ಗುಡಿಸಲಿಗೆ ಆಕಸ್ಮಿಕ ಬೆಂಕಿ: ಯುವತಿ ಸಜೀವ ದಹನ

ವಿಜಯಪುರ,ಜ.2: ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದ ಪರಿಣಾಮ ಗುಡಿಸಲು ಭಸ್ಮವಾಗಿ, ಅಡುಗೆ ಮಾಡುತ್ತಿದ್ದ ಯುವತಿ ಸಜೀವ ದಹನವಾದ ಘಟನೆ ಇಂಡಿ ತಾಲೂಕಿನ ಶಿರಗೂರ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
ಗ್ರಾಮದ ಭೀಮರಾಯ ಕೆಗಾಂವ ಅವರ ತೋಟದಲ್ಲಿನ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇದರಿಂದಾಗಿ ಗುಡಿಸಲು ಸುಟ್ಟು ಭಸ್ಮವಾಗಿದೆ.
ತೋಟದ ಮಾಲಕ ಭೀಮರಾಯ ಕೆಗಾಂವ ಹಾಗೂ ಅವರ ಮಗಳು ರೂಪಾ ಎಂದಿನಂತೆ ತೋಟದ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ರೂಪಾಗೆ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದ್ದಾಳೆ. ಅಲ್ಲದೇ, ಗುಡಿಸಲಿನಲ್ಲಿದ್ದ ಎರಡು ಲಕ್ಷ ರೂ., 20 ಗ್ರಾಂ ಚಿನ್ನ, 4 ಚೀಲ ಜೋಳ, 10 ಚೀಲ ಗೊಬ್ಬರ, 10 ಚೀಲ ತೊಗರಿ ಬೆಂಕಿಗೆ ನಾಶವಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣ ಕುರಿತು ಇಂಡಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





