ಮನಪಾ ಬಜೆಟ್: ಅಭಿಪ್ರಾಯ ನೀಡಲು ಸಾರ್ವಜನಿಕರ ನಿರಾಸಕ್ತಿ
ಸಾರ್ವಜನಿಕರ ಪರವಾಗಿ ಕೇವಲ 3 ಮಂದಿ !

ಮಂಗಳೂರು, ಡಿ. 28: ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ನಡೆದ ಬಜೆಟ್ ಪೂರ್ವ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಸಭೆ ತೀರಾ ನಿರಾಸದಾಯಕವಾಗಿ ಮಾರ್ಪಟ್ಟಿತ್ತು. ಸಾರ್ವಜನಿಕರ ಪರವಾಗಿ ಕೇವಲ 3 ಮಂದಿ ಮಾತ್ರ ಭಾಗವಹಿಸುವ ಮೂಲಕ ಸಭೆ ಕಾಟಾಚಾರಕ್ಕೆ ನಡೆಸಿದಂತಿತ್ತು.
ಮೇಯರ್ ಭಾಸ್ಕರ ಕೆ. ಅಧ್ಯಕ್ಷತೆಯಲ್ಲಿ ನಡೆದ ಸಭೆ 3 ಗಂಟೆಗೆ ನಿಗದಿಯಾಗಿದ್ದರೂ ಆರಂಭವಾಗಿದ್ದು, 4 ಗಂಟೆಯ ಸುಮಾರಿಗೆ. ಆ ಸಂದರ್ಭ 10 ಮಂದಿ ಮನಪಾ ಸದಸ್ಯರು (ಮೇಯರ್, ಮುಖ್ಯ ಸಚೇತಕ, ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಹೊರತುಪಡಿಸಿ) ಮಾತ್ರ ಭಾಗವಹಿಸಿದ್ದರು.
ಭಾಗವಹಿಸಿದ್ದ 3 ಮಂದಿ ಸಾರ್ವಜನಿಕರಿಂದ ಹಲವು ಸಲಹೆ, ಅಭಿಪ್ರಾಯ
ವಿಶೇಷವೆಂದರೆ, 60 ವಾರ್ಡ್ಗಳನ್ನು ಹೊಂದಿರುವ 5 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಪಾಲಿಕೆಯ ಬಜೆಟ್ಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಲು ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಭಾಗವಹಿಸಿದ ಮೂರು ಮಂದಿ ಹಲವು ಸಲಹೆ, ಅಭಿಪ್ರಾಯಗಳ ಮೂಲಕ ಗಮನ ಸೆಳೆದರು.
ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ ಕಾಮತ್ ಮಾತನಾಡುತ್ತಾ, ಈ ಸಭೆ ಕಾಟಾಚಾರಕ್ಕೆ ಮಾಡಿದಂತೆ ಗೋಚರವಾಗುತ್ತಿದೆ. ನಗರದ ಅಭಿವೃದ್ದಿಗೆ ಸಂಬಂಧಿಸಿ ಇಂತಹ ಸಭೆಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ಏನು ಪ್ರಯೋಜನ ಎಂದು ಬೇಸರಿಸಿದರು.
ನಗರದ ಆದಾಯ ಕ್ರೋಢೀಕರಣಕ್ಕೆ ಸಂಬಂಧಿಸಿ ಸಲಹೆ ನೀಡಿದ ಅವರು, ನಗರದ ಪ್ರಮುಖ ಸ್ಥಳಗಳಲ್ಲಿ ಅನಧಿಕೃತ ಹೋರ್ಡಿಂಗ್ಗಳ ಬಗ್ಗೆ ಈಗಾಗಲೇ ವರದಿ ಬಂದಿದೆ. ಪಾಲಿಕೆ ದಂಡ ವಸೂಲು ಮಾಡಲು ಮುಂದಾಗಬೇಕು. ಅಭಿವೃದ್ಧಿ ದೃಷ್ಟಿಯಿಂದ ಮನಪಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರದಲ್ಲಿ ಏರಿಕೆ ಮಾುವ ಅಗತ್ಯವಿದೆ ಎಂದರು.
ಮಾರುಕಟ್ಟೆಗಳಲ್ಲಿ ಮಳಿಗೆ ಪಡೆದವರು ಬೇರೆಯವರಿಗೆ ದುಪ್ಪಟ್ಟು ಹಣಕ್ಕೆ ಅದನ್ನು ಬಾಡಿಗೆ ನೀಡುತ್ತಾರೆ. ಈ ರೀತಿಯಲ್ಲಿ ಆದಾಯ ಸೋರಿಕೆಯನ್ನು ತಡೆಗಟ್ಟಬೇಕು ಎಂದರು. ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಡಿಸೋಜಾ ಪ್ರತಿಕ್ರಿಯಿಸಿ, ಮಾರುಕಟ್ಟೆ ಬಾಡಿಗೆ ದರ ಪರಿಷ್ಕಣೆ ಮಾಡುವ ಅಗತ್ಯವಿದೆ ಎಂದರು.
ಬಾಲಕೃಷ್ಣ ಎಂಬವರು ಮಾತನಾಡಿ, ರಾತ್ರಿ ಹೊತ್ತು ಎಲ್ಲಾ ಬೀದಿ ದೀಪಗಳು ಉರಿಯುವುದನ್ನು ತಡೆಯುವ ಮೂಲಕ ವಿದ್ಯುತ್ ಬಿಲ್ನಲ್ಲಿ ಉಳಿತಾಯ ಮಾಡಲು ಸಾಧ್ಯವಿದೆ ಎಂದರು.
ಬಂದರು ಧಕ್ಕೆ ಪ್ರದೇಶದಲ್ಲಿ ಪೋರ್ಟ್ಗೆ ತೆರಿಗೆ ಕಟ್ಟುವುದಾಗಿ ಹೇಳಿ ವ್ಯಾಪಾರ ನಡೆಸುವವರು ಹಲವರಿದ್ದಾರೆ. ಈ ರೀತಿ ಅನಧಿಕೃತವಾಗಿ ವ್ಯಾಪಾರ ನಡೆಸುವವರಿಗೆ ತೆರಿಗೆ ವಿಧಿಸಿದರೆ ಆದಾಯ ಸಂಗ್ರಹವಾಗುತ್ತದೆ ಎಂದು ಸದಸ್ಯ ಲತೀಫ್ ಕಂದುಕ ಅಭಿಪ್ರಾಯಿಸಿದರು.
ಆಯುಕ್ತ ಮುಹಮ್ಮದ್ ನಝೀರ್ ಪ್ರತಿಕ್ರಿಯಿಸಿ ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವತ್ತದವರೆಗಿನ ಫುಟ್ ಪಾತ್ ಹೊರತುಪಡಿಸಿದ ಕಳೆದ ಒಂದು ವರ್ಷದಲ್ಲಿ ಸುಮಾರು 10 ಕಿ.ಮೀ. ಫುಟ್ಪಾತ್ ಕಾಮಗಾರಿ ಆಗಿದೆ. ಪಂಪ್ವೆಲ್ ಬಸ್ಸು ನಿಲ್ದಾಣದ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಆದರೆ, ಅದನ್ನು ಅಲ್ಲಿಂದ ಸ್ಥಳಾಂತರಿಸುವ ಅಥವಾ ಆ ಜಾಗವನ್ನು ಬೇರೆ ಇಲಾಖೆಗೆ ನೀಡುವ ಯಾವುದೇ ಪ್ರ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಪಿಪಿಪಿ ಮಾದರಿಯಲ್ಲಿ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಇರುವುದಕ್ಕಿಂತ ಉತ್ತಮ ಸ್ಥಳದ ಲಭ್ಯತೆಯನ್ನು ಎದುರು ನೋಡಲಾಗುತ್ತಿದೆ. ಈಗ ಪ್ರಸ್ತಾವಿತ ಪಂಪ್ವೆಲ್ ಬಸ್ಸು ನಿಲ್ದಾಣವು ಹೆದ್ದಾರಿಗೆ ತಾಗಿಕೊಂಡಿರುವುದರಿಂದ ಅಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ತೊಂದರೆ ಆಗುವುದರಿಂದ ವಿಳಂಬವಾಗುತ್ತಿದೆಯೇ ಹೊರತು ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.
ಮನಪಾ ಬೀದಿದೀಪಗಳಿನ್ನು ಎಲ್ಇಡಿಗೆ ಪರಿವರ್ತನೆ !
ಮನಪಾ ವ್ಯಾಪ್ತಿಯಲ್ಲಿನ ಬೀದಿ ದೀಪಗಳು ಎಲ್ಇಡಿ ಬೆಳಕಿಗೆ ಪರಿರ್ವತನೆಯಾಗಲಿವೆ. ಈಗಾಗಲೇ ಟೆಂಡರ್ ಅಂತಿಮವಾಗಿದ್ದು, ಈ ಬೀದಿ ದೀಪಗಳು ಟೈಮರನ್ನು ಹೊಂದಿರುತ್ತದೆ. ಆದ್ದರಿಂದ ತಡರಾತ್ರಿಯಲ್ಲಿ ಕೆಲವೊಂದು ದೀಪಗಳು ಮಾತ್ರವೇ ಉರಿಯುವ ವ್ಯವಸ್ಥೆ ಆಗಲಿದೆ. ಈ ಮೂಲಕ ವಿದ್ಯುತ್ ಉಳಿತಾಯವಾಗಲಿದೆ. ಇದು 10 ವರ್ಷಗಳ ಯೋಜನೆಯಾಗಿರುತ್ತದೆ ಎಂದು ಆಯುಕ್ತ ಮುಹಮ್ಮದ್ ನಝೀರ್ ಸಭೆಯಲ್ಲಿ ತಿಳಿಸಿದರು.
ಗೃಹೋಪಯೋಗಿ ಹೊರತುಪಡಿಸಿ ನೀರಿನ ದರ ಪರಿಷ್ಕರಣೆ
ಮನಪಾ ವ್ಯಾಪ್ತಿಯಲ್ಲಿ 2011ರಿಂದ ನೀರಿನ ದರ ಪರಿಷ್ಕರಣೆಯಾಗಿಲ್ಲ. ಈಗಾಗಲೇ ಗೃಹೋಪಯೋಗಿ ಹೊರತುಪಡಿಸಿ ವಾಣಿಜ್ಯ ಬಳಕೆಯ ನೀರಿನ ದರ ಪರಿಷ್ಕರಣೆ ಮಾಡಿ ಸದನದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಎಪ್ರಿಲ್ 1ರಿಂದ ಇದು ಜಾರಿಯಾಗಲಿದೆ ಎಂದು ಆಯುಕ್ತ ಮುಹಮ್ಮದ್ ನಝೀರ್ ತಿಳಿಸಿದರು.