ಹಸಿ ತ್ಯಾಜ್ಯ ಗೊಬ್ಬರದಿಂದ ಹೆಚ್ಚು ಲಾಭ ಮಾಡುವ ಗ್ರಾ.ಪಂ.ಗೆ ಬಹುಮಾನ
‘ಸ್ವಚ್ಛ ಗ್ರಾಮ ಅಭಿಯಾನ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಘೋಷಣೆ

ಮಂಗಳೂರು, ಡಿ.29: ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಅಧಿಕ ಲಾಭ ಮಾಡುವ ಗ್ರಾಮ ಪಂಚಾಯಿತಿಗೆ ಜಿಲ್ಲಾಡಳಿತದಿಂದ ಅಷ್ಟೇ ಪ್ರಮಾಣದ ಬಹುಮಾನವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಘೋಷಿಸಿದ್ದಾರೆ.
ಮಂಗಳಾದೇವಿ ರಾಮಕೃಷ್ಣ ಮಠದಲ್ಲಿ ‘ಸ್ವಚ್ಛ ಗ್ರಾಮ ಅಭಿಯಾನ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತ್ಯಾಜ್ಯದಿಂದ ಉತ್ಪಾದಿಸಿದ ಗೊಬ್ಬರವನ್ನು ಜಿಲ್ಲಾಡಳಿತ ಮತ್ತು ರಾಮಕೃಷ್ಣ ಮಠದ ಜತೆಗೂಡಿ ಸಂಗ್ರಹ ಮತ್ತು ಮಾರಾಟದ ವ್ಯವಸ್ಥೆ ಬಗ್ಗೆ ಪ್ರಯತ್ನಿಸಲಾಗು ವುದು. ಸಾರ್ವಜನಿಕರೆಲ್ಲರ ಸಹಕಾರವಿದ್ದರೆ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗುವುದರಲ್ಲಿ ಸಂಶಯವಿಲ್ಲ ಎಂದವರು ಹೇಳಿದರು.
ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಸ್ವಚ್ಛತಾ ಅಭಿಯಾನದ ಸಂಚಾಲಕ ಏಕಗಮ್ಯಾನಂದ ಸ್ವಾಮೀಜಿ, ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5ನೇ ಹಂತದ ಭಾಗವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 200 ಗ್ರಾಮಗಳಲ್ಲಿ ಸ್ವಚ್ಛ ಗ್ರಾಮ ಅಭಿಯಾನ ನಡೆಯಲಿದೆ. 2019ರ ಅಕ್ಟೋಬರ್ 2ರ ವರೆಗೆ ನಡೆಯುವ ಅಭಿಯಾನದಲ್ಲಿ ಸುಮಾರು ಎರಡು ಸಾವಿರ ಸ್ವಚ್ಛತಾ ಶ್ರಮದಾನ ನಡೆಯಲಿದೆ. ಶ್ರಮದಾನಕ್ಕೆ ಬೇಕಾದ ಪೊರಕೆ ಮತ್ತಿತರ ಉಪಕರಣಗಳು, ಭಾಗವಹಿಸುವ ಸದಸ್ಯರಿಗೆ ಟೀಶರ್ಟಗಳು, ಜಾಗೃತಿ ಕರಪತ್ರ, ಬ್ಯಾನರ್ಗಳು, ತ್ಯಾಜ್ಯ ಸಾಗಿಸಲು ವಾಹನದ ವ್ಯವಸ್ಥೆ, ಉಪಾಹಾರದ ವ್ಯವಸ್ಥೆಗಳನ್ನು ಮಂಗಳೂರು ರಾಮಕೃಷ್ಣ ಮಿಷನ್ ಒದಗಿಸಲಿದೆ. ರಾಮಕೃಷ್ಣ ಮಠ ಸರ್ಕಾರವನ್ನು ಕಾಯದೆ, ಜನರಿಂದ ಜನರಿಗಾಗಿ ಕೆಲಸ ನಡೆಸುತ್ತಿದೆ ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ ಮಾತನಾಡಿ, ಬಯಲು ಶೌಚ ಮುಕ್ತವಾಗಿರುವ ಉಭಯ ಜಿಲ್ಲೆಗಳಲ್ಲಿ ಸಮರ್ಪಕ ಘನ ತ್ಯಾಜ್ಯ ನಿರ್ವಹಣೆ ನಡೆಯಬೇಕು. ದಕ್ಷಿಣ ಕನ್ನಡ ಜಿಲ್ಲೆಯ 25 ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಯೋಜನೆ ಜನವರಿಯಲ್ಲಿ ಜಾರಿಯಾಗಲಿದೆ ಎಂದರು.
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರುಗಿದ ಸ್ವಚ್ಛ ಗ್ರಾಮ ಅಭಿಯಾನ ಸಂಘಟಿಸಿದ ಬಜ್ಪೆ, ಕೆಮ್ರಾಲು, ಪಡುಪಣಂಬೂರು, ಕಿಲ್ಪಾಡಿ, ವಾಲ್ಪಾಡಿ, ಅತಿಕಾರಿಬೆಟ್ಟು, ಕೇಪು, ಮಂಚಿ, ಪುಣಚ, ಇರ್ವತ್ತೂರು ಗ್ರಾಮ ಪಂಚಾಯಿತಿಗಳನ್ನು ಗೌರವಿಸಲಾಯಿತು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ, ಉಡುಪಿ ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ.ರೂಪೇಶ್, ವಿಧಾನಪರಿಷತ್ ಮಾಜಿ ಸದಸಯ ಕ್ಯಾ.ಗಣೇಶ್ ಕಾರ್ಣಿಕ್, ಎಂ.ಆರ್.ಪಿ.ಎಲ್ನ ಹಿರಿಯ ಅಧಿಕಾರಿ ಬಿ.ಎಚ್.ವಿ. ಪ್ರಸಾದ್ ಉಪಸ್ಥಿತರಿದ್ದರು.
ಉಭಯ ಜಿಲ್ಲೆಗಳ ಜಿಲ್ಲೆಯ ಇನ್ನೂರು ಗ್ರಾಮಗಳಿಂದ ಪ್ರತಿನಿಧಿಗಳು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.







