ಲೋಕಸಭೆ ಚುನಾವಣೆ: ಏಕಾಂಗಿ ಸ್ಪರ್ಧೆಗೆ ಸಜ್ಜಾಗಲು ಮಹಾರಾಷ್ಟ್ರ ಬಿಜೆಪಿಗೆ ಶಾ ಸೂಚನೆ
![ಲೋಕಸಭೆ ಚುನಾವಣೆ: ಏಕಾಂಗಿ ಸ್ಪರ್ಧೆಗೆ ಸಜ್ಜಾಗಲು ಮಹಾರಾಷ್ಟ್ರ ಬಿಜೆಪಿಗೆ ಶಾ ಸೂಚನೆ ಲೋಕಸಭೆ ಚುನಾವಣೆ: ಏಕಾಂಗಿ ಸ್ಪರ್ಧೆಗೆ ಸಜ್ಜಾಗಲು ಮಹಾರಾಷ್ಟ್ರ ಬಿಜೆಪಿಗೆ ಶಾ ಸೂಚನೆ](https://www.varthabharati.in/sites/default/files/images/articles/2019/01/5/171343.jpg)
ಹೊಸದಿಲ್ಲಿ, ಜ.5: ಶಿವಸೇನೆಯೊಂದಿಗೆ ಮೈತ್ರಿ ಬಗ್ಗೆ ಯೋಚಿಸದೇ 2019ರ ಲೋಕಸಭಾ ಚುನಾವಣೆಗೆ ತಕ್ಷಣವೇ ಸಜ್ಜಾಗುವಂತೆ ಮಹಾರಾಷ್ಟ್ರದ ಬಿಜೆಪಿ ಘಟಕಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ. ಈ ಮೂಲಕ ಈ ಬಾರಿಯ ಲೋಕಸಭೆಯಲ್ಲಿ ಏಕಾಂಗಿ ಸ್ಪರ್ಧೆಯ ಸುಳಿವು ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ಮಹಾರಾಷ್ಟ್ರದ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶಾ, ಚುನಾವಣಾ ಪೂರ್ವ ಸೀಟು ಹಂಚಿಕೆಗೆ ಸಂಬಂಧಿಸಿ ಶಿವಸೇನೆಯ ಒತ್ತಡಕ್ಕೆ ಪಕ್ಷ ಮಣಿಯುವುದಿಲ್ಲ. ಸೀಟು ಹಂಚಿಕೆಯಲ್ಲಿ ಬಿಹಾರ ಮಾದರಿ ಅನುಸರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
‘‘ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಿತ್ರಪಕ್ಷ ಶಿವಸೇನೆಯೊಂದಿಗೆ ಚುನಾವಣಾಪೂರ್ವ ಮೈತ್ರಿಗೆ ಅಮಿತ್ ಶಾ ಉತ್ಸುಕರಾಗಿದ್ದಾರೆ. ಆದರೆ, ಮೈತ್ರಿ ರಚನೆ ಅಸಾಧ್ಯ, ಏಕಾಂಗಿ ಸ್ಪರ್ಧೆಗೆ ಬಿಜೆಪಿ ಉತ್ತಮ ತಯಾರಿ ನಡೆಸಿದೆ. ಸೀಟು ಹಂಚಿಕೆಗೆ ಸಂಬಂಧಿಸಿ ಶಿವಸೇನೆಯ ಅವಿವೇಕದ ಬೇಡಿಕೆಗೆ ಸ್ಪಂದಿಸರಲು ನಿರ್ಧರಿಸಲಾಗಿದೆ’’ ಎಂದು ಬಿಜೆಪಿ ಹಿರಿಯ ಸಂಸದರೊಬ್ಬರು ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 48 ಕ್ಷೇತ್ರಗಳಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 23ರಲ್ಲಿ ಜಯ ಸಾಧಿಸಿತ್ತು. ಶಿವಸೇನೆ 22 ಕ್ಷೇತ್ರಗಳ ಪೈಕಿ 18ರಲ್ಲಿ ಜಯ ದಾಖಲಿಸಿತ್ತು. ತಲಾ ಒಂದು ಸೀಟನ್ನು ಆರ್ಪಿಐ, ಸ್ವಾಭಿಮಾನಿ ಶೇತ್ಕಾರಿ ಪಕ್ಷ ಹಾಗೂ ರಾಷ್ಟ್ರೀಯ ಸಮಾಜ ಪಕ್ಷಗಳಂತಹ ಸಣ್ಣ ಪಕ್ಷಕ್ಕೆ ನೀಡಲಾಗಿತ್ತು. ಈ ಪೈಕಿ ಸ್ವಾಭಿಮಾನಿ ಶೇತ್ಕಾರಿ ಪಕ್ಷ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿತ್ತು.
2014ರ ಅಕ್ಟೋಬರ್ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಸೇನೆ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಬಿಜೆಪಿ 122 ಸೀಟುಗಳನ್ನು ಜಯಿಸಿದ್ದರೆ, ಸೇನೆ 63 ಸೀಟು ಜಯಿಸಿತ್ತು. ಚುನಾವಣೋತ್ತರ ಮೈತ್ರಿಕೂಟದಲ್ಲಿ ಸೇನೆಯ ಬೆಂಬಲದಿಂದ ಬಿಜೆಪಿ ಸರಕಾರ ರಚಿಸಿದೆ.