ಪುಲಿಟ್ಝರ್ ಪ್ರಶಸ್ತಿ ವಿಜೇತ ‘ರಾಯ್ಟರ್ಸ್’ ಛಾಯಾಗ್ರಾಹಕನಿಗೆ ಭಾರತಕ್ಕೆ ಪ್ರವೇಶ ನಿರಾಕರಣೆ
ಹೊಸದಿಲ್ಲಿ, ಡಿ.28: ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ದಿಲ್ಲಿ ಕಚೇರಿಯ ಮುಖ್ಯ ಛಾಯಾಗ್ರಾಹಕರಾಗಿರುವ ಪುಲಿಟ್ಝರ್ ಪ್ರಶಸ್ತಿ ವಿಜೇತ ಕಥಾಲ್ ಮೆಕ್ನೌಟನ್ ಅವರಿಗೆ ವೀಸಾ ನಿಯಮ ಉಲ್ಲಂಘನೆಗಾಗಿ ಭಾರತಕ್ಕೆ ಮರು ಪ್ರವೇಶವನ್ನು ನಿರಾಕರಿಸಲಾಗಿದೆ. ವಿದೇಶ ಪ್ರವಾಸದಿಂದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ ಅವರನ್ನು ಅಲ್ಲಿಂದಲೇ ವಾಪಸ್ ಕಳುಹಿಸಲಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಪಡೆದಿದ್ದ ಅವರು ಜಮ್ಮು ಕಾಶ್ಮೀರದ ನಿರ್ಬಂಧಿತ ಪ್ರದೇಶಗಳಿಗೆ ಅನುಮತಿಯಿಲ್ಲದೆ ಪ್ರಯಾಣಿಸಿದ್ದರೆಂಬ ಆರೋಪವಿದೆ. ರಾಜ್ಯದಿಂದ ಯಾವುದೇ ಅನುಮತಿಯಿಲ್ಲದೆ ಅವರು ವರದಿ ಸಲ್ಲಿಸಿದ್ದರೆಂದೂ ಹೇಳಲಾಗಿದೆ.
ಐರಿಷ್ ನಾಗರಿಕರಾಗಿರುವ ಕಥಾಲ್ ಅವರ ವಿರುದ್ಧದ ಕ್ರಮ ಖಾಯಂ ಅಲ್ಲ, ಆರು ತಿಂಗಳು ಅಥವಾ ಒಂದು ವರ್ಷದ ನಂತರ ಅದನ್ನು ಮರುಪರಿಶೀಲಿಸಬಹುದಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿದೇಶಿ ಪತ್ರಕರ್ತರಿಗಿರುವ ವೀಸಾ ನಿಯಮಗಳಂತೆ ಅವರು ಜಮ್ಮು ಕಾಶ್ಮೀರದ ಅಥವಾ ಈಶಾನ್ಯ ರಾಜ್ಯಗಳ ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡಲು ಬಯಸಿದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿದೇಶಾಂಗ ಪ್ರಚಾರ ವಿಭಾಗದ ಮೂಲಕ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ.
ಫಾರಿನರ್ಸ್(ಪ್ರೊಟೆಕ್ಟೆಡ್ ಏರಿಯಾಸ್) ಆರ್ಡರ್ 1958 ಅನ್ವಯವಾಗುವ ಪ್ರದೇಶಗಳಿಗೆ ಪ್ರಯಾಣಿಸಲು ಅನುಮತಿ ಪಡೆಯಬೇಕೆಂದು ಈ ವರ್ಷದ ಮೇ ತಿಂಗಳಲ್ಲಿ ಸಚಿವಾಲಯ ಅಂತಾರಾಷ್ಟ್ರೀಯ ಪತ್ರಕರ್ತರಿಗೆ ನೆನಪಿಸಿತ್ತು.
ನಿರ್ಬಂಧಿತ ಪ್ರದೇಶಗಳಲ್ಲಿ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ರಾಜಸ್ಥಾನ, ಉತ್ತರಾಖಂಡದ ಕೆಲ ಭಾಗಗಳು ಹಾಗೂ ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳು ಸೇರಿವೆ.