ಈ ಬಾರಿ ವಾರಾಣಾಸಿಯಿಂದ ಮೋದಿ ಸ್ಪರ್ಧೆ ಇಲ್ಲ?
![ಈ ಬಾರಿ ವಾರಾಣಾಸಿಯಿಂದ ಮೋದಿ ಸ್ಪರ್ಧೆ ಇಲ್ಲ? ಈ ಬಾರಿ ವಾರಾಣಾಸಿಯಿಂದ ಮೋದಿ ಸ್ಪರ್ಧೆ ಇಲ್ಲ?](https://www.varthabharati.in/sites/default/files/images/articles/2019/01/4/171174.gif)
ಹೊಸದಿಲ್ಲಿ, ಜ.4: ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ವಾರಾಣಾಸಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಇನ್ನೊಂದು ದೇಗುಲ ನಗರಿ ಪುರಿಯನ್ನು ಆಯ್ದುಕೊಳ್ಳಲಿದ್ದಾರೆ ಎಂದು ಬಿಜೆಪಿಯ ಒಡಿಶಾ ಶಾಸಕರೊಬ್ಬರು ಹೇಳಿದ್ದಾರೆ.
ಪದಂಬೂರು ಕ್ಷೇತ್ರದ ಬಿಜೆಪಿ ಶಾಸಕ ಪ್ರದೀಪ್ ಪುರೋಹಿತ್ ಅವರ ಮಾತನ್ನು ನಂಬುವುದಾದರೆ, ಮೋದಿ ವಾರಾಣಸಿ ಕೈಬಿಡಬೇಕಾಗುತ್ತದೆ. "ಮೋದಿ ಪುರಿಯಿಂದ ಸ್ಪರ್ಧಿಸುವ ಸಾಧ್ಯತೆ ಶೇಕಡ 90ರಷ್ಟು ಇದೆ" ಎಂದು ಪುರೋಹಿತ್ ಎಎನ್ಐಗೆ ತಿಳಿಸಿದರು.
"ಪ್ರಧಾನಿ 2014ರಲ್ಲಿ ಜಗನ್ನಾಥನ ಆಶೀರ್ವಾದ ಪಡೆದು ವಾರಾಣಾಸಿಯಿಂದ ಗೆದ್ದಿದ್ದರು. ಈ ಬಾರಿ ಮೋದಿ ಒಡಿಶಾದಿಂದ ಸ್ಪರ್ಧಿಸಬೇಕು ಎನ್ನುವುದು ರಾಜ್ಯದ ಜನರ ಅಪೇಕ್ಷೆ. ಪಕ್ಷದ ಮುಖಂಡರು ಹಾಗೂ ಸ್ವತಃ ಮೋದಿಯವರೇ ಪುರಿಯಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ" ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಸಂತ್ ಪಾಂಡಾ, ಮೋದಿಯವರನ್ನು ಪುರಿಯಿಂದ ಸ್ಪರ್ಧಿಸುವಂತೆ ರಾಜ್ಯ ಘಟಕ ಪ್ರಸ್ತಾವ ಮುಂದಿಟ್ಟಿದೆ ಎಂದು ಹೇಳಿದ್ದರು. ಆದರೆ ಇತ್ತೀಚೆಗೆ ಸಂದರ್ಶನದಲ್ಲಿ ಮೋದಿಯವರನ್ನು ಈ ಬಗ್ಗೆ ಕೇಳಿದಾಗ, ಉತ್ತರಿಸದೇ ಜಾರಿಕೊಂಡಿದ್ದರು. ಪುರಿಯಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಪ್ರಶ್ನಿಸಿದಾಗ, "ಮಾಧ್ಯಮ ಪ್ರತಿನಿಧಿಗಳು ಕೂಡಾ ಸ್ವಲ್ಪ ಕೆಲಸ ಮಾಡಬೇಕು" ಎಂದು ಹೇಳಿ ನುಣುಚಿಕೊಂಡಿದ್ದರು.