ಮಡಿಕೇರಿಯಲ್ಲಿ ಯುವಕ ಆತ್ಮಹತ್ಯೆ: ಪೊಲೀಸ್ ದೌರ್ಜನ್ಯದ ಆರೋಪ, ಪ್ರತಿಭಟನೆ

ಮಡಿಕೇರಿ, ಡಿ.31: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಂಗಳಾದೇವಿ ನಗರ ಬಡಾವಣೆಯಲ್ಲಿ ನಡೆದಿದ್ದು, ಅಲ್ಲಿನ ನಿವಾಸಿ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದ ಜಯಕುಮಾರ್ (24) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಯುವಕನ ಸಾವಿಗೆ ಪಿರಿಯಾಪಟ್ಟಣ ಪೊಲೀಸರು ನೀಡಿದ ಕಿರುಕುಳವೇ ಕಾರಣವೆಂದು ಆರೋಪಿಸಿದ ಯುವಕನ ಸಂಬಂಧಿಕರು ಮತ್ತು ದಲಿತ ಸಂಘಟನೆಗಳ ಪ್ರಮುಖರು, ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಪ್ರತಿಭಟನೆ ನಡೆಸಿದರು. ಕಿರುಕುಳ ನೀಡಿದ ಪೊಲೀಸರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸದೆ, ಮೃತದೇಹದ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಡಿ.9ರಂದು ಕುಶಾಲನಗರದ ಕೊಪ್ಪ ಸಮೀಪ ವೈದ್ಯ ದಿಲೀಪ್ ಎಂಬವರ ಕುತ್ತಿಗೆ ಬಿಗಿದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಮಂಗಳಾದೇವಿನಗರ ನಿವಾಸಿ ಆಟೋ ಚಾಲಕ ಕೃಷ್ಣ ಎಂಬಾತನನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದರು. ಡಿ.25ರಂದು ಆರೋಪಿ ಕೃಷ್ಣ ಅವರ ಮಕ್ಕಳಾದ ಜಯಕುಮಾರ ಮತ್ತು ಚಂದ್ರಕಾಂತ್ ಅವರನ್ನು ಕೂಡ ಪಿರಿಯಾಪಟ್ಟಣ ಪೊಲೀಸರು ವಿಚಾರಣೆಗಾಗಿ ಕೊಪ್ಪ ಸಮೀಪದ ಹೋಂಸ್ಟೆ ಒಂದಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ.
ಆ ಬಳಿಕ ಇಬ್ಬರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು. ಮತ್ತೆ 6 ಮಂದಿ ಪೊಲೀಸರ ತಂಡ ಆರೋಪಿ ಕೃಷ್ಣನ ಮನೆಗೆ ಆಗಮಿಸಿ ಮನೆ ಮಂದಿಯ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಂಡು ಬೆದರಿಕೆ ಹಾಕಿತ್ತು ಎಂದು ಆರೋಪಿಸಲಾಗಿದೆ. ಇದರಿಂದ ಮನ ನೊಂದ ಯುವಕ ಜಯಕುಮಾರ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತೈ ಮಾಡಿಕೊಂಡಿದ್ದಾನೆ ಎಂದು ಮೃತನ ಪೋಷಕರು ಮತ್ತು ದಲಿತ ಸಂಘಟನೆಗಳು ಆರೋಪಿಸಿ, ಜಿಲ್ಲಾಸ್ಪತ್ರೆಯ ಶವಾಗಾರದ ಮುಂಭಾಗ ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಮೃತನ ಸಂಬಂಧಿಕರು ಮತ್ತು ದಲಿತ ಸಂಘಟನೆಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು.
ಪಿರಿಯಾಪಟ್ಟಣ ಪೊಲೀಸರು ಅಮಾಯಕ ಯುವಕರಿಗೆ ವಿಚಾರಣೆ ಹೆಸರಲ್ಲಿ ದೈಹಿಕ ಕಿರುಕುಳ ನೀಡಿದ್ದಾರೆ. ಮಾತ್ರವಲ್ಲದೇ, ಅವರ ಮನೆಗೂ ಅಕ್ರಮ ಪ್ರವೇಶ ಮಾಡಿ ಬೆದರಿಕೆ ಹಾಕಿದಾರೆ. ಪೊಲೀಸರ ದೌರ್ಜನ್ಯ ಮತ್ತು ಬೆದರಿಕೆಗೆ ಹೆದರಿ ಜಯಕುಮಾರ್ ಆತ್ಮಹತೈ ಮಾಡಿಕೊಂಡಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಪಿರಿಯಾಪಟ್ಟಣ ಪೊಲೀಸರು ದೈಹಿಕ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಪಡೆಯಲಾ ಗುತ್ತದೆ. ಪ್ರತಿಭಟನೆಯನ್ನು ಕೈಬಿಟ್ಟು ಮೃತದೇಹದ ಮರಣೋತ್ತರ ಪರೀಕ್ಷೆಗೆ ಸಹಕರಿಸುವಂತೆ ಮನವಿ ಮಾಡಿದರು.
ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸುಂದರ್ ರಾಜ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಬಳಿಕ ಸಂಬಂಧಿಕರು ಪ್ರತಿಭಟನೆಯನ್ನು ಕೈಬಿಟ್ಟು ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿ ಕೊಟ್ಟರು. ಈ ಸಂದರ್ಭ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಷಣ್ಮುಗ, ಗ್ರಾಮಾಂತರ ಠಾಣಾಧಿಕಾರಿ ಚೇತನ್, ದಲಿತ ಸಂಘಟನೆಯ ಮೋಹನ್ ಮೌರ್ಯ, ಹೆಚ್.ಪಿ. ಹರೀಶ್ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.







