ಪ್ರಧಾನಿ ಮೋದಿಯ ವಿಕೃತ ಮನಸ್ಥಿತಿ ಪ್ರದರ್ಶನ: ದಿನೇಶ್ ಗುಂಡೂರಾವ್
ರೈತರ ಸಾಲಮನ್ನಾ ವಿಚಾರ
ಬೆಂಗಳೂರು, ಜ.4: ರೈತರ ಸಾಲಮನ್ನಾವನ್ನು ‘ಕ್ರುಯೆಲ್ ಜೋಕ್’ ಎಂದು ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಸುಳ್ಳು ಹೇಳುತ್ತಾ ಸಾಗಬೇಡಿ. ನಮ್ಮ ರಾಜ್ಯದಲ್ಲಿ ಮಾದರಿಯಾಗಿ ಸಾಲ ಮನ್ನಾ ಮಾಡಲಾಗಿದೆ. ಒಮ್ಮೆ ಇಲ್ಲಿಗೆ ಬಂದು ನೋಡಿ, ನಂತರ ಮಾತನಾಡಿ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ 8165 ಕೋಟಿ ರೂ.ಮೊತ್ತದ 50 ಸಾವಿರ ರೂ.ವರೆಗಿನ 22 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿದ್ದು ನಿಮಗೆ ಗೊತ್ತಿಲ್ಲವೇ? ಸುಮಾರು 10 ಲಕ್ಷ ಕೋಟಿ ರೂ.ಪೆಟ್ರೋಲ್ ಹಾಗೂ ಡಿಸೇಲ್ನಿಂದ ಬಂದ ಹಣದ ಲೆಕ್ಕವನ್ನೇ ಕೊಡದೇ ರೈತರ ಸಾಲವನ್ನು ನೀವು ಮನ್ನಾ ಮಾಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು 44 ಸಾವಿರ ಕೋಟಿ ರೂ.ಸಾಲ ಮನ್ನಾದಲ್ಲಿ 66 ಸಾವಿರ ರೈತರ 349 ಕೋಟಿ ರೂ.ಮೊತ್ತದ ‘ಋಣಮುಕ್ತ’ ಪತ್ರವನ್ನು ನೀಡಲಾಗಿದೆ. ಮುಂದಿನ ಒಂದು ವಾರದಲ್ಲಿ 1 ಲಕ್ಷ ರೈತರ 400 ಕೋಟಿ ರೂ., ರೈತರ ಸಾಲದ ಋಣಮುಕ್ತ ಪತ್ರವನ್ನು ನೀಡಲಾಗುವುದು. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಆಗದಿರುವುಷ್ಟು ನೀವು ದಿವಾಳಿಯಾಗಿದ್ದೀರಾ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ರೈತರ ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರಕಾರ ಇಷ್ಟೆಲ್ಲ ಮಾಡಿದ್ದರೂ ಯಾವ ನೈತಿಕತೆಯಿಂದ ‘ಕ್ರುಯೇಲ್ ಜೋಕ್’ ಎಂದು ಹೇಳಿದ್ದೀರಾ. ಇಷ್ಟೆಲ್ಲ ಮಾಹಿತಿಯನ್ನು ಮರೆಮಾಚಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ನಿಮಗೆ ಏನು ಹೇಳಬೇಕು. 2018-19ನೆ ಸಾಲಿನ ಬಜೆಟ್ನಲ್ಲಿ 6500 ಕೋಟಿ ರೂ., 2019-20ರಲ್ಲಿ 8656 ಕೋಟಿ ರೂ., 2020-21ರಲ್ಲಿ 7621 ಕೋಟಿ ರೂ., 2021-22ರಲ್ಲಿ 7131 ಕೋಟಿ ರೂ., ಹೀಗೆ ಸಾಲವನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಅಧಿಕಾರಕ್ಕೆ ಬಂದ ಎರಡೇ ದಿನಗಳಲ್ಲಿ ರಾಜಸ್ಥಾನದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 70 ಸಾವಿರ ಕೋಟಿ ರೂ.ಮೊತ್ತದ 2 ಲಕ್ಷ ರೂ.ವರೆಗಿನ 23.5 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಮಧ್ಯಪ್ರದೇಶದ ಸರಕಾರವು ಅಧಿಕಾರಕ್ಕೆ ಬಂದ ಎರಡೇ ದಿನಗಳಲ್ಲಿ 35 ಸಾವಿರ ಕೋಟಿ ರೂ.ಮೊತ್ತದ 2 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಛತ್ತೀಸ್ಗಡ ಸರಕಾರವು ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ 16.65 ಲಕ್ಷ ರೈತರ 6500 ಕೋಟಿ ರೂ.ಸಾಲವನ್ನು ಮನ್ನಾ ಮಾಡಲಾಗಿದೆ. ಪಂಜಾಬ್ ಸರಕಾರವು 3445 ಕೋಟಿ ರೂ.ಮೊತ್ತದ 4,17,387 ರೈತರ ಸಾಲವನ್ನು ಮನ್ನಾ ಮಾಡಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಮಂತ್ರಿ ಏನು ಸಾಧನೆ ಮಾಡದೆ, ಸುಳ್ಳು ಹೇಳುತ್ತಾ ಸಾಗುತ್ತಿದ್ದಾರೆ. ಸುಳ್ಳಿನ ಸರದಾರ ಅಂತಲೇ ಅವರನ್ನು ಕರೆಯಬಹುದು. ಕಪ್ಪುಹಣ ವಾಪಸ್, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಠಿ, ಆರ್ಥಿಕ ಅಭಿವೃದ್ಧಿ, ಗಂಗಾ ನದಿ ಶುದ್ಧೀಕರಣ ಸೇರಿದಂತೆ ಕೊಟ್ಟಿರುವ ಯಾವ ಭರವಸೆಯನ್ನು ಅವರು ಈಡೇರಿಸಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ನೀತಿಗೆಟ್ಟ ಕೀಳುಮಟ್ಟದ ಪ್ರಧಾನಿ
ರೈತರ ಸಾಲ ಮನ್ನಾ ಆಗೋದು ಪ್ರಧಾನಿ ಮೋದಿಗೆ ಬೇಕಿಲ್ಲ. ಇಂತಹ ನೀತಿಗೆಟ್ಟ, ಕೀಳುಮಟ್ಟದ ಪ್ರಧಾನಿಯನ್ನು ನಾನು ಎಂದೂ ನೋಡಿಲ್ಲ. ರೈತರ ಸಾಲಮನ್ನಾವನ್ನು ಲಾಲಿಪಪ್ಗೆ ಹೋಲಿಕೆ ಮಾಡಿದ್ದಾರೆ. ನಾವು ಸಂಕಷ್ಟದಲ್ಲಿರುವ ರೈತರಿಗೆ ಲಾಲಿಪಪ್ ಆದರೂ ನೀಡಿದ್ದೇವೆ. ನೀವು ಏನು ಕೊಟ್ಟಿದ್ದೀರಾ ಅನ್ನೋದನ್ನು ದೇಶದ ಜನತೆಗೆ ತಿಳಿಸಿ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ