ಉದ್ಯಮಿಯ ಅಪಹರಿಸಿ, ಜೈಲಿಗೆ ಒಯ್ದು ಹಲ್ಲೆ ನಡೆಸಿದ ಮಾಜಿ ಸಂಸದ: ಆರೋಪ

ಅತೀಕ್ ಅಹ್ಮದ್
ಲಕ್ನೋ, ಡಿ. 31: “ಮಾಜಿ ಸಂಸದ ಅತೀಕ್ ಅಹ್ಮದ್ ಸಹಚರರು ನಗರದಿಂದ ನನ್ನನ್ನು ಅಪಹರಿಸಿದರು ಹಾಗೂ ದಿಯೋರಿಯಾ ಕಾರಾಗೃಹಕ್ಕೆ ಕರೆದೊಯ್ದು ಥಳಿಸಿ, ಆಸ್ತಿಯ ದಾಖಲೆ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದರು” ಎಂದು ಲಕ್ನೋದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಆರೋಪಿಸಿದ್ದಾರೆ.
‘ಅತೀಕ್ ಅಹ್ಮದ್, ಅವರ ಪುತ್ರ ಉಮರ್ ಹಾಗೂ ಅವರ ಐವರು ಸಹವರ್ತಿಗಳು ನನ್ನನ್ನು ಪಹರಿಸಿದರು ಹಾಗೂ ನನ್ನ ಮೇಲೆ ಹಲ್ಲೆ ನಡೆಸಿದರು” ಎಂದು ಉದ್ಯಮಿ ಮೋಹಿತ್ ಜೈಸ್ವಾಲ್ ಹೇಳಿದ್ದಾರೆ.
“ಡಿಸೆಂಬರ್ 26ರಂದು ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಸಹವರ್ತಿಗಳು ನನ್ನನ್ನು ಬಲವಂತವಾಗಿ ಅಹ್ಮದ್, ಅವರ ಪುತ್ರ ಹಾಗೂ ಇತರ 10-12 ದುಷ್ಕರ್ಮಿಗಳು ಇದ್ದ ದಿಯೋರಿಯಾ ಕಾರಾಗೃಹಕ್ಕೆ ಕರೆದೊಯ್ದರು. ನಾನು ಅಲ್ಲಿ 10-15 ಖಾಲಿ ಕಾಗದಕ್ಕೆ ಸಹಿ ಹಾಕಿದೆ. ಅವರು ಕಾರಾಗೃಹದಲ್ಲಿ ನನ್ನ ಫಾರ್ಚೂನ್ ವಾಹನವನ್ನು ಇರಿಸಿ ಹೋಗುವಂತೆ ಹೇಳಿದರು” ಎಂದು ದೂರಿನಲ್ಲಿ ಜೈಸ್ವಾಲ್ ಆರೋಪಿಸಿದ್ದಾರೆ.
ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಾಹನ ಪತ್ತೆ ಮಾಡಲು ತಂಡ ಕಳುಹಿಸಿಕೊಟ್ಟಿದ್ದೇವೆ. ರಾತ್ರಿ ಕಾರ್ಯಾಚರಣೆ ನಡೆಸಿ ಉದ್ಯಮಿಯನ್ನು ಅಪಹರಿಸಿದ ಗುಂಪಿನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಇತರ ಆರೋಪಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡ ರೂಪಿಸಲಾಗಿದೆ ಎಂದು ಲಕ್ನೋ ಎಸ್ಎಸ್ಪಿ ಕಲಾನಿಧಿ ನೈಥನಿ ಹೇಳಿದ್ದಾರೆ.





