ಮೀನುಗಾರರ ತ್ವರಿತ ಪತ್ತೆಗೆ ಯತ್ನ: ಸಂಸದೆ ಶೋಭಾ
ಉಡುಪಿ, ಜ.1: ಮಲ್ಪೆಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಡಿ.13ರಂದು ತೆರಳಿ, ಡಿ.15ರ ರಾತ್ರಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನ ಹಾಗೂ ಅದರಲ್ಲಿದ್ದ ಮೀನುಗಾರರ ಪತ್ತೆಗೆ ಎಲ್ಲಾ ರೀತಿಯಲ್ಲಿ ನಿರಂತರವಾಗಿ ಪ್ರಯತ್ನ ಮುಂದುವರಿದಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಡಿ.15ರಂದು ರಾತ್ರಿ ಒಂದರ ಸುಮಾರಿಗೆ ಸುವರ್ಣ ತ್ರಿಭುಜ ಬೋಟಿನಿಂದ ಲಭಿಸಿದ ಕೊನೆಯ ವಯರ್ಲೆಸ್ ಸಂದೇಶ ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ದ್ದರಿಂದ ಮಹಾರಾಷ್ಟ್ರ ಸರಕಾರದ ಮೇಲೆ ಬೋಟ್ ಹಾಗೂ ಮೀನುಗಾರರ ತ್ವರಿತ ಪತ್ತೆಗೆ ಒತ್ತಡ ಹೇರಲಾಗಿದೆ. ತಾನು ಇಂದು ಮಹಾರಾಷ್ಟ್ರದ ಸಚಿವ ರಂಜಿತ್ ಪಾಟೀಲ್ ಹಾಗೂ ಆ ರಾಜ್ಯದ ಪೋಲೀಸ್ ಮಹಾನಿರ್ದೇಶಕ ರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅಲ್ಲದೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಈ ನಿಟ್ಟಿನಲ್ಲಿ ಈಗಾಗಲೇ ಮಹಾರಾಷ್ಟ್ರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್ರಿಗೆ ಪತ್ರ ಬರೆದಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇಂದು ತಾನು ಹೊಸದಿಲ್ಲಿಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರ ಆಪ್ತ ಕಾರ್ಯದರ್ಶಿಯನ್ನು ಭೇಟಿ ಮಾಡಿ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯವನ್ನು ತ್ವರಿತಗೊಳಿಸುವಂತೆ ಕೋರಿದ್ದೇನೆ. ಬುಧವಾರ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ನ್ನು ಭೇಟಿಯಾಗಲಿದ್ದೇನೆ ಎಂದರು.