ಮಣ್ಣಿನ ಭದ್ರತೆ ಮೇಲೆ ಜಾಗತಿಕ ತಾಪಮಾನ ನಿಂತಿದೆ: ಆಹಾರ ತಜ್ಞ ಕೆ.ಸಿ.ರಘು
ಬೆಂಗಳೂರು, ಡಿ.30:ಮಣ್ಣಿನ ಭದ್ರತೆ ಆಧಾರದ ಮೇಲೆ ಜಾಗತಿಕ ತಾಪಮಾನ ಸೇರಿದಂತೆ ಮನುಷ್ಯ ಹಾಗೂ ಜೀವಸಂಕುಲಗಳ ಎಲ್ಲ ಭದ್ರತೆಗಳು ನಿಂತಿರುತ್ತದೆ ಎಂದು ಆಹಾರ ತಜ್ಞ ಕೆ.ಸಿ.ರಘು ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಗಾಂಧೀ ಭವನದಲ್ಲಿ ಸಾಯಿಲ್ ಸಂಸ್ಥೆ, ಚೈತನ್ಯ ಫೌಂಡೇಷನ್, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮಣ್ಣು-ಬಣ್ಣ-ಬದುಕು-ನಾಗರೀಕತೆ ಕುರಿತ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು, ಮಾತನಾಡಿದರು.
ಪ್ರಕೃತಿಯಲ್ಲಿ ಸಹಜವಾಗಿ ಸೃಷ್ಟಿಯಾಗಿರುವ ಮಣ್ಣಿಗೂ ಮನುಷ್ಯ ಮತ್ತು ಜೀವ ಜಂತುಗಳಿಗೂ ಅಗಾಧವಾದ ಸಂಬಂಧವಿದೆ. ಮಣ್ಣಿನಿಂದಲೇ ಎಲ್ಲವೂ ಆಗಿರುವುದರಿಂದ ಅದನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಸಾಯನಿಕಗಳ ಹೆಸರಿನಲ್ಲಿ ಮಣ್ಣನ್ನು ವಿಷಮಯವಾಗಿ ಮಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವದಲ್ಲಿ ರಾಸಾಯನಿಕ ವಿಷವನ್ನು ಹೊರ ದೇಶಗಳಿಗೆ ಹಂಚುವಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ವಾರ್ಷಿಕವಾಗಿ 30 ಸಾವಿರ ಕೋಟಿ ಗೂ ಅಧಿಕ ವಿಷಕಾರಿ ರಾಸಾಯನಿಕಗಳನ್ನು ಭಾರತ ಉತ್ಪಾದನೆ ಮಾಡುತ್ತಿದ್ದು, ಅದರಲ್ಲಿ ಶೇ.50 ರಷ್ಟು ಅಂದರೆ 15 ಸಾವಿರ ಕೋಟಿಯಷ್ಟು ವಿಷಕಾರಿಗಳನ್ನು ದೇಶದಲ್ಲಿನ ಕೃಷಿ ಭೂಮಿಯಲ್ಲಿ ಬಳಕೆ ಮಾಡುತ್ತಿದ್ದೇವೆ. ಈ ಮೂಲಕ ಮಣ್ಣನ್ನು ವಿಷಮಯ ಮಾಡುವುದರ ಜತೆಗೆ ಆಹಾರವನ್ನೂ ವಿಷಕರವಾಗಿಸುತ್ತಿದ್ದೇವೆ ಎಂದರು.
ನಾವು ಸೇವಿಸುವ ಆಹಾರದಲ್ಲಿ ಹೊಟ್ಟೆ ತುಂಬಿದರೆ ಸಾಕು ಎಂದರೆ ಸಾಕಾಗುವುದಿಲ್ಲ. ನಮ್ಮ ಆಹಾರದಲ್ಲಿ ಪೌಷ್ಟಿಕಾಂಶವಿದೆಯಾ, ರೋಗಗಳನ್ನು ನಿಯಂತ್ರಣ ಮಾಡುವ ಶಕ್ತಿ ಇದೀಯಾ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಹೀಗಾಗಿ, ಆರೋಗ್ಯಯುಕ್ತವಾದ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಮಾನಸಿಕ ತಜ್ಞ ಡಾ. ಜಿ.ಸ್ವಾುನಾಥನ್ ಮಾತನಾಡಿ, ಮನುಷ್ಯ ಗಾಳಿ, ಬೆಳಕಿನ ಅವಶ್ಯಕತೆಯಂತೆ ಮಣ್ಣಿನ ಮಹತ್ವವನ್ನು ತಿಳಿದುಕೊಳ್ಳಬೇಕಿದೆ. ಮಣ್ಣನ್ನು ಸಂರಕ್ಷಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ರಾಸಾಯನಿಕ ಅಂಶಗಳು ಸೇರದಂತೆ ಕ್ರಮ ಕೈಗೊಳ್ಳಬೇಕು. ಗಿಡ, ಮರಗಳ ಎಲೆ ಹಾಗೂ ಪ್ರಾಣಿಗಳ ತ್ಯಾಜ್ಯ ಮಣ್ಣಿನಲ್ಲಿ ಕೊಳೆಸಬೇಕು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಅಲ್ಲದೇ, ಹಸಿರು ಸಂಪತ್ತು ಹಾಗೂ ಗುಣಮಟ್ಟದ ಆಹಾರವನ್ನು ಪಡೆಯಬಹುದು ಎಂದು ಹೇಳಿದರು.
ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವುದು ದೇಶದ ಆರ್ಥಿಕತೆ ಹಾಗೂ ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ. ರೈತರಿಂದ ಖರೀದಿಸುವ ಆಹಾರಕ್ಕೆ ಹಣ ನೀಡಿದರೆ ಸಾಕಾಗುವುದಿಲ್ಲ. ಪ್ರತಿಯಾಗಿ ಮಣ್ಣನ್ನು ಸಂರಕ್ಷಿಸುವತ್ತ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿವಿಲ್ ಎಂಜಿನಿಯರ್ ಎಂ.ವಿ.ಮೋಹನ್, ಕಾಂಪೋಸ್ಟ್ ತಜ್ಞ ಸತಾ ಹೀರೇಮಠ, ಪತ್ರಕರ್ತ ಗಾಣದಾಳು ಶ್ರೀಕಂಠ, ಸಾಯಿಲ್ ಸಂಸ್ಥೆಯ ಸಂಸ್ಥಾಪಕ ವಾಸು ಉಪಸ್ಥಿತರಿದ್ದರು.