ಪುತ್ತೂರು: ಪಿಎಫ್ಐ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ ಕಾರ್ಯಕ್ರಮ

ಪುತ್ತೂರು, ಡಿ. 30: ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಿಎಫ್ಐ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಶನಿವಾರ ಪುತ್ತೂರಿನ ಅಶ್ಮೀ ಕಂಫರ್ಟ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾಡಿ ¸ಸುಕನ್ಯಾ ಡಿ.ಎನ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಮತ್ತು ಹಿಂದುಳಿದ ಶಾಲೆ ಬಿಟ್ಟಂತಹ ವಿದ್ಯಾರ್ಥಿಗಳನ್ನು ಮತ್ತೆ ಅವರಿಗೆ ವಿದ್ಯಾಭ್ಯಾಸವನ್ನು ನೀಡುವುದು ಉತ್ತಮ ಕೆಲಸವಾಗಿದ್ದು ಪಿಎಫ್ಐ ಸಂಘಟನೆಯು ಇಂತಹ ಮಾದರಿ ಕೆಲಸ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಮುಂದೆ ಉತ್ತಮ ಗುರಿಯೊಂದಿಗೆ ಸಹಕಾರ ನೀಡಿರುವ ಸಂಘಟನೆಯ ನೆನಪಿಸಿಕೊಂಡು ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಎಫ್ಐ ರಾಜ್ಯ ಸಮಿತಿ ಸದಸ್ಯರಾದ ಮೊಹಮ್ಮದ್ ಶರೀಫ್ ಅವರು ಶೈಕ್ಷಣಿಕ ಸಬಲೀಕರಣಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಮ್ಮಿಕೊಂಡಿರುವ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು ವಿದ್ಯಾರ್ಥಿಗಳು ಬದುಕಿನಲ್ಲಿ ಗುರಿ ನಿರ್ಣಯಿಸಿ ನಾಗರಿಕ ಸೇವೆಗಳ ಅಂತಹ ಉನ್ನತ ಹುದ್ದೆಗಳಿಗೆ ಪ್ರಯತ್ನಿಸಿ ಯಶಸ್ಸು ಗಳಿಸಬೇಕೆಂದು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರಿನ ವೈದ್ಯ ಡಾ. ನಝೀರ್ ಅಹ್ಮದ್, ನಗರಸಭಾ ಸದಸ್ಯೆ ಫಾತಿಮತ್ ಝುರಾ, ಪಿಎಫ್ಐ ಪುತ್ತೂರು ಜಿಲ್ಲಾಧ್ಯಕ್ಷ ಅಬೂಬಕ್ಕರ್ ರಿಝ್ವಾನ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಾಧಕರಾದ ಹಿರಿಯ ವಕೀಲ ಎಂ.ಪಿ ಅಬೂಬಕ್ಕರ್ ಹಾಗೂ ವಿದ್ಯಾರ್ಥಿನಿ ಫಾತಿಮಾತ್ ದಿಲ್ಶಾನಾ ಮತ್ತು ಯೋಧ ಝುಬೇರ್ ಹಳೆನೇರಂಕಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ 60 ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.