ಮೀನುಗಾರರ ಪ್ರತಿಭಟನೆ ಹಿನ್ನೆಲೆ: ಮದ್ಯ ಮಾರಾಟ ನಿಷೇಧ
ಉಡುಪಿ, ಜ.5: ಮಲ್ಪೆ ಮೀನುಗಾರರ ಸಂಘದ ವತಿಯಿಂದ ಕಾಣೆಯಾದ ‘ಸುವರ್ಣ ತ್ರಿಭುಜ’ ಬೋಟ್ ಮತ್ತು ಅದರಲ್ಲಿರುವ 7 ಮೀನುಗಾರರು ಇನ್ನೂ ಪತ್ತೆಯಾಗದ ಕಾರಣ ಜ.6ರಂದು ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಕರಾವಳಿಯ ಸಮಸ್ತ ಮೀನುಗಾರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆ ಹಾಗೂ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಜ.6ರಂದು ಇಡೀ ದಿನ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ರತಿಭಟನಕಾರರು ಅಂದು ಬೆಳಗ್ಗೆ 8 ಗಂಟೆಗೆ ಮಲ್ಪೆಬಂದರಿನಿಂದ ಕಾಲ್ನಡಿಗೆಯಲ್ಲಿ ಹೊರಟು ಕಲ್ಮಾಡಿಯಿಂದ ಆದಿ ಉಡುಪಿ ಮೂಲಕ ಕರಾವಳಿ ಜಂಕ್ಷನ್ ತಲುಪಿ, ಅಲ್ಲಿಂದ ಅಂಬಲಪಾಡಿ ಜಂಕ್ಷನ್ ರಾ.ಹೆ.66ರಲ್ಲಿ ರಸ್ತೆ ತಡೆ ನಡೆಸುವುದರಿಂದ ಕೆಲವು ಪ್ರತಿಟನಕಾರರು ಪಾನಮತ್ತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಇದರಿಂದ ಸ್ಥಳದಲ್ಲಿ ಅಹಿತಕರ ಘಟನೆ ನಡೆದು ಕಾನೂನು ಸುವ್ಯವಸ್ಥೆಗೆ ಧ್ಕೆ ಉಂಟಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ಮಲ್ಪೆಠಾಣಾ ವ್ಯಾಪ್ತಿಯ ಗ್ರಾಮಗಳಾದ ಕೊಡವೂರು, ಮೂಡುತೋನ್ಸೆ, ಪಡುತೋನ್ಸೆ, ಕೆಳಾರ್ಕಳಬೆಟ್ಟು, ತೆಂಕನಿಡಿಯೂರು, ಬಡಾನಿಡಿಯೂರು, ಕಿದಿಯೂರು, ಕಡೆಕಾರು ಗ್ರಾಪಂ ವ್ಯಾಪ್ತಿ ಹಾಗೂ ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಮೂಡನಿಡಂಬೂರು, ಬಡಗುಬೆಟ್ಟು, ಶಿವಳ್ಳಿ, ಪುತ್ತೂರು, ಕೊರಂಗ್ರಪಾಡಿ, ಅಂಬಲಪಾಡಿ, ಕುತ್ಪಾಡಿ ಒಳಪಟ್ಟಂತೆ ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಹೊಟೇಲು, ಕ್ಲಬ್, ಹಾಗೂ ಮದ್ಯದಂಗಡಿಗಳಲ್ಲಿ ಜನವರಿ 5ರ ರಾತ್ರಿ 8ರಿಂದ ಜನವರಿ 6ರ ರಾತ್ರಿ 8ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೆೀರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.







