ಮಹಿಳೆಗೆ 85 ಲಕ್ಷ ರೂ.ವಂಚನೆ ಆರೋಪ: ಚಲನಚಿತ್ರ ನಿರ್ಮಾಪಕ ಸೇರಿ ಮೂವರ ಬಂಧನ
![ಮಹಿಳೆಗೆ 85 ಲಕ್ಷ ರೂ.ವಂಚನೆ ಆರೋಪ: ಚಲನಚಿತ್ರ ನಿರ್ಮಾಪಕ ಸೇರಿ ಮೂವರ ಬಂಧನ ಮಹಿಳೆಗೆ 85 ಲಕ್ಷ ರೂ.ವಂಚನೆ ಆರೋಪ: ಚಲನಚಿತ್ರ ನಿರ್ಮಾಪಕ ಸೇರಿ ಮೂವರ ಬಂಧನ](https://www.varthabharati.in/sites/default/files/images/articles/2018/12/27/169945.jpg)
ಬೆಂಗಳೂರು, ಡಿ.27: ರಿಯಲ್ ಎಸ್ಟೇಟ್ ಹಾಗೂ ಚಲನಚಿತ್ರ ನಿರ್ಮಾಣ, ವಿತರಣೆಯಲ್ಲಿ ಹಣ ತೊಡಗಿಸಿದರೆ ಲಾಭಗಳಿಸಬಹುದು ಎಂದು ಮಹಿಳೆಯೊಬ್ಬರಿಗೆ ಆಮಿಷವೊಡ್ಡಿ 85 ಲಕ್ಷ ರೂ. ಪಡೆದು ವಂಚಿಸಿದ್ದ ಚಲನಚಿತ್ರ ನಿರ್ಮಾಪಕ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಿರ್ಮಾಪಕ ಸುಧಾಕರ್, ನಲ್ಲಯ್ಯನ್ ಪೀಟರ್ ಮತ್ತು ವಿಜಯ್ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸಕೆರೆಹಳ್ಳಿ ನಿವಾಸಿ ದಿವ್ಯಶ್ರೀ ಎಂಬುವರಿಗೆ ಸುಧಾಕರ್ ಆಮಿಷವೊಡ್ಡಿ ಮೈಸೂರಿನ ಜಿಆರ್ಎಸ್ ಫ್ಯಾಂಟಿಸಿ ಪಾರ್ಕ್ ಬಳಿ ಜಮೀನು ಖರೀದಿಸಿ ಅಭಿವೃದ್ಧಿಪಡಿಸಿ ರಿಯಲ್ ಎಸ್ಟೇಟ್ನಲ್ಲಿ ಹಣ ತೊಡಗಿಸುವುದು ಹಾಗೂ ಚಲನಚಿತ್ರೀಕರಣ, ನಿರ್ಮಾಣ, ವಿತರಣೆ ಹೆಸರಿನಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಗಳಿಸಬಹುದೆಂದು ನಂಬಿಸಿದ್ದಾನೆ.
ಈತನ ಮಾತನ್ನು ನಂಬಿದ ಮಹಿಳೆ 85 ಲಕ್ಷ ರೂ. ನೀಡಿದ್ದರು. ತದ ನಂತರ ಮೋಸಹೋಗಿರುವುದನ್ನು ಅರಿತ ಅವರು ಹಣ ಪಡೆದ ಸುಧಾಕರ್, ವೆಂಕಟಸುಬ್ಬಯ್ಯ, ಸುಬ್ರಹ್ಮಣಿ, ನಲ್ಲಯ್ಯನ್ ಪೀಟರ್ ಹಾಗೂ ವಿಜಯಕುಮಾರ್ ವಿರುದ್ಧ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ನಗರ ಪೊಲೀಸ್ ಆಯುಕ್ತರು ತನಿಖೆಯನ್ನು ಸಿಸಿಬಿ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶಿಸಿದ್ದರು. ಸಿಸಿಬಿ ಘಟಕದ ಅಧಿಕಾರಿಗಳು ಈ ಪ್ರಕರಣದ ಮಾಹಿತಿ ಪಡೆದು ಆರೋಪಿ ಸುಧಾಕರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಆರೋಪಿ ಸುಧಾಕರ ವರ್ಧನ, ಕಥಾವಿಚಿತ್ರ ಮತ್ತು ಹುಲಿದುರ್ಗ ಎಂಬ ಕನ್ನಡ ಚಲನಚಿತ್ರ ನಿರ್ಮಾಣ ಮಾಡಿರುವುದಾಗಿಯೂ ಹಾಗೂ ಹಲವು ಚಲನಚಿತ್ರಗಳ ವಿತರಣೆ ಪಡೆದಿರುವುದಾಗಿ ತಿಳಿಸಿ ಅಮಾಯಕರನ್ನು ನಂಬಿಸಿ ಅವರಿಂದ ಹಣ ಪಡೆದು ವಂಚಿಸಿರುವುದೂ ಸಹ ವಿಚಾರಣೆಯಿಂದ ತಿಳಿದು ಬಂದಿದೆ.