ಹನೂರು: ಬಾಕಿ ವೇತನ ನೀಡಲು ಒತ್ತಾಯಿಸಿ ಪಟ್ಟಣ ಪಂ. ಎದುರು ಧರಣಿ

ಹನೂರು,ಜ.3: ಹನೂರು ಪಟ್ಟಣ ಪಂ. ವ್ಯಾಪ್ತಿಯ ವಾಟರ್ಪಟ್ಟಣ ಪಂ. ಮುಂದೆ ಧರಣಿ ಮ್ಯಾನ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಹೊರಗುತ್ತಿಗೆ ನೌಕರರು ಮತ್ತು 4 ಮಂದಿ ದಿನಗೂಲಿ ನೌಕರರಿಗೆ ಕಳೆದ 15 ತಿಂಗಳಿಂದ ಬಾಕಿ ಇರುವ ವೇತನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ವಾಟರ್ ಮ್ಯಾನ್ ಸಂಘದ ಅಧ್ಯಕ್ಷ ಎಂಬಿ ನಾಗಣ್ಣರವರ ನೇತೃತ್ವದಲ್ಲಿ ಹನೂರು ಪಟ್ಟಣ ಪಂ. ಮುಂದೆ ಧರಣಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾ ನಿರತರು, ಕಳೆದ ಹಲವು ವರ್ಷಗಳಿಂದ ಪಪಂ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ಗಳಾಗಿ ಕೆಲಸ ನಿರ್ವಹಿಸುತ್ತಿದ್ದು, ನಮಗೆ ಸುಮಾರು 15 ತಿಂಗಳಿಂದ ವೇತನ ನೀಡಿಲ್ಲ. ಇದನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೆ ನಾವು ದಿನದಲ್ಲಿ 8 ರಿಂದ 10 ಗಂಟೆ, ಕೆಲವೊಮ್ಮೆ ದಿನದ 24 ಗಂಟೆಯೂ ನೀರು ಸರಬರಾಜು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತೇವೆ. ಅಧಿಕಾರಿಗಳು ನಮಗೆ ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡದೇ ಇರುವುದರಿಂದ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಸಮಸ್ಯೆಯಾದಾಗ ಜೀವನ ನಿರ್ವಹಣೆ ಮಾಡುವುದಕ್ಕೆ ತೊಂದರೆಯಾಗುತ್ತದೆ ಎಂದು ಪಪಂ ಆಡಳಿತ ಮಂಡಳಿಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪಪಂ ಮುಖ್ಯಾಧಿಕಾರಿ ಎಸ್.ಡಿ ಮೋಹನ್ ಕೃಷ್ಣ ಪ್ರತಿಭಟನಾ ನಿರತರನ್ನು ಭೇಟಿಯಾಗಿ ಅವರ ಮನವಿ ಪತ್ರವನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.





