ಒಬ್ಬಂಟಿ ವೃದ್ಧೆ ಮನೆಗೆ ನುಗ್ಗಿ ಹಣ ದೋಚಿ ಪರಾರಿ
ಬೆಂಗಳೂರು, ಡಿ.31: ಒಬ್ಬಂಟಿಯಾಗಿದ್ದ ವೃದ್ಧೆಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ.
ಕಲ್ಯಾಣ ನಗರದ ಮೂಡಲಪಾಳ್ಯದ ಮನೆಯೊಂದರಲ್ಲಿ ಕಳೆದ ರಾತ್ರಿ ವೇಳೆ ಒಂಟಿಯಾಗಿದ್ದ ಸುಜಾತಾ(68) ಎಂಬುವವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಆಕೆಯ ತಲೆಗೆ ಬಲವಾಗಿ ಹೊಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಮನೆಯ ಆಲಮೇರಾದಲ್ಲಿದ್ದ ಹಣ, 3.9 ಲಕ್ಷರೂ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಮಹಿಳೆಯನ್ನು ಮನೆಯೊಳಗೇ ಲಾಕ್ ಮಾಡಿ ಪರಾರಿಯಾಗಿದ್ದಾರೆ. ದಾವಣಗೆರೆಗೆ ಸುಜಾತಾ ಮಗ ಸಂತೋಷ್ ಕುಮಾರ್ ಮರುದಿನ ಮುಂಜಾನೆ 4 ಗಂಟೆ ವೇಳೆಗೆ ಮನೆಗೆ ಬಂದಿದ್ದು, ನಕಲಿ ಕೀ ಮೂಲಕ ಬಾಗಿಲು ತೆರೆದು ಒಳಬಂದಿದ್ದಾರೆ. ಬೆಳಗ್ಗೆ ನೋಡಿದಾಗ ತಾಯಿಯ ತಲೆಗೆ ಗಂಭೀರವಾಗಿ ಗಾಯವಾಗಿರುವುದನ್ನು ಗಮನಿಸಿದ್ದಾರೆ. ಈ ವೇಳೆ ತಾಯಿಯನ್ನು ವಿಚಾರಿಸಿದ ಸಂದರ್ಭದಲ್ಲಿ ವಿಷಯವನ್ನು ವಿವರಿಸಿದ್ದಾರೆ.
ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.