ಕೇರಳ: ಸಿಪಿಎಂ ಶಾಸಕ, ಬಿಜೆಪಿ ಸಂಸದನ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ
![ಕೇರಳ: ಸಿಪಿಎಂ ಶಾಸಕ, ಬಿಜೆಪಿ ಸಂಸದನ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ ಕೇರಳ: ಸಿಪಿಎಂ ಶಾಸಕ, ಬಿಜೆಪಿ ಸಂಸದನ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ](https://www.varthabharati.in/sites/default/files/images/articles/2019/01/5/171337.jpeg)
ತಿರುವನಂತಪುರ, ಜ.5: ತಲಶ್ಶೇರಿ ಶಾಸಕ ಹಾಗೂ ಸಿಪಿಎಂ ಮುಖಂಡ ಎ.ಎನ್. ಶಂಶೀರ್ ಮನೆ ಮೇಲೆ ಶುಕ್ರವಾರ ಮಧ್ಯರಾತ್ರಿ ಕಚ್ಚಾ ಬಾಂಬ್ ಎಸೆದಿರುವ ಘಟನೆ ನಡೆದಿದೆ. ಈ ಘಟನೆ ನಡೆದ ಬೆನ್ನಿಗೇ ಬಿಜೆಪಿ ರಾಜ್ಯಸಭಾ ಸಂಸದ ವಿ.ಮುರಳೀಧರನ್ ಮನೆ ಮೇಲೂ ಪ್ರತಿ ದಾಳಿ ನಡೆದಿದೆ.
ಬಿಜೆಪಿ ಸಂಸದ ವಿ.ಮುರಳೀಧರನ್ ಅವರ ಕಣ್ಣೂರು ಜಿಲ್ಲೆಯ ತಲಶ್ಶೇರಿಯಲ್ಲಿರುವ ಮನೆ ಮೇಲೆ ಬಾಂಬು ದಾಳಿ ನಡೆದಿದೆ. ಈ ವೇಳೆ ಮುರಳೀಧರನ್ ಕುಟುಂಬ ಸದಸ್ಯರು ಮನೆಯಲ್ಲಿ ನಿದ್ರಿಸುತ್ತಿದ್ದರು. ಘಟನೆಯಿಂದ ಗಾಯವಾದ ವರದಿಯಾಗಿಲ್ಲ.
ದಾಳಿಯ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಮುರಳೀಧರನ್ ಆರೋಪಿಸಿದ್ದಾರೆ.
ದುಷ್ಕರ್ಮಿಗಳಿಬ್ಬರು ರಾತ್ರಿ 10:15ರ ಸುಮಾರಿಗೆ ಬೈಕ್ನಲ್ಲಿ ಬಂದು ತಲಶ್ಶೇರಿಯಲ್ಲಿರುವ ಸಿಪಿಎಂ ಶಾಸಕ ಶಂಶೀರ್ ಮನೆ ಮೇಲೆ ಕಚ್ಚಾ ಬಾಂಬು ಎಸೆದು ಪರಾರಿಯಾಗಿದ್ದಾರೆ. ಈ ದಾಳಿಗೆ ಆರ್ಎಸ್ಎಸ್ ಕಾರಣ ಎಂದು ಸಿಪಿಎಂ ನಾಯಕ ಆರೋಪಿಸಿದ್ದಾರೆ.
40 ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ ಬಳಿಕ ರಾಜ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಂಶೀರ್ ಕಣ್ಣೂರಿನಲ್ಲಿ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಈ ದಾಳಿ ನಡೆದಿದೆ. ‘‘ರಾಜ್ಯದಲ್ಲಿ ಹಿಂಸಾಚಾರ ಹೆಚ್ಚಿಸಲು ಆರ್ಎಸ್ಎಸ್ ಪಿತೂರಿ ನಡೆಸುತ್ತಿದೆ. ರಾಜ್ಯದ ಶಾಂತಿ ವಾತಾವರಣವನ್ನು ಕೆಡಿಸಲು ಆರ್ಎಸ್ಎಸ್ ಯತ್ನಿಸುತ್ತಿದೆ ಎಂದು ಶಂಶೀರ್ ಆರೋಪಿಸಿದ್ದಾರೆ.
ದಾಳಿಗೆ ಸಂಬಂಧಿಸಿ 22 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.