ಕಷ್ಟಪಟ್ಟು ಬೆಳೆಯುವ ಬೆಳೆ ಕೈ ಬಿಡಲ್ಲ: ಎಚ್.ಡಿ.ದೇವೇಗೌಡ
![ಕಷ್ಟಪಟ್ಟು ಬೆಳೆಯುವ ಬೆಳೆ ಕೈ ಬಿಡಲ್ಲ: ಎಚ್.ಡಿ.ದೇವೇಗೌಡ ಕಷ್ಟಪಟ್ಟು ಬೆಳೆಯುವ ಬೆಳೆ ಕೈ ಬಿಡಲ್ಲ: ಎಚ್.ಡಿ.ದೇವೇಗೌಡ](/images/placeholder.jpg)
ಬೆಂಗಳೂರು, ಡಿ. 29: ರೈತರು ಕಷ್ಟಪಟ್ಟು ದುಡಿದು ಬೆಳೆಯುವ ಬೆಳೆ ಎಂದಿಗೂ ಕೈ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸಜ್ಜನ್ ರಾವ್ ವೃತ್ತದಲ್ಲಿ ಶ್ರೀನಿವಾಸ ಕಾಂಡಿಮೆಂಟ್ ಆಯೋಜಿಸಿದ್ದ 19ನೇ ವರ್ಷದ ಅವರೇಬೇಳೆ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಬೆಳೆ ಬೆಳೆದರೆ ಹೆಚ್ಚು ಬೆಲೆ ಕೂಡ ಸಿಗುತ್ತದೆ ಎಂಬುದನ್ನು ರೈತರು ಮನಗಾಣಬೇಕು. ಕಷ್ಟಪಟ್ಟು ಬೆಳೆದ ಬೆಳೆ ಯಾವತ್ತು ಕೈಬಿಡುವುದಿಲ್ಲ ಎಂಬುದಕ್ಕೆ ಮಾಗಡಿಯ ರೈತರು ಬೆಳೆದ ಅವರೇಬೇಳೆಯೇ ಸಾಕ್ಷಿ ಎಂದು ರೈತರನ್ನು ಶ್ಲಾಘಿಸಿದರು.
ಮಾಗಡಿ ರೈತರು ಬೆಳೆದ ಅವರೇಬೇಳೆಯಲ್ಲಿ ಒಂದು ರೀತಿಯ ಸೊಗಡು ಇರುತ್ತದೆ, ಅಲ್ಲದೆ ಆ ಬೆಳೆಯ ರುಚಿಯೂ ವೈಶಿಷ್ಟವಾಗಿರುತ್ತದೆ ಎಂದ ಅವರು, ಮಾಜಿ ಪ್ರಧಾನಿ ದೇವೇಗೌಡರನ್ನು ಯಾವುದೇ ಸಣ್ಣ ಸಮಾರಂಭಕ್ಕೂ ಕರೆದರು ಬರುತ್ತಾರೆ ಎಂಬ ಟೀಕೆ, ಅಪವಾದಗಳು ನನ್ನ ಮೇಲೆ ಇವೆ. ಈ ಕಾರ್ಯಕ್ರಮದಲ್ಲಿ ರೈತರು ಇರುತ್ತಾರೆ ಎಂಬ ಕಾರಣಕ್ಕಾಗಿ ಭಾಗವಹಿಸಿದ್ದೇನೆ ಎಂದರು.
ಅದಮ್ಯ ಚೇತನ ಟ್ರಸ್ಟ್ನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಪಾಶ್ಚಿಮಾತ್ಯ ಆಹಾರ ಪದ್ಧತಿಗಳಿಗೆ ಮಾರು ಹೋಗುತ್ತಿರುವ ಈ ಸಂದರ್ಭದಲ್ಲಿ ದೇಶದ ಆಹಾರ ಪದ್ಧತಿಗಳ ಕುರಿತು ಹಾಗೂ ಅದರಲ್ಲಿನ ಗುಣಗಳ ಕುರಿತು ನಮ್ಮ ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಚಿತ್ರನಟಿ ತಾರಾ ಅನುರಾಧ ಮಾತನಾಡಿ, ಕಡಲೇಕಾಯಿ ಪರಿಷೆ ಬಿಟ್ಟರೆ ಅವರೇಕಾಯಿ ಮೇಳದಲ್ಲಿ ರೈತರೇ ಬೆಳೆದು ಮಾರಾಟ ಮಾಡುವುದನ್ನು ಕಾಣುತ್ತೇವೆ. ಇಲ್ಲಿ ರೈತರಿಗೆ ರಾಜ ಮರ್ಯಾದೆ ಸಿಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಶಿವರಾಮೇಗೌಡ, ವಿಧಾನಪರಿಷತ್ ಸದಸ್ಯ ಶರವಣ, ನಟಿ ಹರ್ಷಿಕಾ, ಮಾಜಿ ಪಾಲಿಕೆ ಸದಸ್ಯ ಉದಯ್ ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.