ವಿಕಲಚೇತನ ಶಿಕ್ಷಕರಿಗೆ ವರ್ಗಾವಣೆಯಲ್ಲಿ ವಿನಾಯಿತಿ ನೀಡುವಂತೆ ಡಿಇಎ ಒತ್ತಾಯ
ಬೆಂಗಳೂರು, ಡಿ.28: ಶಿಕ್ಷಕರ ವರ್ಗಾವಣೆಯಲ್ಲಿ ಅನುಸರಿಸಲಾಗುವ ನಿಯಮಾವಳಿಗಳಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯಿತಿ ನೀಡಬೇಕು ಎಂದು ವಿಕಲಚೇತನ ನೌಕರರ ಸಂಘ ಒತ್ತಾಯಿಸಿದೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ವಿಲವಾಡಗಿ, ತಾರತಮ್ಯದ ನೀತಿಯನ್ನು ಸರಕಾರವು ಕೈ ಬಿಟ್ಟು, ವಿಕಲಚೇತನ ಶಿಕ್ಷಕರಿಗೂ ವಿನಾಯಿತಿಯನ್ನು ನೀಡಬೇಕು. ಇಲ್ಲದಿದ್ದರೆ ಸಂಘದ ವತಿಯಿಂದ ಮಾರ್ಚ್ ಮೊದಲನೇ ವಾರದಲ್ಲಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷಕರ ವರ್ಗಾವಣೆ ನಿಯಮಾವಳಿಯಂತೆ, ಒಂದು ಸ್ಥಳದಲ್ಲಿ ಮೂರು ವರ್ಷ ಸೇವೆಯನ್ನು ಸಲ್ಲಿಸಿದ್ದರೆ ಮಾತ್ರ ವರ್ಗಾವಣೆಯಲ್ಲಿ ಅವಕಾಶ ಎಂಬ ನಿಯಮದ ಬದಲು, ವಿಕಲಚೇತನ ಶಿಕ್ಷಕರಿಗೆ ವಿನಾಯಿತಿ ನೀಡಿ ಪ್ರತಿ ವರ್ಷ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ವೈದ್ಯಕೀಯ ಪ್ರಮಾಣ ಪತ್ರ ಸೂಚಿಸುವುದನ್ನು ನಿಲ್ಲಿಸಬೇಕು: ಶಿಕ್ಷಕರ ವರ್ಗಾವಣೆ ಸೇರಿದಂತೆ ವಿಕಲಚೇತನರ ಅನೇಕ ಸೌಲಭ್ಯಗಳನ್ನು ಪಡೆಯಲು ಪದೇ ಪದೇ ಅಂಗವಿಕಲತೆಗೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣ ಪತ್ರವನ್ನು ತರಲು ಸೂಚಿಸುವುದನ್ನು ಅಧಿಕಾರಿಗಳು ನಿಲ್ಲಿಸಬೇಕೆಂದು ಆಗ್ರಹ ಮಾಡಿದರು.
ವಿಕಲಚೇತನ ನೌಕರರ ನೇಮಕಾತಿಯ ಪೂರ್ವದಲ್ಲಿ ನೀಡಿದ ಅಂಗವಿಕಲತೆಗೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣಪತ್ರದ ನೈಜ ವರದಿಗಾಗಿ ವಿಕಲಚೇತನ ಅಭ್ಯರ್ಥಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರವೇ ನೇಮಕಾತಿ ಆದೇಶವನ್ನು ನೀಡುತ್ತಾರೆ. ಹೀಗಾಗಿ, ವರ್ಗಾವಣೆ ಮತ್ತು ವಿವಿಧ ಸೌಲಭ್ಯಗಳನ್ನು ಪಡೆಯಲು ಏಕೆ ಪದೇ ಪದೆ ವೈದ್ಯಕೀಯ ಪ್ರಮಾನ ಪತ್ರವನ್ನು ತರಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.