ಕೊಲೆ ಪ್ರಕರಣ: 6 ವರ್ಷದ ಬಳಿಕ ಆರೋಪಿ ಬಂಧನ
![ಕೊಲೆ ಪ್ರಕರಣ: 6 ವರ್ಷದ ಬಳಿಕ ಆರೋಪಿ ಬಂಧನ ಕೊಲೆ ಪ್ರಕರಣ: 6 ವರ್ಷದ ಬಳಿಕ ಆರೋಪಿ ಬಂಧನ](https://www.varthabharati.in/sites/default/files/images/articles/2019/01/3/171025.jpg)
ಬೆಂಗಳೂರು, ಜ.3: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಬರೋಬ್ಬರಿ 6 ವರ್ಷಗಳ ಕಾಲ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆರೋಪಿಯೋರ್ವನನ್ನು ಇಲ್ಲಿನ ಕೆಂಪೇಗೌಡ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಂಪೇಗೌಡನಗರದ ರಾಘವೇಂದ್ರ(35) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಜೊತೆ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಈಗಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಏನಿದು ಪ್ರಕರಣ?: 2013ರಲ್ಲಿ ಕೆಂಪೇಗೌಡ ನಗರದ ಮನೆಯಲ್ಲಿ ಮಾನಸ ಒಂಟಿಯಾಗಿದ್ದಾಗ ಸಂಚು ರೂಪಿಸಿ ಒಳಗೆ ನುಗ್ಗಿದಲ್ಲದೆ, ಮಾನಸ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ 400 ಗ್ರಾಂ ಚಿನ್ನ 1 ಲಕ್ಷ ನಗದು ದೋಚಿ ಪರಾರಿಯಾಗಿದ್ದರು ಎನ್ನಲಾಗಿದೆ.
ಶಾಲೆಗೆ ಹೋಗಿದ್ದ ಮಗು ಮನೆಗೆ ಬಂದ ಬಳಿಕ ಮಾನಸ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಯಾವುದೇ ಸುಳಿವು ಕೂಡ ಪ್ರಕರಣದಲ್ಲಿ ಪತ್ತೆಯಾಗಿರಲಿಲ್ಲ. ಪ್ರಕರಣವನ್ನೇ ಕೈಬಿಟ್ಟಿದ್ದ ಪೊಲೀಸರಿಗೆ ಬೇರೊಂದು ಕೊಲೆ ಪ್ರಕರಣವನ್ನು ತನಿಖೆ ಮಾಡುವಾಗ ಸುಳಿವು ಸಿಕ್ಕಿತ್ತು. ನಂತರ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 6 ವರ್ಷದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.