ಗೃಹ ಸಚಿವ ಎಂ.ಬಿ.ಪಾಟೀಲ್ ಜ.5ಕ್ಕೆ ಉಡುಪಿಗೆ
ಉಡುಪಿ, ಜ.3: ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಜ.5ರ ಅಪರಾಹ್ನ ಉಡುಪಿಗೆ ಆಗಮಿಸಲಿದ್ದು, ಮೀನುಗಾರ ಮುಖಂಡರನ್ನು, ಪೊಲೀಸ್ ಅದಿಕಾರಿಗಳನ್ನು ಹಾಗೂ ಕೋಸ್ಟಲ್ಗಾರ್ಡ್ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಜ.5ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ರಸ್ತೆ ಮಾರ್ಗದಲ್ಲಿ ಹೊರಟು ಯಲ್ಲಾಪುರ, ಕುಮಟಾ, ಭಟ್ಕಳ, ಕುಂದಾಪುರ ಮಾರ್ಗವಾಗಿ ಅಪರಾಹ್ನ 2:30ಕ್ಕೆ ಆಗಮಿಸುವ ಸಚಿವರು, 3 ಗಂಟೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಕೋಸ್ಟಲ್ಗಾರ್ಡ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುವರು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಅವರು, ಸಂಜೆ 4:45ಕ್ಕೆ ವಿವಿಧ ಮೀನುಗಾರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಂಜೆ 6 ಕ್ಕೆ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡುವ ಅವರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. 7:30ಕ್ಕೆ ರಸ್ತೆ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ನಿರ್ಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.