ವಿಟ್ಲ: ಮೆದುಳು ನಿಷ್ಕ್ರಿಯಗೊಂಡಾತನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ
ಸುಬ್ರಹ್ಮಣ್ಯದಲ್ಲಿ ಬೈಕ್ ಅಪಘಾತ

ಹರಿಣಾಕ್ಷ
ಮಂಗಳೂರು, ಜ.3: ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡ ಬಂಟ್ವಾಳದ ಬಸ್ ನಿರ್ವಾಹಕನ ಅಂಗಾಂಗವನ್ನು ಇನ್ನೊಬ್ಬರ ಬಾಳಿಗೆ ದಾನ ಮಾಡುವ ಮೂಲಕ ಈತನ ಕುಟುಂಬ ಮಾನವೀಯತೆ ಮೆರೆದಿದೆ.
ಬಂಟ್ವಾಳದ ವಿಟ್ಲ ಮಂಗಲಪದಲವು ನಿವಾಸಿ, ಬಸ್ ನಿರ್ವಾಹಕ ಹರಿಣಾಕ್ಷ (32) ಎಂಬವರು ಡಿ.31ರಂದು ಬೆಳಗ್ಗೆ ಸುಬ್ರಹ್ಮಣ್ಯದಲ್ಲಿ ಬೈಕ್ ಅಪಘಾತಕ್ಕೀಡಾಗಿದ್ದರು. ಅದರಲ್ಲಿ ಗಂಭೀರ ಗಾಯಗೊಂಡ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಏಟು ತಗುಲಿದ ಹಿನ್ನೆಲೆಯಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ವಿಚಾರವನ್ನು ಆಸ್ಪತ್ರೆ ವೈದ್ಯರು ಹರಿಣಾಕ್ಷನ ಮನೆಯವರಿಗೆ ತಿಳಿಸಿದ್ದರು. ಅಲ್ಲದೆ, ಅಂಗಾಂಗ ದಾನ ಮಾಡುವಂತೆ ತಿಳುವಳಿಕೆ ಮೂಡಿಸಿದ್ದರು.
ಈ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಹರಿಣಾಕ್ಷನ ಕುಟುಂಬ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅಂಗಾಂಗ ಅವಶ್ಯಕ ಇರುವ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಯಿತು. ಗುರುವಾರ ಬೆಳಗ್ಗೆ ಝೀರೋ ಟ್ರಾಫಿಕ್ನಲ್ಲಿ ವಿಮಾನ ನಿಲ್ದಾಣಕ್ಕೆ ಸಾಗಿಸಿ, ಅಲ್ಲಿಂದ ವಿಮಾನದಲ್ಲಿ ಹರಿಣಾಕ್ಷನ ಅಂಗಾಂಗವನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಯಿತು.
ಈತನ ಮೂತ್ರಪಿಂಡ ಮತ್ತು ಹೃದಯ ಕವಾಟವನ್ನು ಬೆಂಗಳೂರು ಹಾಗೂ ಮಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಯಿತು. ಹರಿಣಾಕ್ಷ ಉತ್ತಮ ಕೃಷಿಕನೂ ಆಗಿದ್ದು, ತಂದೆ ಸಂಜೀವ ಪೂಜಾರಿ, ತಾಯಿ ಹಾಗೂ ಐವರು ಸಹೋದರರಿಯರನ್ನು ಅಗಲಿದ್ದಾರೆ.