ಅಖಿಲ ಭಾರತ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ: ಬಂದರು ಹಮಾಲಿ ಕಾರ್ಮಿಕರಿಂದ ಮೆರವಣಿಗೆ

ಮಂಗಳೂರು, ಜ. 5: ದೇಶಾದ್ಯಂತ ಜ.8 ಮತ್ತು 9ರಂದು ನಡೆಯಲಿರುವ ಕಾರ್ಮಿಕರ ಮುಷ್ಕರದ ಪ್ರಚಾರಾರ್ಥವಾಗಿ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಶನಿವಾರ ಮೆರವಣಿಗೆ ಮತ್ತು ಪ್ರಚಾರ ಸಭೆ ನಡೆಸಿದರು.
ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ಆರಂಭಗೊಳ್ಳುತ್ತಿದ್ದಂತೆಯೇ ಕಾರ್ಮಿಕರ ಕಟ್ಟೆ ಬಳಿ ಜಮಾಯಿಸಿದ ಕಾರ್ಮಿಕರು ಪೋರ್ಟ್ ರಸ್ತೆ, ಕೃಷ್ಣಮಿಲ್ ರಸ್ತೆ, ಜೆ.ಎಂ ರಸ್ತೆ, ಕೆಸಿಸಿಐ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕಾರ್ಮಿಕರ ಕಟ್ಟೆ ಬಳಿ ಸಭೆ ಸೇರಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್ ಅವರು ನರೇಂದ್ರ ಮೋದಿ ಸರಕಾರ ಕಾರ್ಪೊರೇಟ್ ಕಂಪೆನಿಗಳ ಹಿತಕಾಯುವ ಸಲುವಾಗಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡಿದೆ. ಸ್ವಿಸ್ ಬ್ಯಾಂಕಲ್ಲಿರುವ ಕಪ್ಪುಹಣವನ್ನು ತಂದು ಬಡವರ ಖಾತೆಗೆ 15ಲಕ್ಷ ರೂ. ಹಾಕುತ್ತೇನೆ ಎಂದು ಮುಗ್ದ ಜನರನ್ನು ನಂಬಿಸಿ ಅಧಿಕಾರಕ್ಕೇರಿದ ನಂತರ ದೇಶದ ರೈತರು, ಕಾರ್ಮಿಕರಿಗೆ ಸಾಲುಸಾಲು ಸಂಕಷ್ಟಗಳ ಕೊಡುಗೆಗಳನ್ನು ಕೊಟ್ಟರೇ ವಿನಃ ಅಚ್ಚೇದಿನ್ ಕೊಡಲಿಲ್ಲ ಎಂದು ಆಪಾದಿಸಿದರು.
ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್,ದ.ಕ ಜಿಲ್ಲಾ ಹಮಾಲಿ ಕಾರ್ಮಿಕರ ಫೆಡರೇಶನ್ನ ಜೊತೆ ಕಾರ್ಯದರ್ಶಿ ರಫೀಕ್ ಹರೇಕಳ ಮಾತನಾಡಿದರು.
ಸಂಘದ ಉಪಾಧ್ಯಕ್ಷರಾದ ಹಸನ್ ಮೋನು, ಮುಹಮ್ಮದ್ ಮೋನು, ಕೋಶಾಧಿಕಾರಿ ಹರೀಶ್ ಕೆರೆಬೈಲು, ಸಂಘದ ಮುಖಂಡರಾದ ಹಂಝ ಜಪ್ಪಿನಮೊಗರು, ಮಜೀದ್ ಉಳ್ಳಾಲ, ಫಾರೂಕ್ ಉಳ್ಳಾಲ, ಮಾಧವ ಕಾವೂರು, ಎಲ್ಲಪ್ಪ, ಮೊಯ್ದಿನ್, ಶರೀಫ್ ಕುಪ್ಪೆಪದವು, ಸಿದ್ದೀಕ್ ಬೆಂಗರೆ ಮತ್ತು ಡಿವೈಎಫ್ಐ ಮುಖಂಡರಾದ ಎ.ಬಿ. ನೌಷಾದ್, ಹನೀಫ್ ಬೆಂಗರೆ ಉಪಸ್ಥಿತರಿದ್ದರು.







