ಪುತ್ತೂರು : ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
ಪುತ್ತೂರು, ಜ. 2 : ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಗಾರೆ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಗಾರೆ ಕಾರ್ಮಿಕ ಅಝೀಝುಲ್ ಶೇಖ್ (45) ಮೃತಪಟ್ಟವರು. ಸಂಪ್ಯದಲ್ಲಿ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಪಶ್ಚಿಮ ಬಂಗಾಳದ ಆರು ಮಂದಿ ಕಾರ್ಮಿಕರು ಸಾರಣೆ ಕೆಲಸ ನಿರ್ವಹಿಸುತ್ತಿದ್ದರು. ಈ ಕಟ್ಟಡದ ಸಾರಣೆ ಕೆಲಸ ನಿರ್ವಹಿಸುತ್ತಿದ್ದವರು ಅದೇ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ್ದರು. ಹೊಸ ವರ್ಷದ ಹಿನ್ನಲೆಯಲ್ಲಿ ಮಂಗಳವಾರ ಅವರು ರಜೆ ಮಾಡಿದ್ದರು. ರಾತ್ರಿ ಸೊಳ್ಳೆ ಕಾಟ ತಪ್ಪಿಸುವ ಸಲುವಾಗಿ ಕಟ್ಟಡದ ಬದಿಯಲ್ಲಿ ಸೊಳ್ಳೆ ಬತ್ತಿ ಹಚ್ಚುತ್ತಿದ್ದ ವೇಳೆ ಅಝೀಝುಲ್ ಶೇಖ್ ಆಕಸ್ಮಿಕವಾಗಿ ಆಯತಪ್ಪಿ ಕಟ್ಟಡದಿಂದ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆಯ ಕುರಿತು ರಾಖಿಬುಲ್ ಅವರು ನೀಡಿರುವ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story