ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಫೇಲ್ ಒಪ್ಪಂದದ ಕ್ರಿಮಿನಲ್ ತನಿಖೆ: ರಾಹುಲ್ ಗಾಂಧಿ
![ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಫೇಲ್ ಒಪ್ಪಂದದ ಕ್ರಿಮಿನಲ್ ತನಿಖೆ: ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಫೇಲ್ ಒಪ್ಪಂದದ ಕ್ರಿಮಿನಲ್ ತನಿಖೆ: ರಾಹುಲ್ ಗಾಂಧಿ](/images/placeholder.jpg)
ಹೊಸದಿಲ್ಲಿ, ಜ. 3: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಫೇಲ್ ಒಪ್ಪಂದದ ಕುರಿತು ಕ್ರಿಮಿನಲ್ ತನಿಖೆ ನಡೆಸಲಾಗುವುದು ಹಾಗೂ ಅಪರಾಧಿಗಳನ್ನು ಶಿಕ್ಷಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಸತ್ತಿನ ಹೊರಗೆ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಬಹುಕೋಟಿ ಯುದ್ಧ ವಿಮಾನ ಖರೀದಿ ಕುರಿತ ಕಾಂಗ್ರೆಸ್ ಎತ್ತಿದ ಪ್ರಶ್ನೆಗೆಳಿಗೆ ರಕ್ಷಣಾ ಸಚಿವರು ಉತ್ತರ ನೀಡಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್ ಚರ್ಚೆಯಿಂದ ದೂರ ಓಡಿ ಹೋಗುತ್ತಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ದೀರ್ಘ ಭಾಷಣ ಮಾಡಿ ನನ್ನನ್ನು ನಿಂದಿಸುತ್ತಿದ್ದಾರೆ. ಆದರೆ, ನನ್ನ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ ಎಂದು ಅವರು ಹೇಳಿದರು. ರಕ್ಷಣಾ ಸಚಿವೆ ಪ್ರಧಾನಿ ಅವರ ಪರವಾಗಿ ಮಾತನಾಡುವ ಸಂದರ್ಭ ಈ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಾವು ಹಾಗೂ ಪ್ರತಿಪಕ್ಷಗಳು ಬಯಸುತ್ತಿವೆ ಎಂದು ಅವರು ತಿಳಿಸಿದರು.
ವಾಯು ಪಡೆಗೆ ಅಗತ್ಯ ಇರುವ 126 ರಫೇಲ್ ಯುದ್ಧ ವಿಮಾನದ ಬೆಲೆಯನ್ನು 526 ಕೋ. ರೂ.ನಿಂದ 1,000 ಕೋ. ರೂ.ಗೆ ಏರಿಸಲು ಯಾರು ನಿರ್ಧರಿಸಿದರು ?., ವಾಯುಪಡೆ, ರಕ್ಷಣಾ ಸಚಿವಾಲಯವೇ? ಅಥವಾ ಪ್ರಧಾನ ಮಂತ್ರಿಯೇ ? ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಸಿದವರು ಯಾರು ?, ಅನಿಲ್ ಅಂಬಾನಿ ಅವರಿಗೆ ಗುತ್ತಿಗೆ ನೀಡಿದವರು ಯಾರು ? ಎಂದು ಅವರು ಪ್ರಶ್ನಿಸಿದರು. ‘‘ಭ್ರಷ್ಟಾಚಾರದೊಂದಿಗೆ ರಫೇಲ್ ಯುದ್ಧ ವಿಮಾನದ ಗುತ್ತಿಗೆಯನ್ನು ಅನಿಲ್ ಅಂಬಾನಿಗೆ ನೀಡುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿರುವುದರ ಬಗ್ಗೆ ಕೂಡ ಪ್ರಧಾನಿ ಅವರು ತನಿಖೆ ನಡೆಸಬೇಕು’’ ಎಂದು ಅವರು ಆಗ್ರಹಿಸಿದರು.
ರಫೇಲ್ ಕಡತಗಳಿಂದ ಕೊಳಕು ರಹಸ್ಯ, ಭ್ರಷ್ಟಾಚಾರ ಹಾಗೂ ದುಷ್ಕೃತ್ಯ ಹೊರಬಿದ್ದಿದೆ ಎಂದು ಹೇಳಿದ ಅವರು, ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸಿದರು. ಕತರ್ ಹಾಗೂ ಈಜಿಪ್ಟ್ಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್ ಯುದ್ಧ ವಿಮಾನಕ್ಕೆ ಅತ್ಯಧಿಕ ಬೆಲೆ ನೀಡಿದ್ದಾರೆ. ಯುರೋಫೈಟರ್ ನೀಡಿದ ಕಡಿತದ ಕೊಡುಗೆ ನಿರಾಕರಿಸಿ ಭಾರತದ ಹಿತಾಸಕ್ತಿಯನ್ನು ಅವರು ಕಡೆಗಣಿಸಿದ್ದಾರೆ ಎಂದು ರಾಹುಲ್ ಗಾಂಧಿ ವರದಿಯೊಂದನ್ನು ಉಲ್ಲೇಖಿಸಿ ತಿಳಿಸಿದ್ದಾರೆ.