ಏರ್ಇಂಡಿಯಾದ ಪುನಃಶ್ಚೇತನಕ್ಕಾಗಿ ಯೋಜನೆ ಸಿದ್ಧ: ಕೇಂದ್ರ ಸಚಿವ ಸಿನ್ಹಾ
![ಏರ್ಇಂಡಿಯಾದ ಪುನಃಶ್ಚೇತನಕ್ಕಾಗಿ ಯೋಜನೆ ಸಿದ್ಧ: ಕೇಂದ್ರ ಸಚಿವ ಸಿನ್ಹಾ ಏರ್ಇಂಡಿಯಾದ ಪುನಃಶ್ಚೇತನಕ್ಕಾಗಿ ಯೋಜನೆ ಸಿದ್ಧ: ಕೇಂದ್ರ ಸಚಿವ ಸಿನ್ಹಾ](https://www.varthabharati.in/sites/default/files/images/articles/2018/12/27/170002.jpg)
ಹೊಸದಿಲ್ಲಿ,ಡಿ.27: ಏರ್ಇಂಡಿಯಾದ ಪುನಃಶ್ಚೇತನಕ್ಕಾಗಿ ಯೋಜನೆಯೊಂದನ್ನು ಸರಕಾರವು ಸಿದ್ಧಪಡಿಸಿದೆ ಎಂದು ಸಹಾಯಕ ನಾಗರಿಕ ವಾಯುಯಾನ ಸಚಿವ ಜಯಂತ ಸಿನ್ಹಾ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು.
ರಿಯಲ್ ಎಸ್ಟೇಟ್ ಆಸ್ತಿಗಳ ನಗದೀಕರಣ ಸೇರಿದಂತೆ ಹಿಂದಿನ ಸರಕಾರವು ನೀಡಿದ್ದ ಪಾರುಗಾಣಿಕೆ ಪ್ಯಾಕೇಜ್ ಬಲದಿಂದ ಉಸಿರಾಡುತ್ತಿರುವ ಏರ್ ಇಂಡಿಯಾವನ್ನು ಪುನಃ ಲಾಭದ ದಾರಿಗೆ ತರಲು ವಿವಿಧ ಉಪಕ್ರಮಗಳು ಜಾರಿಯಲ್ಲಿವೆ.
ಸರಕಾರವು ರೂಪಿಸಿರುವ ಪುನಃಶ್ಚೇತನ ಯೋಜನೆಯು ಸ್ಪರ್ಧಾತ್ಮಕ ಮತ್ತು ಲಾಭದಾಯಕ ವಿಮಾನಯಾನ ಸಮೂಹವನ್ನು ನಿರ್ಮಿಸಲು ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಿದ ಸಿನ್ಹಾ, ವಿಶೇಷ ಉದ್ದೇಶದ ಸಂಸ್ಥೆಗೆ ಪ್ರಮುಖವಲ್ಲದ ಸಾಲ ಮತ್ತು ಆಸ್ತಿಗಳ ವರ್ಗಾವಣೆ ಸೇರಿದಂತೆ ಸಮಗ್ರ ಹಣಕಾಸು ಪ್ಯಾಕೇಜ್, ಆಡಳಿತ ಮಂಡಳಿಯಿಂದ ಸದೃಢ ಸಂಘಟನಾತ್ಮಕ ಮತ್ತು ಆಡಳಿತಾತ್ಮಕ ಕ್ರಮಗಳ ಅನುಷ್ಠಾನ ಹಾಗೂ ಏರ್ ಇಂಡಿಯಾದ ಪ್ರತಿಯೊಂದೂ ಮುಖ್ಯ ವ್ಯವಹಾರಕ್ಕಾಗಿ ವಿಭಿನ್ನ ವ್ಯವಹಾರ ಕಾರ್ಯತಂತ್ರಗಳು ಯೋಜನೆಯಲ್ಲಿ ಅಡಕವಾಗಿವೆ ಎಂದರು.
ಮುಂದಿನ ಕೆಲವು ವರ್ಷಗಳಲ್ಲಿ ತನ್ನ ಬಳಕೆಯಲ್ಲಿಲ್ಲದ ಮತ್ತು ಹೆಚ್ಚುವರಿ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಮಾರಾಟ ಮಾಡಿ ಹಣಕಾಸನ್ನು ಕ್ರೋಢೀಕರಿಸಲು ಸಹ ಏರ್ಇಂಡಿಯಾ ಯೋಜಿಸಿದೆ. ಈವರೆಗೆ ಏರ್ಇಂಡಿಯಾ ದೇಶದಲ್ಲಿಯ ಮತ್ತು ವಿದೇಶಗಳಲ್ಲಿಯ ತನ್ನ ಮುಖ್ಯವಲ್ಲದ ಆಸ್ತಿಗಳನ್ನು ಮಾರಾಟ ಮಾಡಿ 410 ಕೋ.ರೂ.ಗಳನ್ನು ಸಂಗ್ರಹಿಸಿದೆ. ಬಾಡಿಗೆಯ ರೂಪದಲ್ಲಿ 314 ಕೋ.ರೂ.ಗಳ ಆದಾಯವನ್ನೂ ಅದು ಗಳಿಸಿದೆ ಎಂದು ಸಿನ್ಹಾ ಪ್ರಶ್ನೆ ವೇಳೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
ಏರ್ ಇಂಡಿಯಾ ಅಂದಾಜು 55,000 ಕೋ.ರೂ.ಗೂ ಅಧಿಕ ಸಾಲವನ್ನು ಹೊಂದಿದೆ.
ಏರ್ ಇಂಡಿಯಾದಲ್ಲಿ ಹೂಡಿಕೆ ಹಿಂದೆಗೆತಕ್ಕೆ ಸರಕಾರವು ಬದ್ಧವಾಗಿದೆ ಎಂದು ಸಿನ್ಹಾ ಸ್ಪಷ್ಟಪಡಿಸಿದರು.