ಮದ್ಯವ್ಯಸನದಿಂದ ವಿಮುಕ್ತರನ್ನಾಗಿಸುವುದು ಅಧ್ಯಾತ್ಮದ ಕೆಲಸ: ಡಾ.ನಾ.ಮೊಗಸಾಲೆ

ಉಡುಪಿ, ಜ.1: ದಾರಿ ತಪ್ಪಿದವರನ್ನು ಸಮಾಜದಲ್ಲಿ ಸರಿ ದಾರಿಗೆ ತರುವುದೇ ನಿಜವಾದ ಅಧ್ಯಾತ್ಮದ ಕೆಲಸವಾಗಿದೆ. ಮದ್ಯವ್ಯಸನದಿಂದ ವಿಮುಕ್ತ ರನ್ನಾಗಿಸುವುದು ದೇವರ ಕೆಲಸ ಆಗಿದೆ. ಇಲ್ಲಿ ನಮ್ಮನ್ನು ನಾವೇ ಬದಲಾಯಿಸಿಕೊಳ್ಳಬೇಕೆ ಹೊರತು ಹೊರಗಿನವರಿಂದ ಸಾಧ್ಯವಿಲ್ಲ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಹೇಳಿದ್ದಾರೆ.
ಮುಂಬೈ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ದೊಡ್ಡಣಗುಡ್ಡೆ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ಗಳ ಸಂಯುಕ್ತ ಆಶ್ರಯದಲ್ಲಿ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಂಗಣದಲ್ಲಿ ಆಯೋಜಿಸಲಾದ 10 ದಿನಗಳ 26ನೆ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತ ನಾಡುತಿದ್ದರು.
ಇಂದಿನ ಒತ್ತಡದಲ್ಲಿ ಕರುಣೆ, ಸಂತೋಷ ಇಲ್ಲದ ಜಗತ್ತಿನಲ್ಲಿ ನಾವು ಬದುಕು ತ್ತಿದ್ದೇವೆ. ಈ ಮೂಲಕ ನಮ್ಮ ನಾವು ಉಳಿಸಿಕೊಳ್ಳಲಾಗದೆ ಕಳೆದುಕೊಂಡಿ ದ್ದೇವೆ. ಮದ್ಯವ್ಯಸನ ವಿಮುಕ್ತಿ ಶಿಬಿರದಲ್ಲಿ ಪಾಲ್ಗೊಂಡವರು ಮತ್ತೆ ವ್ಯಸನದತ್ತ ಮುಖ ಮಾಡುತ್ತಿರುವ ಕುರಿತು ಅಧ್ಯಯನಗಳು ನಡೆಯಬೇಕು. ಇದರಲ್ಲಿ ವ್ಯಸನಿಯದ್ದು ಮಾತ್ರ ತಪ್ಪಲ್ಲ. ಸಮಾಜ ಹಾಗೂ ಮನೆಯವರು ಕೂಡ ಭಾಗಿಗಳಾಗುತ್ತಾರೆ. ಆದುದರಿಂದ ಅವರಿಗೂ ಚಿಕಿತ್ಸೆಯ ಅಗತ್ಯ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.
ಡಾ.ಪಿ.ವಿ.ಭಂಡಾರಿ ಹಾಗೂ ನಾಗರಾಜ್ ಮೂರ್ತಿ ಬರೆದ ‘ಬಾಳುವಂಥ ಹೂವೇ ಬಾಡುವಾಸೆ ಏಕೆ?’ ಪುಸ್ತಕ ಬಿಡುಗಡೆಗೊಳಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿ.ಪಾಯಸ್ ಮಾತನಾಡಿ, ಕುಡಿತ ಚಟಕ್ಕೆ ನಮ್ಮಲ್ಲಿರುವ ದುರ್ಬಲ ಮನಸ್ಸೇ ಕಾರಣ ಹೊರತು ಕುತೂಹಲ, ಆಕರ್ಷಣೆ, ಮಿತ್ರರು, ಬದುಕಿನ ಸಮಸ್ಯೆಗಳಲ್ಲ. ವ್ಯಕ್ತಿ ಗಿಂತ ಆತನ ವ್ಯಕ್ತಿತ್ವ ಮುಖ್ಯವಾಗಿರುತ್ತದೆ. ಉತ್ತಮ ವ್ಯಕ್ತಿತ್ವದಿಂದ ಜನ ಗುರು ತಿಸಿ ಗೌರವಿಸುತ್ತಾರೆ. ಅಮಲು ರೋಗವನ್ನು ದ್ವೇಷಿಸಿ, ಅಮಲು ರೋಗಿಯನ್ನು ಪ್ರೀತಿಸಬೇಕು ಎಂದರು.
ರಾಜ್ಯದಲ್ಲಿ ಮಸೀದಿ, ಮಂದಿರ, ಚರ್ಚ್ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವೈನ್ಶಾಪ್ಗಳಿವೆ. ಕುಡಿತಕ್ಕೆ ಪ್ರೇರೆಪಿಸುವ ಸರಕಾರದಿಂದ ಕುಡಿತ ಬಿಡಿಸುವ ಯಾವುದೇ ಕಾರ್ಯಕ್ರಮಗಳಿಲ್ಲ. ಕುಡಿತ ಎಂಬುದು ಆಹಾರ ಅಲ್ಲ. ಅದು ನಮ್ಮನ್ನು ನಿಧಾನವಾಗಿ ಸಾಯುವ ವಿಷ. ಈ ಅಮಲು ರೋಗಕ್ಕೆ ಸರಿಯಾದ ಚಿಕಿತ್ಸೆ ನೀಡಿದರೆ ಅದರಿಂದ ಮುಕ್ತರಾಗಲು ಸಾಧ್ಯ ಎಂದು ಅವರು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಗುರುಮೂರ್ತಿ ಭಟ್, ಬಡಗಬೆಟ್ಟು ಸೊಸೈಟಿಯ ಜನರಲ್ ಮೆನೇಜರ್ ಇಂದ್ರಾಳಿ ಜಯಕರ ಶೆಟ್ಟಿ, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ನ ಸಿರಾಜ್ ಅಹ್ಮದ್, ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕಿ ಮೀನಾಕ್ಷಿ ವಿ.ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ಕುಡಿತ ತ್ಯಜಿಸಿದ ಭಾಸ್ಕರ್, ರಮೇಶ್ ಮಣಿಪಾಲ, ಅಶೋಕ್ ಮಲ್ಪೆ, ಜಾನ್ ಡಿಸೋಜ, ಸುನೀಲ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ.ಭಂಡಾರಿ ವಹಿಸಿದ್ದರು.
ಮನೋ ತಜ್ಞ ಡಾ.ವಿರೂಪಾಕ್ಷ ದೇವರಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಹಿತ್ ವಂದಿಸಿದರು. ವಿದ್ಯಾಶ್ರೀ ಎಂ.ಎಸ್. ಕಾರ್ಯ ಕ್ರಮ ನಿರೂಪಿಸಿದರು.