ಪೋರೇಟ್ ವಲಯಕ್ಕೆ ಕಡಿವಾಣಕ್ಕೆ ಕಮ್ಯೂನಿಷ್ಟ್ ಸಂಘಟನೆಗಳು ಒಗ್ಗೂಡಬೇಕಿದೆ. ಹಾಗಾದರೆ ಮಾತ್ರ ಹೊಸ ರಾಜಕೀಯ ಅಲೆ ಕಂಡು ಬರಲಿದೆ ಎಂದರು.
ದೇಶದಲ್ಲಿ ಕಮ್ಯೂನಿಷ್ಟ್ ಸಂಘಟನೆಗಳು ವಿಲೀನಗೊಂಡರೆ ಮಾತ್ರ ಶೋಷಣೆ ನಡೆಸುತ್ತಿರುವ ಕಾರ್ಪೋರೇಟ್ ವಲಯಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಬದಲಾದ ಕಾಲಘಟ್ಟದಲ್ಲಿ ರಾಜಕೀಯ ಸನ್ನಿವೇಶಕ್ಕೆ ಜನರು ಮಾರುಹೋಗಿದ್ದಾರೆ. ಅವರನ್ನು ಜಾಗೃತರನ್ನಾಗಿ ಮಾಡಬೇಕು. ಈ ಹಿನ್ನಲೆಯಲ್ಲಿ ಎರಡಾಗಿರುವ ಪಕ್ಷಗಳು ಒಂದಾಗಬೇಕಿದೆ. 1964ರಲ್ಲಿ ಪಕ್ಷದಲ್ಲಿ ಒಡಕು ಉಂಟಾದ ಹಿನ್ನಲೆಯಲ್ಲಿ ರಾಜಕೀಯವಾಗಿ ದುರ್ಬಲಗೊಂಡಿತು. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳು ಭಾಗವಹಿಸಿ ಸರ್ಕಾರಕ್ಕೆ ನಮ್ಮ ಬಲ ಏನೆಂಬುದನ್ನು ತೋರಿಸಿತು. ಇದು ನಮಗೆ ಪಾಠವಾಗಬೇಕು ಎಂದರು.
ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಆನಂತರದ ಜನಪರ ಚಳವಳಿಯಲ್ಲಿ ಸಿಪಿಐ ಪಾತ್ರ ದೊಡ್ಡದು. ಪಕ್ಷ ಕಳೆದ 93 ವರ್ಷದಿಂದಲೂ ತನ್ನದೇ ಸೈದ್ಧಾಂತಿಕ ನಿಲುವು, ಬದ್ಧತೆಯೊಂದಿಗೆ ಹೋರಾಟ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿರುವ ಜಿಎಸ್ಟಿ ಮತ್ತು ನೋಟು ಅಮಾನ್ಯೀಕರಣದ ವಿರುದ್ಧ ಮೊದಲ ಬಾರಿಗೆ ಧ್ವನಿ ಎತ್ತಿದ್ದೆ ಸಿಪಿಐ. ಆದರೆ ಹಟ ಹಿಡಿದು ಜಾರಿಗೆ ತಂದ ಕೇಂದ್ರ ಸರ್ಕಾರ ಅವರ ಪರಿಣಾಮಗಳನ್ನು ಈಗ ಎದುರಿಸುತ್ತಿದೆ ಎಂದರು.
ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಹೆಚ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ, ಡಿಸೆಂಬರ್ 26, 1925ರಲ್ಲಿ ಪಕ್ಷ ಸ್ಥಾಪನೆಯಾಗಿ ಇಂದಿಗೆ 93 ವರ್ಷ ಪೂರೈಸಿದೆ. ಅಂದಿನಿಂದ ಇಂದಿನವರೆಗೂ ಸಮಾಜವಾದಿ ಸಮಾಜ ರಚನೆಯ ಗುರಿಯೊಂದಿಗೆ ಭೂ ರಹಿತರ ಪರವಾಗಿ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.
ದೇಶದಲ್ಲಿಂದು ಹಲವಾರು ಜನಪರವಾದ ಕಾಯಿದೆಗಳು ಜಾರಿಯಾಗಿದ್ದರೆ ಅದಕ್ಕೆ ಸಿಪಿಐನ ಹೋರಟಗಳು ಕಾರಣ. ಇಂದು ಅನೇಕ ಸವಾಲುಗಳಿದ್ದರೂ ತನ್ನ ತತ್ವ, ಸಿದ್ಧಾಂತಗಳನ್ನು ಬಿಟ್ಟು ಕೊಡದೇ ಮುನ್ನೆಡೆಯುತ್ತಿದೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಆನಂದ್ ರಾಜ್, ಪಾಲಿಕೆ ಸದಸ್ಯ ಹೆಚ್.ಜಿ.ಉಮೇಶ್, ಪರಮೇಶ್ವರಪ್ಪ ಹರಿಹರ, ಆವರಗೆರೆ ವಾಸು, ಚಂದ್ರು, ಮಹಮದ್ ಬಾಷಾ, ಗೌಸ್ಪೀರ್ ಮತ್ತಿತರರಿದ್ದರು.







