ಶಿಕ್ಷಣದಿಂದಲೇ ವಿಶ್ವ ಇಂದು ಭಾರತ ದತ್ತ ತಿರುಗಿ ನೋಡುತ್ತಿದೆ: ಡಾ.ಎ.ಎಸ್.ಕಿರಣ್ ಕುಮಾರ್
ಬೆಂಗಳೂರು, ಡಿ.30: ಶಿಕ್ಷಣದಿಂದಲೇ ವಿಶ್ವ ಇಂದು ಭಾರತ ದೇಶವನ್ನು ಬೆರಗು ಕಣ್ಣಿನಿಂದ ನೋಡುತ್ತಿರುವುದು ಎಂದು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಎಸ್ಆರ್ಎನ್ಜಿ ಸಂಪನ್ನಪ್ಪ ಧರ್ಮಸಂಸ್ಥೆಯ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತೀ ಶೀಘ್ರವಾಗಿ ಬದಲಾಗುತ್ತಿರುವ ಜಗತ್ತಿಗೆ, ಹೊಸ ಸೌಲಭ್ಯಗಳನ್ನು ಕೊಡುತ್ತಿರುವ ಮನುಷ್ಯನಿಗೆ ಶಿಕ್ಷಣ ಬಹಳ ಮುಖ್ಯವಾದುದು, ಶಿಕ್ಷಣ ಪಡೆಯದ ವ್ಯಕ್ತಿ, ನೀಡದ ದೇಶ ಹಲವು ಜಾಗತಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ದೇಶ ಹಿಂದಿನಿಂದಲೂ ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಬಂದಿದೆ ಎಂದು ಹೇಳಿದರು.
ವಿದ್ಯೆ ಪಡೆದವರು ತಮ್ಮ ಜವಾಬ್ದಾರಿಯನ್ನು ಅರಿತು, ಬೇರೆಯವರು ಮಾಡದ ಸಾಧನೆಯನ್ನು ಮಾಡುವ ಮೂಲಕ ದೇಶಕ್ಕೆ ಕೀರ್ತಿಯನ್ನು ತರಬೇಕು. ನಮ್ಮ ದೇಶದಲ್ಲಿ ಸಂಪನ್ಮೂಲಗಳ ಕೊರತೆಯಿದ್ದರೂ, ಭಾರತೀಯರು ನಾವು ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಎಷ್ಟೋ ಜನಕ್ಕೆ ನಮ್ಮ ದೇಶದಲ್ಲಿ ನಿಮಗೆ ಸಿಕ್ಕಿರುವ ಅವಕಾಶ ಸಿಕ್ಕಿಲ್ಲ. ಹೀಗಾಗಿ, ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ರಷ್ಯಾ, ಅಮೆರಿಕಾ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತೀವ್ರ ಪೈಪೋಟಿಯಲ್ಲಿದ್ದಾಗ ನಮ್ಮ ದೇಶವೂ ತ್ವರಿತವಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉತ್ತುಂಗಕ್ಕೆ ಏರುವಲ್ಲಿ ಶ್ರಮವಹಿಸಿದವರು ಡಾ.ವಿಕ್ರಮ್ ಸಾರಾ ಭಾಯ್. 50 ವರ್ಷಗಳ ಹಿಂದೆ ದೇಶದಲ್ಲಿ ಕೇವಲ ನಾಲ್ಕು ರೇಡಿಯೋ ಕೇಂದ್ರಗಳಿದ್ದವು. ಆದರೆ, ಈಗಿನ ಪರಿಸ್ಥಿತಿ ಹಿಂದಿನಂತಿಲ್ಲ. ದೇಶ- ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ನಮ್ಮ ದೇಶಕ್ಕಿದೆ. ಇದಕ್ಕೆ ಕಾರಣ ಶಿಕ್ಷಣ ಎಂದು ಅದರ ಮಹತ್ವವನ್ನು ವ್ಯಕ್ತಪಡಿಸಿದರು.
ಎಸ್ಆರ್ಎನ್ಜಿ ಸಂಪನ್ನಪ್ಪ ಧರ್ಮಸಂಸ್ಥೆಯವರು ಕೇವಲ ಒಂದು ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದಲ್ಲಿ ಅವಕಾಶ ನೀಡದೆ, ಎಲ್ಲರಿಗೂ ಸಮ್ಮತಿಸಿರುವುದು ಶ್ಲಾಘನೀಯವಾದದ್ದು, ಇನ್ನು, ವಿದ್ಯಾರ್ಜನೆಗಾಗಿ ನಗರಕ್ಕೆ ಬೇರೆ ಕಡೆಯಿಂದ ಬಂದಾಗ ಉಳಿದು ಕೊಳ್ಳಲು ಎಷ್ಟು ತೊಂದರೆಯಾಗುತ್ತದೆ ಎಂದು ನನಗೂ ಅನುಭವವಾಗಿದೆ ಎಂದರು.
ಕೈಲಾಸ ಆಶ್ರಮ ಮಹಾಸಂಸ್ಥಾನದ ಜಯೇಂದ್ರಪುರಿ ಮಹಾಸ್ವಾಮಿ ಮಾತನಾಡಿ, ಮನುಷ್ಯ ತಾನು ನ್ಯಾಯವಾಗಿ ಸಂಪಾದಿಸಿದ ಒಂದಂಶವನ್ನು ಕಷ್ಟದಲ್ಲಿರುವವರಿಗೆ ನೀಡಬೇಕು. ನೀಡಿದ್ದು ಸಾಕಾಗಲಿಲ್ಲವಲ್ಲ ಎಂಬ ಕೊರಗು ಮನುಷ್ಯನಲ್ಲಿ ಕಾಡಬೇಕು ಎಂದ ಅವರು, ಸಂಪ್ಪನ್ನಪ್ಪನವರು ಜಾತಿ ಧರ್ಮ ಬೇಧವಿಲ್ಲದೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ವಿದ್ಯಾರ್ಥಿ ನಿಲಯವನ್ನು ಒದಗಿಸಿ ಸಮಾಜದ ಏಳಿಗೆಗೆ ಶ್ರಮವಹಿಸಿದ್ದಾರೆ ಎಂದು ತಿಳಿಸಿದರು.